ನೆತ್ತಿ ಮೇಲೆ ತೂಗುತ್ತಿದ್ದ ಕತ್ತಿಗಳ ಪೈಕಿ ಒಂದರಿಂದ ಪಾರಾದ ಪ್ರಜ್ವಲ್- ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದ್ದೇನು?
ಬೆಂಗಳೂರು ಜುಲೈ 4: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರ ಮೇಲೆ ಇರುವ ಆರೋಪಗಳಿಂದಾಗಿ ಸದ್ಯಕ್ಕೆ ಪ್ರಜ್ವಲ್ ಜೈಲಿನಿಂದ ಹೊರಬರುವುದು ಸುಲಭವಿಲ್ಲ. ದೌರ್ಜನ್ಯ, ಬೆದರಿಕೆ, ಅತ್ಯಾಚಾರದಂತಹ ಗಂಭೀರ ಆರೋಪಗಳು ಪ್ರಜ್ವಲ್ ಮೇಲಿದೆ. ಇದರ ನಡುವೆ ಅವರಿಗೆ ಕೊಂಚ ರಿಲೀಫ್ ನೀಡುವಂತಹ ವಿಚಾರವೊಂದು ಹೊರಬಂದಿದೆ.
ಹೌದು... ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅಪ್ರಾಪ್ತರ ಬಳಕೆ ಆಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ಪಷ್ಟನೆ ನೀಡಿದೆ. ಪ್ರಜ್ವಲ್ ರೇವಣ್ಣ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪಗಳು ಕೇಳಿ ಬರುತ್ತಿದ್ದಂತೆ ಈ ವಿಚಾರದಲ್ಲಿ ಮಹಿಳಾ ಆಯೋಗ ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಪ್ರವೇಶ ಮಾಡಿದೆ.

ಪ್ರಜ್ವಲ್ ರೇವಣ್ಣ ಅವರ ಮೇಲೆ ಅತ್ಯಾಚಾರ ಆರೋಪ ಮಾಡಿದ ಮಹಿಳೆಯರ ವಿಚಾರಣೆಗೆ ಮಹಿಳಾ ಆಯೋಗ ಮುಂದಾಗಿದೆ. ಇದರ ನಡುವೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯರು ಇರುವ ಬಗ್ಗೆ ತನಿಖೆ ನಡೆಸಿತ್ತು. ಬಳಿಕ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಅಪ್ರಾಪ್ತ ಮಕ್ಕಳು ಇಲ್ಲವೆಂದು ಆಯೋಗ ಸ್ಪಷ್ಟಪಡಿಸಿದೆ. ಇದರಿಂದ ಪ್ರಜ್ವಲ್ ಮೇಲೆ ತೂಗುತ್ತಿದ್ದ ಕತ್ತಿಗಳ ಪೈಕಿ ಒಂದರಿಂದ ಪಾರಾದಂತಾಗಿದೆ.
ಲೋಕಸಭಾ ಚುನಾವಣೆ ಮುಗಿದ ಬಳಿಕ ಪ್ರಜ್ವಲ್ ಗ್ರಹಗತಿಗಳು ಸರಿಯಾಗಿಲ್ಲ. ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರ ಮಗ ಹಾಗೂ ಮಾಜಿ ಸಚಿವ ಎಚ್ಡಿ ರೇವಣ್ಣ ಅವರ ಕೊನೆಯ ಪುತ್ರ ಪ್ರಜ್ವಲ್ ಈಗ ಅತ್ಯಾಚಾರದ ಆರೋಪಿ. ಅವರ ಮೇಲೆ ಲೈಂಗಿಕ ದೌರ್ಜನ್ಯದ ಸರಮಾಲೆಯೇ ಇದೆ.
ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದ ಮೇಲೆ ಎಚ್ಡಿ ರೇವಣ್ಣ ಜೈಲು ವಾಸ ಅನುಭವಿಸಿ ಬಂದಿದ್ದಾರೆ. ಅಲ್ಲದೇ ಅಸಹಜ ಲೈಂಗಿಕ ಕಿರುಕುಳ ಆರೋಪದ ಮೇಲೆ ರೇವಣ್ಣ ಅವರ ಮತ್ತೋರ್ವ ಪುತ್ರ ಸೂರಜ್ ಕೂಡ ಜೈಲುಪಾಲಾಗಿದ್ದಾರೆ.

ಹೀಗೆ ಕುಟುಂಬ ಸದಸ್ಯರಿಗೆ ಒಂದಲ್ಲಾ ಒಂದು ಸಂಕಷ್ಟಗಳು ಎದುರಾಗುತ್ತಿರುವ ಈ ಸಂದರ್ಭದಲ್ಲಿ ದೇವರ ಮೇಲೆ ಭಾರ ಹಾಕಿ ರೇವಣ್ಣ ತಮ್ಮ ಮಕ್ಕಳನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಬುಧವಾರ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ಪ್ರಜ್ವಲ್ ಅವರನ್ನು ಭೇಟಿ ಮಾಡಿದರು.
ಇದಕ್ಕೂ ಮುನ್ನ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಸೂರಜ್ ದೈವ ಭಕ್ತ. ಆತ ಜೈಲಿನಿಂದ ಸುಲಭವಾಗಿ ಹೊರಬರುತ್ತಾನೆ ಎಂದಿದ್ದರು. ಈ ಮಾತಿನಿಂದ ಪ್ರಜ್ವಲ್ ರೇವಣ್ಣ ಜೈಲಿನಿಂದ ಸುಲಭವಾಗಿ ಹೊರಬರುವುದು ಕಷ್ಟ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ ರೇವಣ್ಣ ಪುತ್ರರನ್ನು ಬಂಧನದಿಂದ ಬಿಡಿಸಿಕೊಂಡು ಬರುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications