ನಮ್ಮದು 'ಮಿಷನ್ 110' ಎಂದ ಬಿಎಸ್ ವೈ ಬಾಯಿ ತಪ್ಪಿದರೋ ನಿಜ ಹೇಳಿದರೋ?
ಬೆಂಗಳೂರು, ಜೂನ್ 23: 'ಮುಂದಿನ ಚುನಾವಣೆಯಲ್ಲಿ ನಮ್ಮ ಗುರಿ ನೂರಾ ಹತ್ತು ಸೀಟು ಗೆಲ್ಲುವುದಾಗಿದೆ' ಎನ್ನುವ ಮೂಲಕ ಗುರುವಾರ ಮಾಧ್ಯಮ ಪ್ರತಿನಿಧಿಗಳನ್ನೂ ಅರೆ ಕ್ಷಣ ಅಚ್ಚರಿಗೆ ದೂಡಿದರು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ.
ವೇದಿಕೆಯಲ್ಲಿದ್ದ ಶೋಭಾ ಕರಂದ್ಲಾಜೆ ಹಾಗೂ ಅರವಿಂದ ಲಿಂಬಾವಳಿ ಆ ತಕ್ಷಣವೇ ಮಿಷನ್ 150 ಎಂದು ನೆನಪಿಸಿದರು. ಸ್ವಲ್ಪ ಸಾವರಿಸಿಕೊಂಡ ಬಿಎಸ್ ವೈ, ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂಬ ನರೇಂದ್ರ ಮೋದಿ ಅವರ ಕನಸು ನನಸು ಮಾಡಬೇಕು. ಅದಕ್ಕಾಗಿ ನೂರೈವತ್ತು ಸೀಟು ಗೆಲ್ಲಬೇಕು ಎಂದು ಹೇಳಿದರು.

ಈ ಘಟನೆಗೆ ಸಾಕ್ಷಿಯಾಗಿದ್ದು ವಿಶ್ವಕರ್ಮ ಸಮುದಾಯದ ಮುಖಂಡ ಕೆಪಿ ನಂಜುಂಡಿ ಅವರ ಬಿಜೆಪಿ ಸೇರ್ಪಡೆಗೆ ಆಹ್ವಾನ ನೀಡುವ ಸಂದರ್ಭ. ಈ ವೇಳೆ ಆ ಸಮುದಾಯದ ಹದಿನೈದಕ್ಕೂ ಹೆಚ್ಚು ಸ್ವಾಮೀಜಿಗಳಿದ್ದರು.
ಕಾಂಗ್ರೆಸ್ ನಿಂದ ತಮ್ಮನ್ನು ವಿಧಾನ ಪರಿಷತ್ ನಾಮನಿರ್ದೇಶನ ಸದಸ್ಯರನ್ನಾಗಿ ಮಾಡುತ್ತಾರೆ ಎಂದು ಕೆಪಿ ನಂಜುಂಡಿ ಕಾದೇ ಕಾದರು. ಆದರೆ ಮಾಡಲಿಲ್ಲ. ಆದ್ದರಿಂದ್ ಬಿಜೆಪಿಯತ್ತ ಹೆಜ್ಜೆ ಇಟ್ಟಿದ್ದಾರೆ.
"ಯಡಿಯೂರಪ್ಪ ಸತ್ಯ ಹರಿಶ್ಚಂದ್ರ ಇದ್ದ ಹಾಗೆ. ಅವರು ಮಾತು ತಪ್ಪೋದಿಲ್ಲ. ನನಗೆ ಬಿಜೆಪಿಯಲ್ಲಿ ಅಟೆಂಡರ್ ಕೆಲಸವೇ ಕೊಟ್ಟರೂ ಅಚ್ಚುಕಟ್ಟಾಗಿ ಮಾಡ್ತೀನಿ" ಎಂದು ನಂಜುಂಡಿಯವರು ಮಾಧ್ಯಮದವರಿಗೆ ಹೇಳಿದ್ದಾರೆ.












Click it and Unblock the Notifications