ಮಾಸ್ಕ್ ದಂಡ: ಬಿಬಿಎಂಪಿ ಮಾರ್ಷಲ್ಗಳ ಕಿರಿಕಿರಿ; ಆರ್. ಅಶೋಕ್ ಎಚ್ಚರಿಕೆ!
ಬೆಂಗಳೂರು, ಆ. 22: ನಾಳೆ(ಆ.23)ಯಿಂದ ರಾಜ್ಯಾದ್ಯಂದ ಶಾಲಾ-ಕಾಲೇಜುಗಳು ಆರಂಭವಾಗುತ್ತಿವೆ. ಒಂದೆಡೆ ಕೊರೊನಾ ಆತಂಕವಿದ್ದರೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಸರ್ಕಾರ ಕೂಡ ಮಕ್ಕಳ ಸುರಕ್ಷತೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಭರವಸೆ ಕೊಟ್ಟಿದೆ. ಆದರೂ ಕೂಡ ಪೋಷಕರಲ್ಲಿ ಆತಂಕ ಇದ್ದೇ ಇದೆ.
ಬೆಂಗಳೂರಿನಲ್ಲಿಯೂ ಶಾಲೆಗಳು ಆರಂಭವಾಗುತ್ತಿವೆ. ರಾಜ್ಯಕ್ಕೆ ಹೋಲಿಕೆ ಮಾಡಿದಲ್ಲಿ ಗಡಿ ಜಿಲ್ಲೆಗಳು ಹಾಗೂ ಬೆಂಗಳೂರಿಗೆ ಕೊರೊನಾ ವೈರಸ್ ಮೂರನೇ ಅಲೆಯ ಆತಂಕ ಸ್ವಲ್ಪ ಹೆಚ್ಚಾಗಿದೆ. ಹೀಗಾಗಿ ಗಡಿ ಜಿಲ್ಲೆಗಳು ಸೇರಿದಂತೆ ಬೆಂಗಳೂರಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ದ್ವಂದ್ವದಲ್ಲಿದ್ದಾರೆ. ಪೋಷಕೆ ದ್ವಂದ್ವಕ್ಕೆ ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟನೆ ಕೊಟ್ಟಿದ್ದಾರೆ. ಬೆಂಗಳೂರು ವ್ಯಾಪ್ತಿಯಲ್ಲಿ ಸರ್ಕಾರ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ? ಸಚಿವ ಆರ್. ಅಶೋಕ್ ಹೇಳಿರುವುದು ಮುಂದಿದೆ, ