ಶಾಸಕ ಜಮೀರ್ ಅಹ್ಮದ್ ಬಗ್ಗೆ ಸಚಿವ ವಿ.ಸೋಮಣ್ಣ ಹೇಳಿದ್ದು ಹೀಗೆ
ಬೆಂಗಳೂರು, ಸೆ 11: ನಗರದ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಬಗ್ಗೆ, ವಸತಿ ಸಚಿವ ವಿ.ಸೋಮಣ್ಣ ಮಾತನಾಡಿದ್ದು, "ಆತನೊಬ್ಬ ಕಿಲಾಡಿ" ಎಂದಿದ್ದಾರೆ.
'ಮುಸಲ್ಮಾನರೆಲ್ಲಾ ಕೆಟ್ಟವರಲ್ಲ, ಹಿಂದೂಗಳೆಲ್ಲಾ ಒಳ್ಳೆಯವರೇನಲ್ಲಾ. ಎಲ್ಲಾ ಜಾತಿಯಲ್ಲೂ ಒಳ್ಳೆಯವರು, ಕೆಟ್ಟವರು ಇದ್ದೇ ಇರುತ್ತಾರೆ. ದೇವರು ಇದ್ದಾರೆ ಎಂದಾಗ, ದೆವ್ವವೂ ಇದ್ದೇ ಇರುತ್ತದೆ"ಎಂದು ಸೋಮಣ್ಣ ಹೇಳಿದ್ದಾರೆ.
"ಜಮೀರ್ ಸಿಕ್ಕಿದ್ದ. ನಾನು, ಅವನು ಬಹಳ ಆತ್ಮೀಯರು. ಇಪ್ಪತ್ತು ವರ್ಷದಿಂದ ಅವನನ್ನು ನಾನು ಬಲ್ಲೆ. ಮಾಧ್ಯಮದರು ಅವನ ಬಗ್ಗೆ ನನ್ನಲ್ಲಿ ಪ್ರಶ್ನಿಸಿದರು. ನಾನು ಹೇಳಿದೆ, ಅವನು ದಡ್ಡ ಅಲ್ಲ, ದೊಡ್ಡ ಕಿಲಾಡಿ ಎಂದು".

"ಅವನು ಇಲ್ಲೇ ಇರಬೇಕು. ಅವನು ಬರಿ ಮುಸಲ್ಮಾನರ ಶಾಸಕನಲ್ಲ, ಎಲ್ಲರ ಎಂಎಲ್ಎ ಅವನು. ಎಲ್ಲಾ ವರ್ಗದವರು ಅವನಿಗೆ ಮತ ನೀಡಿದ್ದಾರೆ. ಹಾಗಾಗಿ, ಯಾಕೆ ಅವನು ದೇಶ ಬಿಟ್ಟು ಹೋಗಬೇಕು" ಎಂದು ಸೋಮಣ್ಣ ಪ್ರಶ್ನಿಸಿದ್ದಾರೆ.
"ನಾವೆಲ್ಲಾ ಭಾರತೀಯರು, ಇಲ್ಲೇ ಬದುಕಬೇಕು, ಇಲ್ಲೇ ಸಾಯಬೇಕು. ಕೊರೊನಾದಿಂದ ಬಡವರ ಬದುಕು ಕಷ್ಟವಾಗಿದೆ. ಕಾಂಗ್ರೆಸ್ ನವರು ಮುಸ್ಲಿಮರನ್ನು ಓಟ್ ಬ್ಯಾಂಕಿಗಾಗಿ ಆ ಸಮುದಾಯವನ್ನು ಇಟ್ಟುಕೊಂಡಿದ್ದಾರೆ"ಎಂದು ಸೋಮಣ್ಣ ಅಭಿಪ್ರಾಯ ಪಟ್ಟಿದ್ದಾರೆ.
"ನೀವು (ಮುಸ್ಲಿಮರು) ಎಷ್ಟು ದಿನಾಂತ ಮೋಸ ಹೋಗುತ್ತೀರಾ. ನನಗೆ ಚುನಾವಣೆ ಮಾಡುವುದು ಗೊತ್ತು, ಗೆಲ್ಲುವುದೂ ಗೊತ್ತು. ಗೆದ್ದ ಮೇಲೆ ನಿಮಗೆ ಸಹಾಯ ಮಾಡುವುದೂ ಗೊತ್ತು"ಎಂದು ಸೋಮಣ್ಣ ಹೇಳಿದ್ದಾರೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಬಾವಿ ವಾರ್ಡ್ ನಲ್ಲಿ ಈದ್ಗಾ ಮೈದಾನ ಕಾಂಪೌಂಡ್ ನಿರ್ಮಾಣಕ್ಕೆ ಪೂಜೆ ನೆರವೇರಿಸಿ ಸೋಮಣ್ಣ ಮಾತನಾಡುತ್ತಿದ್ದರು.












Click it and Unblock the Notifications