ಬಿಜೆಪಿ ಅವಧಿಯಲ್ಲಿ ನೇಮಕವಾದರೆ ಕಾಂಗ್ರೆಸ್ ಹಗರಣ ಹೇಗಾಗುತ್ತದೆ? ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು, ಸೆಪ್ಟಂಬರ್ 28: ಕಳೆದ ಕೆಲವು ದಿನಗಳಿಂದ ಕೆಲವು ಮಾಧ್ಯಮಗಳು ಅಕ್ರಮವಾಗಿ ನೇಮಕಗೊಂಡ ಶಿಕ್ಷಕರ ಬಗ್ಗೆ ಬರೆಯುವಾಗ 'ಕಾಂಗ್ರೆಸ್ ಸರ್ಕಾರದ ಅವಧಿಯ ಶಿಕ್ಷಕರ ನೇಮಕ ಹಗರಣ' ಎಂದು ಬರೆಯುತ್ತಿದ್ದಾರೆ. ಇದು ಸರಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು, ಇದೇ ಸೆಪ್ಟಂಬರ್ 23 ರಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಲಾಗಿತ್ತು. ಅಂದು ಈ ನೇಮಕಾತಿ ಹಗರಣದಲ್ಲಿ ಆರೋಪಿತರ ಬಗ್ಗೆ, ಯಾವ ಯಾವ ಕಾಲದಲ್ಲಿ ನೇಮಕವಾಗಿದೆ, ಎಂಬುದರ ಹೆಸರು, ಅಕ್ರಮವಾಗಿ ಆದೇಶ ಪಡೆದ ದಿನಾಂಕ ಇತ್ಯಾದಿ ವಿವರಗಳನ್ನು ದಾಖಲೆ ಸಮೇತ ವಿವರಿಸಲಾಗಿದೆ. ಆದರೂ ಸಹ ಕೆಲವು ಮಾಧ್ಯಮಗಳು ಮತ್ತೆ ಕಾಂಗ್ರೆಸ್ ಸರ್ಕಾರದ ಕಾಲದ, ಸಿದ್ದರಾಮಯ್ಯ ಅವಧಿಯ ನೇಮಕಾತಿ ಹಗರಣ ಎಂದೆಲ್ಲ ಬರೆಯುತ್ತಿದ್ದಾರೆ ಎಂದರು.
ಶಾಲೆಯಲ್ಲಿ ಬೋಧನಾ ಅವಧಿ ಐದೂವರೆ ತಾಸು ಮಾತ್ರ- ನಿಯಮ ಉಲ್ಲಂಘಿಸಿದ ಖಾಸಗಿ ಶಾಲೆಗೆ ನೋಟೀಸ್!
ನನಗೆ ಲಭಿಸಿರುವ ದಾಖಲೆಗಳಂತೆ ಈ ಶಿಕ್ಷಕರುಗಳು ಯಾವ ಯಾವ ಅವಧಿಯಲ್ಲಿ ನೇಮಕಗೊಂಡಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳಿಗೆ ಮತ್ತೊಮ್ಮೆ ತಿಳಿಸಬಯಸುತ್ತೇನೆ. ದಸ್ತಗಿರಿಯಾಗಿರುವ 12 ಜನ ಶಿಕ್ಷಕರಲ್ಲಿ 7 ಜನರು 2019 ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ, ಸುರೇಶ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ವೇಳೆ ನೇಮಕವಾಗಿದ್ದಾರೆ.
