ಸಿದ್ದು ಮೇಲಿನ ಮುನಿಸಿಗೆ ಪಕ್ಷ ತೊರೆಯಲು ಮುಂದಾದ ಮುನಿರತ್ನ?
Recommended Video

ಬೆಂಗಳೂರು, ನವೆಂಬರ್ 30: ಬೆಂಗಳೂರಿನಲ್ಲಿ ಕಾಂಗ್ರೆಸ್ ಮಟ್ಟಿಗೆ ಟ್ರಂಪ್ ಕಾರ್ಡ್ ಎನಿಸಿಕೊಂಡಿರುವ ಪ್ರಮುಖ ಶಾಸಕ ಮುನಿರತ್ನ ಯಾಕೋ ಮುನಿಸಿಕೊಂಡಿದ್ದಾರೆ. ಕಷ್ಟದಲ್ಲಿ ನೆರವಾಗಿ ಬರದಿರುವ ಪಕ್ಷದಲ್ಲಿ ಇದ್ದು ಏನು ಪ್ರಯೋಜನ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಮುನಿರತ್ನ ಅವರು ಕೈ ಪಕ್ಷ ತೊರೆದು ಜೆಡಿಎಸ್ ಸೇರುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರ ಶಾಸಕ, ನಿರ್ಮಾಪಕ ಮುನಿರತ್ನ ನಾಯ್ಡು ಅವರ ವಿರುದ್ಧ ಕ್ಷೇತ್ರದ ಮೂರು ಪಕ್ಷದ ಮೂವರು ಮಹಿಳಾ ಕಾರ್ಪೊರೇಟರ್ಗಳು ತಿರುಗಿ ಬಿದ್ದ ಘಟನೆ, ಇದನ್ನು ಬಿಜೆಪಿ ತನ್ನ ಲಾಭಕ್ಕೆ ಪಡೆಯಲು ಯತ್ನಿಸಿದ್ದು ಎಲ್ಲವೂ ಈಗ ಮುಗಿದ ಅಧ್ಯಾಯ. ಆದರೆ, ಈ ಎಲ್ಲಾ ಸಂದರ್ಭಗಳಲ್ಲೂ ಕಾಂಗ್ರೆಸ್ ನ ಇತರೆ ಶಾಸಕರು ಹಾಗೂ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬ ಕೊರಗು ಮುನಿರತ್ನ ಅವರಿಗಿದೆ.
2018ರ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಿಂದಲೇ ಮುನಿರತ್ನ ಅವರು ಕಣಕ್ಕಿಳಿಯುತ್ತಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ಟಿಕೆಟ್ ಬಯಸುತ್ತಿಲ್ಲ. ಬದಲಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಮುನಿರತ್ನ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಭರ್ಜರಿ ಗೆಲುವು ಸಾಧಿಸಿದ್ದ ಮುನಿರತ್ನ
ಕಳೆದ ಚುನಾವಣೆಯಲ್ಲಿ ಮುನಿರತ್ನ ಅವರ ಮತ ಪಾಲು ಶೇ. 37.4ರಷ್ಟು ಇತ್ತು 71,064 ಮತಗಳು ಬಂದಿತ್ತು.
ಜೆಡಿಎಸ್ ಅಭ್ಯರ್ಥಿ ಕೆ.ಎಲ್.ಆರ್. ತಿಮ್ಮನಂಜಯ್ಯಗೆ ಶೇ. 27.5ರಷ್ಟು ಮತಪಾಲಿನೊಂದಿಗೆ 52,251 ಮತಗಳು.
ಬಿಜೆಪಿಯ ಮಾಜಿ ಶಾಸಕ ಶ್ರೀನಿವಾಸ್ ಶೇ. 26.7ರಷ್ಟು ಅಂದರೆ 50,726ಮತ ಗಳು ಸಿಕ್ಕಿತ್ತು. ಉತ್ತಮ ಅಂತರದಿಂದ ಪ್ರತಿಷ್ಠಿತ ಕ್ಷೇತ್ರದಲ್ಲಿ ಜಯ ದಾಖಲಿಸಿದ ಮುನಿರತ್ನ ಅವರು ಸಹಜವಾಗಿ ಪ್ರಭಾವಿ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ.

ಗೆಲುವಿನ ಸಾಧ್ಯಾಸಾಧ್ಯತೆ
ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಹುಪಾಲು ಜನರೆ ಮುನಿರತ್ನ ಪರ ಇದ್ದಾರೆ. ಈಗ ಜೆಡಿಎಸ್ ಮತವನ್ನೂ ಪಡೆದರೆ ಮುನಿರತ್ನ ಮತ್ತೆ ಗೆಲುವಿನ ನಗೆ ಬೀರಬಹುದು.ಎಂ. ಶ್ರೀನಿವಾಸ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಸದ್ಯ ಸಕ್ರಿಯರಾಗಿಲ್ಲ. ನಟ ಗಣೇಶ್ ಪತ್ನಿ ಶಿಲ್ಪಾ, ಮಾಳವಿಕಾ ಅವಿನಾಶ್ ಅವರು ಕಣಕ್ಕಿಳಿಯುವ ಸುದ್ದಿ ಇದ್ದರೂ ಖಚಿತವಾಗಿಲ್ಲ. ಹೀಗಾಗಿ ಪ್ರಬಲ ಸ್ಪರ್ಧೆ ಇಲ್ಲದ ಕಾರಣ, ಮುನಿರತ್ನ ಅವರು ಮತ್ತೆ ಶಾಸಕರಾಗುವ ಸಾಧ್ಯತೆ ಹೆಚ್ಚಿದೆ.

ಪ್ರಜ್ವಲ್ ರೇವಣ್ಣ ಬಯಸಿದ್ದ ಕ್ಷೇತ್ರ
ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಜ್ವಲ್ರೇವಣ್ಣ ಅವರು ಆರ್.ಆರ್. ನಗರ ಕ್ಷೇತ್ರದಿಂದ ಸ್ಪರ್ಧಿಸುವ ಒಲವು ತೋರಿದ್ದರು. ಆದರೆ, ಇದೀಗ ಪ್ರಜ್ವಲ್ ಅವರು ಬೇಲೂರಿನಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಕಳೆದ ಬಾರಿ ಆರ್ ಆರ್ ನಗರದಲ್ಲಿ ಉತ್ತಮ ಹೋರಾಟ ನೀಡಿದ್ದಕೆ.ಎಲ್.ಆರ್. ತಿಮ್ಮನಂಜಯ್ಯ (ಶೇ 27.5ರಷ್ಟು ಮತಪಾಲು) ಅವರು ಪಕ್ಷದ ವರಿಷ್ಠರ ಆದೇಶಕ್ಕೆ ಬದ್ಧ ಎಂದಿದ್ದಾರೆ.

ಬಿಬಿಎಂಪಿ ಕಾಮಗಾರಿಗಳ ಕಿರಿಕಿರಿ
120 ಕೋಟಿ ಗಳ ಬಿಬಿಎಂಪಿ ಕಾಮಗಾರಿ ಅಕ್ರಮ ಕೇಸಿಗೆ ಸಂಬಂಧಿಸಿದಂತೆ ಮುನಿರತ್ನ ಮತ್ತು ಅವರ ಕುಟುಂಬ ಸದಸ್ಯರ ಹೆಸರನ್ನು ದೋಷಾರೋಪ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಮೂಲ ಸೌಕರ್ಯ ಕೊರತೆ, ಕುಡಿಯುವ ನೀರಿನ ಸಮಸ್ಯೆಗೆ ಇನ್ನೂ ಪರಿಹಾರ ಸಿಗಬೇಕಿದೆ. ಕ್ಷೇತ್ರದಲ್ಲಿ ಒಕ್ಕಲಿಗ, ಅಲ್ಪ ಸಂಖ್ಯಾತ ಮತಗಳನ್ನು ಉಳಿಸಿಕೊಳ್ಳಲು ಈ ಬಾರಿ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಡಲಿದೆ.












Click it and Unblock the Notifications