ಬೆಂಗಳೂರಿನಲ್ಲಿ ಗಂಧದ ಗುಡಿ ಬೈಕ್ ರೈಡ್ಗೆ ಅಶ್ವತ್ಥನಾರಾಯಣ ಚಾಲನೆ
ಬೆಂಗಳೂರು, ಅ.16: ''ಪ್ರಕೃತಿ ಮತ್ತು ಮನುಷ್ಯನ ನಡುವಿನ ಗಾಢ ಸಂಬಂಧವನ್ನು ನಟ ಪುನೀತ್ ರಾಜಕುಮಾರ್ ತಮ್ಮ ಜೀವಿತಾವಧಿಯಲ್ಲಿ ತೋರಿಸಿ, ನಮಗೆ ಮಾದರಿಯಾಗಿ ಹೋಗಿದ್ದಾರೆ'' ಎಂದು ಉನ್ನತ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ನೆನಪಿಸಿಕೊಂಡಿದ್ದಾರೆ.
ಅರಣ್ಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಗಂಧದ ಗುಡಿ ಬೈಕ್ ರೈಡ್ ಉದ್ಘಾಟನೆ ಮತ್ತು ಸಸಿ ನೆಡುವಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಸಚಿವ ಅಶ್ವತ್ಥನಾರಾಯಣ ಅರಣ್ಯ ಭವನದಿಂದ ಕಾವೇರಿ ಚಿತ್ರಮಂದಿರದವರೆಗೆ ಸ್ವತಃ ಬೈಕ್ ಚಾಲನೆ ಮಾಡಿ ರ್ಯಾಲಿಗೆ ಚಾಲನೆ ನೀಡಿದರು.
Gandhada Gudi Trailer : ಕಾಡು, ಮಳೆ, ಬೆಟ್ಟ, ಜನ, ನದಿ, ಜಲಪಾತಗಳ ನಡುವೆ ಅಪ್ಪು; ಇದು ಗಂಧದ ಗುಡಿ
ರ್ಯಾಲಿಯಲ್ಲಿ ನಟ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಗಂಧಧ ಗುಡಿ ನಿರ್ದೇಶಕ ಅಮೋಘವರ್ಷ ಸಾಥ್ ನೀಡಿದರು.
"ಮನುಷ್ಯ ಹಾಗೂ ಪ್ರಕೃತಿಯ ನಡುವಿನ ಸಂಬಂಧವನ್ನು ಕಾರ್ಯ ಹಾಗೂ ಕಾಳಜಿಯ ಮೂಲಕ ವ್ಯಕ್ತಪಡಿಸಿರುವ ಡಾ. ಪುನೀತ್ ರಾಜ್ಕುಮಾರ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿರುವ 'ಗಂಧದಗುಡಿ' ನಾಮಾಂಕಿತದಲ್ಲಿ ಹಮ್ಮಿಕೊಳ್ಳಲಾದ ಬೈಕ್ ರೈಡ್ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಪ್ಪು ಅವರ ಜೀವನ ಎಲ್ಲರಿಗೂ ಪ್ರೇರಣೆ" ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
"ರಾಜ್ಯದ ನೈಸರ್ಗಿಕ ಸಂಪತ್ತನ್ನು ಜಗತ್ತಿಗೆ ಪರಿಚಯಿಸುವ ಜತೆ ಅವುಗಳನ್ನು ಉಳಿಸಿ, ಬೆಳೆಸುವ ಮೂಲ ಉದ್ದೇಶವನ್ನು 'ಗಂಧದಗುಡಿ' ಚಿತ್ರ ಹೊಂದಿದೆ" ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಹವಾಮಾನ ಬದಲಾವಣೆ ದೊಡ್ಡ ಸಮಸ್ಯೆ ಆಗಿದೆ. ನಮ್ಮಲ್ಲಿ ಕೂಡ ಇತ್ತೀಚೆಗೆ ಅಕಾಲಿಕ ಮಳೆ ವಿಪರೀತವಾಗಿದೆ. ಪ್ರಕೃತಿಯನ್ನು ಗೌರವಿಸುವುದೇ ಇದಕ್ಕೆ ಪರಿಹಾರ. ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವುದು ನಮ್ಮ ಗುರಿ ಆಗಬೇಕು. ಜತೆಗೆ ಪ್ರತಿಯೊಂದು ವಿಚಾರದಲ್ಲೂ ಸಾಮಾಜಿಕ ಬದ್ಧತೆ ಇರಬೇಕು. ಇದೇ ಪುನೀತ್ ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದರು.
ಕನ್ನಡಿಗರು ಬಹಳ ದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಪುನೀತ್ ರಾಜ್ಕುಮಾರ್ ಅವರ 'ಗಂಧದ ಗುಡಿ' ಟ್ರೈಲರ್ನ ಅಕ್ಟೋಬರ್ 10 ರಂದು ಬಿಡುಗಡೆಯಾಗಿತ್ತು. ಪಿಆರ್ಕೆ ಸ್ಟುಡಿಯೋ ಬಿಡುಗಡೆ ಮಾಡಿರುವ ಟ್ರೈಲರ್ ಕೆಲವೇ ಗಂಟೆಯೊಳಗೆ ಲಕ್ಷಗಟ್ಟಲೇ ಮಂದಿ ಅಪ್ಪು ಕನಸಿನ ಯೋಜನೆಯನ್ನು ಕಣ್ತುಂಬಿಕೊಂಡಿದ್ದರು. ಟ್ರೈಲರ್ ವೀಕ್ಷಕರ ಸಂಖ್ಯೆಯಲ್ಲಿ ದಾಖಲೆ ಸಾಧಿಸಿದೆ.
ಗಂಧದ ಗುಡಿ ಸಿನಿಮಾದ ಟ್ರೈಲರ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಟ್ವಿಟರ್ ಮೂಲಕ ಹಾರೈಸಿದ್ದಾರೆ. ಈ ಸಿನಿಮಾ ಕನ್ನಡ ನಾಡಿನ ನಿಸರ್ಗ ವೈಭವವನ್ನು ಸೆರೆ ಹಿಡಿದಿದೆ. ಪುನೀತ್ ಅವರು ಸಮಾಜಮುಖಿ ವ್ಯಕ್ತಿ ಆಗಿದ್ದರು. ಸದ್ದಿಲ್ಲದೆ ಕೆಲಸ ಮಾಡುತ್ತಿದ್ದ ಅವರು, ಹಲವು ಮೌಲ್ಯಗಳನ್ನು ಅಳವಡಿಸಿಕೊಂಡಿದ್ದರು. ಸಾದಾಸೀದಾ ಆಗಿದ್ದ ಅವರು ಒಂದು ಮೇಲ್ಪಂಕ್ತಿಯನ್ನು ಬಿಟ್ಟು ಹೋಗಿದ್ದಾರೆ ಎಂದು ಪ್ರಧಾನಿ ಹೇಳಿದ್ದರು.