ಸಮ್ಮಿಶ್ರ ಸರ್ಕಾರದ ವೇಳೆ 2ನೇಮಕ
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಉಳಿದ 5 ಜನರಲ್ಲಿ ಇಬ್ಬರು ನೇಮಕಗೊಂಡಿದ್ದಾರೆ. ಉಳಿದವರಲ್ಲಿ ಒಬ್ಬರು 2018ರಲ್ಲಿ, ಇನ್ನೊಬ್ಬರು 2015 ರಲ್ಲಿ ಹಾಗೂ ಮತ್ತೊಬ್ಬರು 2017ರಲ್ಲಿ ನೇಮಕಾತಿ ಆದೇಶ ಪಡೆದಿದ್ದಾರೆಂದು ದಾಖಲೆಗಳು ಹೇಳುತ್ತವೆ. 2012- 13ನೇ ಸಾಲಿನಲ್ಲಿ ಕರೆದಿದ್ದ ಶಿಕ್ಷಕರ ಹುದ್ದೆಗಳ ಸಂದರ್ಭದಲ್ಲಿ ಒಬ್ಬಾತ ಸೇರಿಕೊಂಡಿದ್ದಾನೆಂಬ ಮಾಹಿತಿ ಇದೆ. ಅದರ ನಂತರ 2015ರಲ್ಲಿ ಮತ್ತೊಮ್ಮೆ ಹುದ್ದೆಗಳನ್ನು ತುಂಬಿಕೊಳ್ಳಲು ಪ್ರಕ್ರಿಯೆಯು ನಡೆದಿತ್ತು ಎಂದು ಅವರು ವಿವರಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಅಕ್ರಮ ನೇಮಕಾತಿಗಳಿಗೆ ಸಿದ್ದರಾಮಯ್ಯ ಜವಾಬ್ದಾರಿ ಹೊರುತ್ತಾರಾ? ಪಿ. ರಾಜೀವ್ ಪ್ರಶ್ನೆ
ಅನುಮೋದನೆ ನೀಡಿದ ನಂತರವೇ ನೇಮಕಾತಿ
ಮಾಜಿ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ಮತ್ತು ಕಿಮ್ಮನೆ ರತ್ನಾಕರ್ ಅವರು ಸಹ ಮಾಧ್ಯಮಗಳಿಗೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆಂದು ವಿವರಿಸಿದ್ದಾರೆ. ಒಮ್ಮೆ ಆರ್ಥಿಕ ಇಲಾಖೆಯಿಂದ ಅನುಮೋದನೆ ನೀಡಿದ ನಂತರ ನೇಮಕಾತಿ ಪ್ರಕ್ರಿಯೆಯು ಪ್ರಾಧಿಕಾರದಿಂದ ನಡೆಯುತ್ತದೆ. ನೇಮಕಾತಿ ಪಟ್ಟಿಯು ಡಿಡಿಪಿಐ ಮತ್ತು ಜಂಟಿ ನಿರ್ದೇಶಕರುಗಳಿಂದ ಅನುಮೋದನೆಗೊಳ್ಳುತ್ತದೆ. ನೇರ ನೇಮಕಾತಿಗಳಾದ್ದರಿಂದ ಬೇರೆ ಯಾರದ್ದೂ ಹಸ್ತಕ್ಷೇಪಗಳು ಇರುವುದಿಲ್ಲವೆಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಅಕ್ರಮ ನಡೆದಿದ್ದರೆ ಕ್ರಮ ಜರುಗಿಸಿ
ಏನೇ ಆಗಲಿ, ಯಾರದೇ ಅವಧಿಯಲ್ಲಿ ನಡೆದಿದ್ದರೂ ಸಹ ಈ ರೀತಿಯ ದ್ರೋಹ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಜರುಗಿಸಲೇಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಉಲ್ಭಣಗೊಳ್ಳುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ನಿವಾರಿಸುವ ಕಡೆಗೆ ಸರ್ಕಾರ ಗಂಭೀರ ಪ್ರಯತ್ನ ಮಾಡಬೇಕು. ಜೊತೆಗೆ ಮಾಧ್ಯಮಗಳಿಗೆ ಸರ್ಕಾರ ಇಲ್ಲವೇ ಸಚಿವರುಗಳ ಕಛೇರಿಗಳು ತಪ್ಪು ಮಾಹಿತಿ ಕೊಡುವುದನ್ನು ನಿಲ್ಲಿಸಬೇಕು. ತನಿಖೆ ನಡೆಸುತ್ತಿರುವ ಸಂಸ್ಥೆ ಈ ಬಗ್ಗೆ ಕಾಲ ಕಾಲಕ್ಕೆ ಮಾಧ್ಯಮಗಳಿಗೆ ವಿವರಿಸಬೇಕು ಎಂದು ಹೇಳಿದರು.
ನಿರುದ್ಯೋಗ ಮಹಿಳೆಯರು ಶೇ.39- 40ರಷ್ಟಿದ್ದಾರೆ
ಒಟ್ಟಾರೆಯಾಗಿ ಈ ವಿಚಾರದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಬೇಕು ಹಾಗೂ ನ್ಯಾಯ ನಿಷ್ಟುರಾಗಿರಬೇಕೆಂದು ಆಗ್ರಹಿಸುತ್ತೇನೆ. ಇದೆಲ್ಲದರ ಜೊತೆಗೆ ನಿರುದ್ಯೋಗವು ರಾಜ್ಯದಲ್ಲಿ ಅಸಹನೀಯ ಮಟ್ಟಕ್ಕೆ ಮುಟ್ಟಿದೆ. ರಾಜ್ಯದಲ್ಲಿ ಪದವೀಧರ ಹೆಣ್ಣು ಮಕ್ಕಳ ನಿರುದ್ಯೋಗದ ಪ್ರಮಾಣ ಶೇ.39- 40 ರಷ್ಟು ಇದೆ. ಪದವೀಧರ ಯುವಕರ ನಿರುದ್ಯೋಗವು ಶೇ.35 ರವರೆಗೆ ಇದೆ. ಇರುವ ಒಂದೊಂದು ಹುದ್ದೆಗೆ 2-3 ಸಾವಿರ ಜನರು ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕುರಿತು ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯೂ ಇದೆ ಎಂದರು.