ಹೊರವರ್ತುಲ ರಸ್ತೆ ಸಮಸ್ಯೆ ಅರಿಯಲು ನ.14ರಂದು ಸಭೆ: ಅಶ್ವತ್ಥನಾರಾಯಣ
ಬೆಂಗಳೂರು, ನ.2: ನಗರದಲ್ಲಿ ಮಳೆ ಬಂದಾಗ ಉಂಟಾಗುವ ಸಮಸ್ಯೆಗಳ ಬಗ್ಗೆ ಜನಸಾಮಾನ್ಯರು ಮತ್ತು ಐಟಿ ಕಂಪೆನಿಗಳಿಂದ ಕೇಳಿ ತಿಳಿಯಲು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ನ.14ರಂದು ಆ ಪ್ರದೇಶದಲ್ಲಿ ಸಭೆ ನಡೆಸಿ, ವೀಕ್ಷಣೆ ನಡೆಸಲಿದ್ದಾರೆ.
ಔಟರ್ ರಿಂಗ್ ರೋಡ್ ಕಂಪನಿಗಳ ಒಕ್ಕೂಟ (ಓರ್ಕಾ) ಮತ್ತು ಇತರ ಕೆಲವು ಸಂಘಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಗರದ ಮೂಲಸೌಲಭ್ಯ ಸಮಸ್ಯೆ ನಿವಾರಣೆ ಕುರಿತು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಗುರುವಾರ ಅವರು ವಿಧಾನಸೌಧದಲ್ಲಿ ಮಾಸಿಕ ಸಭೆ ನಡೆಸಿದರು. ಈ ಪ್ರದೇಶದ ಸಮಸ್ಯೆಗಳ ನಿವಾರಣೆಗೆ ಪ್ರತೀ ತಿಂಗಳೂ ಸಭೆ ನಡೆಸಲಾಗುವುದು ಎನ್ನುವ ಸರಕಾರದ ತೀರ್ಮಾನದಂತೆ ಈ ಸಭೆ ಏರ್ಪಡಿಸಲಾಗಿತ್ತು.
ನಂತರ ಮಾತನಾಡಿದ ಸಚಿವರು ಔಟರ್ ರಿಂಗ್ ರೋಡ್ನ 17 ಕಿ.ಮೀ. ಪ್ರದೇಶವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಉದ್ಯಮಿಗಳು ಸರಕಾರದ ಗಮನ ಸೆಳೆದಿದ್ದರು. ಇಲ್ಲಿ ಸುಗಮ ಸಂಚಾರ, ಒಳಚರಂಡಿ, ಒತ್ತುವರಿ, ಮೆಟ್ರೊ ಕಾಮಗಾರಿ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಆದ್ಯ ಗಮನ ಹರಿಸಲಾಗುವುದು. ಹಾಗೆಯೇ ನಗರದಲ್ಲಿರುವ ಸರ್ವೀಸ್ ರಸ್ತೆಗಳನ್ನು ಕೂಡ ಮತ್ತಷ್ಟು ಸುಧಾರಿಸಲಾಗುವುದು. ನಾವು ಒಟ್ಟಾಗಿ ಕೂತು ಸಮಸ್ಯೆಗಳನ್ನು ಬಗೆಹರಿಸಬೇಕೇ ವಿನಾ ನಮ್ಮ ನಗರವನ್ನು ನಾವೇ ಟೀಕಿಸುತ್ತ ಕೂರಬಾರದು ಎಂದು ಅವರು ಪ್ರತಿಪಾದಿಸಿದರು.

ಸರ್ಕಾರ ಗಂಭೀರವಾಗಿ ಪರಿಗಣಿಸಿದೆ
ಬೆಂಗಳೂರಿನಲ್ಲಿ ಈ ಬಾರಿ 50 ವರ್ಷಗಳಲ್ಲೇ ಕಂಡುಕೇಳರಿಯದಂತಹ ಮಳೆ ಬಂದಿದೆ. ಇದರಿಂದ ಕೆಲವು ಸಮಸ್ಯೆಗಳಾಗಿರುವುದು ನಿಜ. ಇದರ ಬಗ್ಗೆ ನಾವು ಹೆಚ್ಚು ಮುಕ್ತವಾಗಿ ಚರ್ಚಿಸುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಪರಿಹಾರ ಮಾರ್ಗೋಪಾಯಗಳನ್ನು ಸೂಚಿಸುತ್ತಲೇ ಇದ್ದಾರೆ ಎಂದು ಅವರು ಹೇಳಿದರು.
ಸಂಚಾರ ನಿಯಮಗಳು, ಪಾರ್ಕಿಂಗ್, ಸಮೂಹ ಸಾರಿಗೆ ಇತ್ಯಾದಿಗಳ ಬಗ್ಗೆ ಮಕ್ಕಳಿಗೆ ನಾವು ಶಾಲಾ ಹಂತದಿಂದಲೇ ಜಾಗೃತಿ ಮೂಡಿಸಬೇಕು. ಇದರ ಜತೆಗೆ ಕಂಪನಿಗಳು ತಮ್ಮ ಸಿಎಸ್ಆರ್ ನಿಧಿಯನ್ನು ಔಟರ್ ರಿಂಗ್ ರೋಡ್ ಪ್ರದೇಶದ ಮೂಲಸೌಲಭ್ಯ ಸುಧಾರಣೆಗೆ ಹೇಗೆ ವಿನಿಯೋಗಿಸಬಹುದು ಎನ್ನುವ ಬಗ್ಗೆ ಒಂದು ತೀರ್ಮಾನಕ್ಕೆ ಬರಬೇಕು. ಅಂತಿಮವಾಗಿ ಜನರ ಸಹಭಾಗಿತ್ವದಿಂದ ಮಾತ್ರ ಸುಸ್ಥಿರ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಇದ್ದವರು ಇವರು
ಸಭೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಮಹದೇವಪುರ ವಲಯದ ವಿಶೇಷ ಆಯುಕ್ತ ಡಾ.ತ್ರಿಲೋಕಚಂದ್ರ, ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಬಿಬಿಎಂಪಿ ಪ್ರಧಾನ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ರವಿಕಾಂತೇಗೌಡ ಉಪಸ್ಥಿತರಿದ್ದರು.
ಉದ್ಯಮಿಗಳ ಪರವಾಗಿ ನಾಸ್ಕಾಂ ಪ್ರಾದೇಶಿಕ ಮುಖ್ಯಸ್ಥ ಭಾಸ್ಕರ್ ವರ್ಮ, ಏಬಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರಾವ್ ಚಂದನ್, ಗೋಲ್ಡ್ಮನ್ ಸ್ಯಾಕ್ಸ್ನ ರವಿಕೃಷ್ಣನ್, ವಿಎಂ ವೇರ್ ನ ರಾಮಕುಮಾರ್ ನಾರಾಯಣನ್, ಓರ್ಕಾ ಸಂಘಟನೆಯ ಪ್ರತಿನಿಧಿಗಳಾದ ಮಾನಸ್ ದಾಸ್, ಅರ್ಚನಾ ತಾಯಡೆ, ಅರವಿಂದ್ ಅಯ್ಯಾಸ್ವಾಮಿ, ನಿಧಿ ಪ್ರತಾಪನೇನಿ, ಕೆ ಎಂ ಮೋಹನ್, ಕೃಷ್ಣಕುಮಾರ ಗೌಡ ಭಾಗವಹಿಸಿದ್ದರು.

ಮಲ್ಲೇಶ್ವರದ ಕಾಮಗಾರಿಗಳು..
