ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗೆ ಒಡೆಯರ್ ಎಕ್ಸ್ಪ್ರೆಸ್ವೇ ಎಂದು ಹೆಸರಿಡಲು ಮನವಿ
ಬೆಂಗಳೂರು, ಡಿ. 26: ರಾಜ್ಯದಲ್ಲಿ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇಗೆ ಹೆಸರು ಇಡುವುದೆ ಒಂದು ರಾಜಕಾರಣವಾಗಿ ಬದಲಾಗಿದೆ. ಈಗಾಗಲೇ ಈ ಹೆದ್ದಾರಿಗೆ ಕಾವೇರಿ ಎಕ್ಸ್ಪ್ರೆಸ್ವೇ ಎಂದು ಹೆಸರಿಡಲು ಮನವಿ ಮಾಡಲಾಗಿತ್ತು. ಈಗ ಕಾಂಗ್ರೆಸ್ ನಾಯಕರು ಒಡೆಯರ್ ಎಕ್ಸ್ಪ್ರೆಸ್ವೇ ಎಂದು ಹೆಸರಿಡಲು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಾವುಗಳು ಸೂಚಿಸಿದ ಹೆಸರನ್ನೇ ಹೆದ್ದಾರಿಗೆ ನಾಮಕರಣ ಮಾಡುವಂತೆ ಕೇಂದ್ರ ಸಚಿವರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿಸುತ್ತಿದ್ದಾರೆ.
ಈಗ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ.ಮಾದೇಗೌಡ ಅವರು ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿ-275ಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಸಚಿವರಾದ ಸಿ.ಸಿ. ಪಾಟೀಲ, ಕೆ. ಗೋಪಾಲಯ್ಯ, ಕೆ.ಸಿ. ನಾರಾಯಣಗೌಡ ಅವರಿಗೆ ಮನವಿ ಸಲ್ಲಿಸಿರುವ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಲ್ಲಿ ಮನವಿ ಪತ್ರ ಬರೆದಿದ್ದಾರೆ.
'ಆಧುನಿಕ ಕರ್ನಾಟಕದ ಉದಯಕ್ಕೆ 1902 ಮತ್ತು 1940 ರ ನಡುವೆ ಸುಮಾರು ನಾಲ್ಕು ದಶಕಗಳ ಕಾಲ ಆಳಿದ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ (1884-1940) ಅವರ ಪ್ರಯತ್ನವೇ ಕಾರಣ ಎಂದು ಕಾಂಗ್ರೆಸ್ ಎಂಎಲ್ಸಿಗಳಾದ ಮಧು ಜಿ. ಮಾದೇಗೌಡ ಮತ್ತು ದಿನೇಶ್ ಗೂಳಿಗೌಡ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
'ಕರ್ನಾಟಕದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಅವರು ಹಾಕಿಕೊಟ್ಟ ದೂರದೃಷ್ಟಿ ಯೋಜನೆಗಳು ಈ ನಾಡಿನ ಜನರಿಗೆ ಅನುಕೂಲವಾಗಿವೆ. ದೇಶದಲ್ಲಿ ಮೊದಲ ಬಾರಿಗೆ ರಸ್ತೆಬದಿಗೆ ದಾರಿದೀಪ, ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್ಎಸ್), ಶಿವನ ಸಮುದ್ರ ಜಲ ವಿದ್ಯುತ್ ಯೋಜನೆ, ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕೆಆರ್ ಆಸ್ಪತ್ರೆ, ಶ್ರೀಗಂಧದ ಎಣ್ಣೆ ಕಾರ್ಖಾನೆ, ರೇಷ್ಮೆ ಕಾರ್ಖಾನೆ, ಮೈಸೂರು ಸಕ್ಕರೆ ಕಾರ್ಖಾನೆಗಳು, ಬೆಂಗಳೂರಿಗೆ ಕುಡಿಯುವ ನೀರು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ, ಬಾಲ್ಯ ವಿವಾಹ ನಿಷೇಧ ಸೇರಿದಂತೆ ನೂರಾರು ಉತ್ತಮ ಕಾರ್ಯಗಳನ್ನು ನಾಲ್ವಡಿ ಒಡೆಯರ್ ಮಾಡಿದ್ದಾರೆ' ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಯಿತು, ಅವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ವಿದ್ಯಾರ್ಥಿವೇತನವನ್ನು ಪ್ರಾರಂಭಿಸಲಾಯಿತು. ಅವರ ಆಡಳಿತ ಸುಧಾರಣೆಗಳು ಮತ್ತು ಸಾಧನೆಗಳಿಗಾಗಿ ಮಹಾತ್ಮಾ ಗಾಂಧಿಯವರು 'ರಾಜಋಷಿ' ಎಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಇತ್ತಿಚೆಗೆ ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹ ಮೈಸೂರು-ಬೆಂಗಳೂರು 10 ಲೇನ್ಗಳ ಎಕ್ಸ್ಪ್ರೆಸ್ ಹೆದ್ದಾರಿಗೆ ಕಾವೇರಿ ಎಕ್ಸ್ಪ್ರೆಸ್ ವೇ ಎಂದು ಹೆಸರಿಡುವಂತೆ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದರು.
ಇನ್ನು, ಬೆಂಗಳೂರು - ಮೈಸೂರು ದಶಪಥ ಹೆದ್ದಾರಿ ಕಾಮಗಾರಿಯು ಅವೈಜ್ಞಾನಿಕವಾಗಿದೆ. ಮತ್ತು ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಲೋಕಸಭೆಯಲ್ಲಿ ಆರೋಪಿಸಿದ್ದರು.












Click it and Unblock the Notifications