ಮುಷ್ಕರ ನಡೆದರೂ ನಂದಿನಿ ಹಾಲು ಸಿಗುತ್ತದೆ
ಬೆಂಗಳೂರು, ಆ.30 : ನಂದಿನಿ ಹಾಲು ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟನೆ ನಡೆಸಿದರೂ ಗ್ರಾಹಕರಿಗೆ ನಂದಿನಿ ಹಾಲು ಮಾರಾಟ ಸ್ಥಗಿಗೊಳ್ಳುವುದಿಲ್ಲ. ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಂದಿನಿ ಹಾಲು ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಆ.30ರ ಮಧ್ಯಾಹ್ನದಿಂದ ಪ್ರತಿಭಟನೆ ಆರಂಭಿಸಲಿದೆ. ನಂದಿನಿ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ಸಂಘ ತೀರ್ಮಾನ ಕೈಗೊಂಡಿದೆ.

ಮುಷ್ಕರದ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಸಾರ್ವಜನಿಕರು ಹಾಲು ಮಾರಾಟಗಾರರ ಮುಷ್ಕರದ ಬಗ್ಗೆ ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ. ಯಾವುದೇ ಕಾರಣಕ್ಕೂ ಹಾಲು ಮಾರಾಟ ನಿಲ್ಲುವುದಿಲ್ಲ. ಗ್ರಾಹಕರಿಗೆ ಪ್ರತಿದಿನದಂತೆ ಹಾಲು ಸಿಗುತ್ತದೆ ಎಂದು ತಿಳಿಸಿದೆ. [ಸಂಘದ ಬೇಡಿಕೆಗಳೇನು?]
ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಹಾಲು ಮಾರಾಟಗಾರರಿಗೆ ವಿತರಣೆಯಲ್ಲಿ ವ್ಯತ್ಯಾಸ ಮಾಡದಿರಲು ಮನವಿ ಮಾಡಲಾಗಿದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಯಾವುದೇ ತೊಂದರೆಯಿಲ್ಲದೆ ಎಂದಿನಂತೆ ಎಲ್ಲೆಡೆ ಲಭ್ಯವಿರುತ್ತವೆ. ಗ್ರಾಹಕರಿಗೆ ದಿನವಿಡೀ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ದೊರೆಯುವಂತೆ ಎಲ್ಲಾ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಂಎಫ್ ಹೇಳಿದೆ.
ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆ.30ರ ಮಧ್ಯಾಹ್ನ 3 ಗಂಟೆಯಿಂದ ಬೆಂಗಳೂರು ಹಾಲು ಒಕ್ಕೂಟದ ಕೇಂದ್ರ ಕಚೇರಿ ಎದುರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತೇವೆ ಎಂದು ಹಾಲು ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್. ರಂಗಸ್ವಾಮಿ ಅವರು ಹೇಳಿದ್ದಾರೆ.












Click it and Unblock the Notifications