Milk Supply in Bengaluru : ಲಾರಿ ಮುಷ್ಕರ; ಬೆಂಗಳೂರು ದಕ್ಷಿಣದಲ್ಲಿ ನಂದಿನಿ ಹಾಲು ಪೂರೈಕೆ ವ್ಯತ್ಯಯ
ಬೆಂಗಳೂರು, ಜನವರಿ 23; ಬಮೂಲ್ ಹಾಲು ಸರಬರಾಜು ಮಾಡುವ ವಾಹನಗಳ ಮಾಲೀಕರ ದಿಢೀರ್ ಮುಷ್ಕರದಿಂದಾಗಿ ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ನಂದಿನಿ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಶುಕ್ರವಾರದಿಂದ ಲಾರಿ ಮಾಲೀಕರು ಮುಷ್ಕರ ಕೈಗೊಂಡಿದ್ದಾರೆ.
ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಕೇಂದ್ರ ಕಚೇರಿ ಮುಂದೆ ವಾಹನಗಳ ಮಾಲೀಕರು ಲಾರಿಗಳನ್ನು ಸಾಲಾಗಿ ನಿಲ್ಲಿಸಿ, ಹಾಲು ಪೂರೈಕೆ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ ಹಾಲು, ಮೊಸರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಸುಮಾರು 300 ವಾಹನಗಳನ್ನು ಬಮೂಲ್ ಬಾಡಿಗೆಗೆ ಪಡೆದು ಹಾಲಿನ ಪೂರೈಕೆ ಮಾಡುತ್ತದೆ. ಕೆಲವು ವಾಹನಗಳಿಗೆ ಟ್ರಿಪ್, ಇನ್ನೂ ಕೆಲವು ವಾಹನಗಳಿಗೆ ಕಿ. ಮೀ. ಲೆಕ್ಕದಲ್ಲಿ ದರ ನಿಗದಿ ಮಾಡಿದೆ. ಎರಡು ವರ್ಷಗಳ ಅವಧಿಗೆ ಟೆಂಡರ್ ಕರೆದು ದರ ನಿಗದಿ ಮಾಡುತ್ತದೆ.
ಈಗ ಮುಷ್ಕರ ಏಕೆ?; ಈಗ ಹಾಲು, ನಂದಿನಿ ಉತ್ಪನ್ನಗಳ ಸರಬರಾಜು ವಾಹನಗಳ ಟೆಂಡರ್ ಮುಗಿದಿದೆ. ಆದ್ದರಿಂದ ಹೊಸ ಟೆಂಡರ್ ಕರೆಯಲು ಬಮೂಲ್ ಮುಂದಾಗಿದೆ. ಆದರೆ ಕೇಂದ್ರ ಸರ್ಕಾರದ ನೀತಿಯ ಅನ್ವಯ 15 ವರ್ಷ ಹಳೆಯದಾದ ವಾಹನಗಳನ್ನು ಬಾಡಿಗೆಗೆ ಪಡೆಯದಿರಲು ತೀರ್ಮಾನಿಸಲಾಗಿದೆ.
ಇದಕ್ಕೆ ಹಾಲು ಪೂರೈಕೆ ಮಾಡುವ ವಾಹನಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಟೆಂಡರ್ ಕರೆಯದೆ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಆದ್ದರಿಂದ ಡೈರಿ ಸರ್ಕಲ್ ಬಳಿ ಇರುವ ಬಮೂಲ್ ಕಚೇರಿ ಮುಂದೆ ವಾಹನಗಳನ್ನು ಸಾಲಾಗಿ ನಿಲ್ಲಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಾಹನ ಮಾಲೀಕರಿಗೆ ತೊಂದರೆ ಕೊಡುತ್ತಿದೆ
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಮಾತನಾಡಿ, "15 ವರ್ಷ ಮೀರಿದ ವಾಹನಗಳನ್ನು ಟೆಂಡರ್ನಲ್ಲಿ ಭಾಗವಹಿಸಲು ಅವಕಾಶ ನೀಡದಿದ್ದರೆ ಆ ಮಾಲೀಕರು ಏನು ಮಾಡಬೇಕು?. ಇಲ್ಲದ ನಿಯಮಗಳನ್ನು ಹೇರಿ ವಾಹನ ಮಾಲೀಕರಿಗೆ ತೊಂದರೆ ಕೊಡಲು ನೀಡಲು ಬಮೂಲ್ ಹೊರಟಿದೆ" ಎಂದು ಆರೋಪಿಸಿದರು.
ಶುಕ್ರವಾರ ವಾಹನ ಮಾಲೀಕರು ದಿಢೀರ್ ಮುಷ್ಕರ ಆರಂಭಿಸಿದರು. ಈ ಕಾರಣದಿಂದಾಗಿ ಶನಿವಾರದಿಂದಲೇ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಆದರೆ ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಮಾತ್ರ ಈ ಸಮಸ್ಯೆಯಾಗಿದೆ.

ಹಾಲಿಗಾಗಿ ಜನರ ಅಲೆದಾಟ
ವಾಹನ ಮಾಲೀಕರ ಮುಷ್ಕರದಿಂದಾಗಿ ಜಯನಗರ, ಜೆಪಿ ನಗರ, ಉತ್ತರಹಳ್ಳಿ, ಪದ್ಮನಾಭನಗರ ಸೇರಿದಂತೆ ಬೆಂಗಳೂರು ನಗರದ ದಕ್ಷಿಣ ಪ್ರದೇಶದ ಬಡಾವಣೆಗಳಲ್ಲಿ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಬ್ಯಾಗು ಹಿಡಿದು ಹಾಲು ತರಲು ಹೋದ ಜನರು ಅಂಗಡಿ ಅಂಗಡಿ ಅಲೆಯುವಂತಾಗಿದೆ.
ಆದರೆ ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ, "ಬೂತ್ಗಳಿಗೆ ಹಾಲು ಮೊಸರು ಪೂರೈಕೆ ಯಾವುದೇ ತೊಂದರೆಯಾಗಿಲ್ಲ" ಎಂದು ಹೇಳಿದ್ದಾರೆ. ಬಮೂಲ್ ಪ್ರತಿನಿತ್ಯ 10 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತಿದೆ. ಇದರಲ್ಲಿ ಕೇವಲ 25 ಸಾವಿರ ಲೀಟರ್ ಹಾಲಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಅಂದಾಜಿಸಲಾಗಿದೆ.

ಕರೆದು ಸಮಸ್ಯೆ ಕೇಳುತ್ತಿಲ್ಲ ಎಂದು ಆರೋಪ
ಲಾರಿ ಮಾಲೀಕರ ಸಂಘದ ಷಣ್ಮುಗಪ್ಪ ಮಾತನಾಡಿ, "ಲಾರಿಗಳ ಮಾಲೀಕರು ಹಗಲು, ರಾತ್ರಿ ಎನ್ನದೇ ಹಾಲು ಸರಬರಾಜು ಮಾಡುತ್ತಾರೆ. ಈಗ ಇಲ್ಲದ ನಿಯಮಗಳನ್ನು ಸೇರಿಸಿಕೊಂಡು ಅವರ ಹೊಟ್ಟೆಯ ಮೇಲೆ ಹೊಡೆಯಲು ಬಮೂಲ್ ಹೊರಟಿದೆ. ಮುಷ್ಕರ ನಡೆಸುತ್ತಿರುವ ಲಾರಿ ಮಾಲೀಕರನ್ನು ಕರೆದು ಸಮಸ್ಯೆ ಕೇಳುವ ಸೌಜನ್ಯವನ್ನು ಆಡಳಿತ ಮಂಡಳಿ ತೋರಿಸುತ್ತಿಲ್ಲ. ಇದೇ ಧೋರಣೆ ಮುಂದುವರೆದರೆ ಹಳ್ಳಿಗಳಿಂದ ಹಾಲು ತರುವ ವಾಹನಗಳು ಮತ್ತು ಹಾಲಿನ ಟ್ಯಾಂಕರ್ಗಳ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಕೋಲಾರ ಡೇರಿಯಿಂದ ಹಾಲು ಪೂರೈಕೆ
ಬೆಂಗಳೂರು ನಗರದಲ್ಲಿ ಹಾಲಿನ ಪೂರೈಕೆ ವ್ಯತ್ಯಯವಾದ ಇಂದಿರಾ ನಗರ, ಕೆ. ಆರ್. ಪುರ, ಮಹದೇವಪುರ, ವೈಟ್ಫೀಲ್ಡ್ ಪ್ರದೇಶಗಳಿಗೆ ಕೋಲಾರ ಡೇರಿ ಮೂಲಕ ಹಾಲು ಸರಬರಾಜು ಮಾಡಲಾಗುತ್ತಿದೆ. ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಪೀಣ್ಯ ಭಾಗಕ್ಕೆ ತುಮಕೂರು ಡೇರಿ ಮೂಲಕ ಮತ್ತು ಯಲಹಂಕ, ಹೆಬ್ಬಾಳ, ವಿಜಯನಗರ, ಆರ್. ಆರ್. ನಗರದ ಕೆಂಗೇರಿ ಭಾಗಕ್ಕೆ ಮಂಡ್ಯ ಡೇರಿ ಮೂಲಕ ಹಾಲಿನ ಸರಬರಾಜು ಮಾಡಲಾಗುತ್ತಿದೆ.












Click it and Unblock the Notifications