ತಾವು ಪ್ರತಿನಿಧಿಸುತ್ತಿರುವ ಮಲ್ಲೇಶ್ವರಂ ಕ್ಷೇತ್ರದಲ್ಲಿ ವೈಟ್ ಟಾಪಿಂಗ್, ಒಳಚರಂಡಿ ಮತ್ತು ಕುಡಿಯುವ ನೀರಿನ ಕೊಳವೆ ಜೋಡಣೆ, ಹೊಸ ಮ್ಯಾನ್ಹೋಲ್ಗಳ ಅಳವಡಿಕೆ, ಡಕ್ಟ್ ನಿರ್ಮಾಣ ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು, ಡಿಸೆಂಬರ್ ವೇಳಗೆ ಬಹುತೇಕ ಪ್ರಮುಖ ಕಾಮಗಾರಿಗಳು ಪೂರ್ಣವಾಗಲಿ ಎಂದು ಅಶ್ವತ್ಥನಾರಾಯಣ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಸುಲಭವಾಗಿ ನಡೆಯುತ್ತದೆ. ಆದರೆ ವಸತಿ ಪ್ರದೇಶಗಳಲ್ಲಿ ರಸ್ತೆ ಅಭಿವೃದ್ಧಿ ಮಾಡುವಾಗ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ರಸ್ತೆಗಳ ಗುಂಡಿ ಮುಚ್ಚುವ ಕೆಲಸವು ಭಾರೀ ಮಳೆಯಿಂದಾಗಿ ನಿಧಾನವಾಗಿದೆ. ಮಳೆ ನಿಂತ ಕೂಡಲೇ ಈ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಂಡು, ಫೆಬ್ರವರಿ ಹೊತ್ತಿಗೆ ಮುಗಿಸಲಾಗುವುದು. ಅಲ್ಲಿಯವರೆಗೂ ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

30 ವರ್ಷ ರಸ್ತೆಯನ್ನು ಅಗೆಯಬೇಕಾದ ಅಗತ್ಯವೇ ಇಲ್ಲ
ಮಲ್ಲೇಶ್ವರಂ ನಗರದ ಹಳೆಯ ಬಡಾವಣೆಗಳಲ್ಲಿ ಒಂದಾಗಿದೆ. ಇಲ್ಲಿ ಬಹಳ ಹಿಂದೆ ಕೇವಲ 6 ಇಂಚಿನ ಡ್ರೈನೇಜ್ ಕೊಳವೆ ಹಾಕಲಾಗಿತ್ತು. ಈಗ 12 ಇಂಚಿನ ಪೈಪ್ ಹಾಕಲಾಗುತ್ತಿದೆ. ಜತೆಗೆ ಕುಸಿದು ಹೋಗಿದ್ದ ಹಳೆಯ ಮ್ಯಾನ್ಹೋಲ್ಗಳ ಜಾಗದಲ್ಲಿ ಹೊಸದಾಗಿ 3,000 ಮ್ಯಾನ್ಹೋಲ್ಗಳನ್ನು ನಿರ್ಮಿಸಲಾಗುತ್ತಿದೆ. ಹಾಗೆಯೇ, ಜನರ ಸುರಕ್ಷತೆ ದೃಷ್ಟಿಯಿಂದ ವಿದ್ಯುತ್ ಸಂಪರ್ಕಕ್ಕೆ ಡಕ್ಟ್ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪಾದಚಾರಿ ಮಾರ್ಗಗಳನ್ಜು ಜನಸ್ನೇಹಿಯಾಗಿ ಮಾಡುತ್ತಿದ್ದೇವೆ. ಇವೆಲ್ಲವೂ ಮುಗಿದರೆ ಮುಂದಿನ 30 ವರ್ಷ ಕಾಲ ಪುನಃ ಕ್ಷೇತ್ರದಲ್ಲಿ ರಸ್ತೆಯನ್ನು ಅಗೆಯಬೇಕಾದ ಅಗತ್ಯವೇ ಇರುವುದಿಲ್ಲ ಎಂದು ಸಚಿವರು ವಿವರಿಸಿದರು.
ಈ ವರ್ಷ ನವೆಂಬರ್ ನಲ್ಲೂ ಮಳೆ ನಿಂತಿಲ್ಲ. ಇಷ್ಟು ವಿಪರೀತ ಮಳೆ ಕಳೆದ 50 ವರ್ಷಗಳಿಂದ ಕಂಡಿರಲಿಲ್ಲ. ಹೀಗಾಗಿ ತೊಂದರೆಯಾಗುತ್ತಿರುವುದು ನಿಜ. ಕೇವಲ ಡಾಂಬರು ಹಾಕುವುದರಿಂದ ರಸ್ತೆಗಳ ಅಭಿವೃದ್ಧಿ ಮುಗಿಯುವುದಿಲ್ಲ. ಬದಲಿಗೆ ಪ್ರತಿಯೊಂದರಲ್ಲೂ ವೈಜ್ಞಾನಿಕ ವಿಧಾನಕ್ಕೆ ಈಗ ಒತ್ತು ಕೊಡಲಾಗುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications