Bengaluru Rains : ಮಾಂಡೌಸ್ ಪ್ರಭಾವದಿಂದ ಬೆಂಗಳೂರಿಗೆ ಡಿ.11ರಂದು ತೀವ್ರ ಮಳೆ: ಹಳದಿ ಎಚ್ಚರಿಕೆ
ಬೆಂಗಳೂರು, ಡಿಸೆಂಬರ್ 09: ಬಂಗಾಳಕೊಲ್ಲಿ ಸೃಷ್ಟಿಯಾದ 'ಮಾಂಡೌಸ್' ಚಂಡಮಾರುತದ ಭೀತಿ ರಾಜ್ಯ ರಾಜಧಾನಿ ಬೆಂಗಳೂರಿಗೆ ತಟ್ಟಲಿದೆ. ಪರಿಣಾಮವಾಗಿ ನಗರದಲ್ಲಿ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ತಿಳಿಸಿದೆ.
ಚಂಡಮಾರತವು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಕರಾವಳಿಗೆ ಬಂದು ಅಪ್ಪಳಿಸಿದೆ. ಅದರ ಗಾಳಿಯ ವೇಗ ಗಂಟೆಗೆ ಸುಮಾರು 75ಕಿ.ಮೀ.ವರೆಗೆ ಇದೆ. ಈ ಕಾರಣದಿಂದ ಬೆಂಗಳೂರಿನಲ್ಲಿ ನಿಧಾನವಾಗಿ ಮಳೆಯ ವಾತಾವರಣ ಸೃಷ್ಟಿಯಾಗುತ್ತಿದೆ. ಶುಕ್ರವಾರದಿಂದ ಎರಡು ದಿನ ನಗರದಲ್ಲಿ ತುಂತುರು ಮಳೆ, ಒಂದೆರಡು ಕಡೆಗಳಲ್ಲಿ ಹಗುರ ಮಳೆ ಬೀಳಲಿದೆ.
ನಂತರ ಭಾನುವಾರ ಡಿಸೆಂಬರ್ 11ರಂದು ಗುಡುಗು ಸಹಿತ ಭಾರಿ ಮಳೆ ಆಗಲಿದೆ. ಅಂದು ಬೆಂಗಳೂರು ನಗರ ಜಿಲ್ಲೆಗೆ 'ಹಳದಿ' ಎಚ್ಚರಿಕೆ ನೀಡಲಾಗಿದೆ. ನಿರೀಕ್ಷೆಯಂತೆ ಈ ಮಳೆ ಆಗಿದ್ದೇ ಆದರೆ ನಗರದ ಜನಜೀವನ ಸ್ವಲ್ಪ ಮಟ್ಟಿಗೆ ಅಸ್ತವೆಸ್ತವಾಗಲಿದೆ. ತಗ್ಗು ಪ್ರದೇಶದ ಮನೆಗಳ ನಿವಾಸಿಗಳು ಭಯದಲ್ಲಿದ್ದಾರೆ.
ಕಳೆದ ಮೂರು ನಾಲ್ಕು ದಿನದಿಂದ ನಗರದಲ್ಲಿ ಸೂರ್ಯನ ದರ್ಶನವೇ ಇಲ್ಲದಾಗಿದ್ದು, ಶುಕ್ರವಾರವಂತೂ ಇಡಿ ದಿನ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ. ನಗರದಲ್ಲಿ ಬೆಳಗ್ಗೆ ಮತ್ತು ರಾತ್ರಿ ವೇಳೆ ಕಂಡು ಬರುತ್ತಿರುವ ಚಳಿ ಮುಂದಿನ ಕೆಲವು ದಿನ ಹೀಗೆ ಮುಂದುವರಿಯಲಿದೆ.
ಶುಕ್ರವಾರ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಕನಿಷ್ಠ 16.6ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 26ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ರೀತಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನಿಷ್ಠ 18.5ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ 26.6ಡಿಗ್ರಿ ಸೆಲ್ಸಿಯಸ್ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕನಿಷ್ಠ 18.2 ಡಿಗ್ರಿ ಸೆಲ್ಸಿಯಸ್ ಕಮತ್ತು ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ.
ಡಿಸೆಂಬರ್ 16ರವರೆಗೆ ನಗರದಲ್ಲಿ ತುಂತುರು ಮಳೆ ಮುಂದುವರಿಯಲಿದೆ. ನಂತರ ನಗರದ ವಾತಾವರಣ ಸಹಜ ಸ್ಥಿತಿಗೆ ಮರಳಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ.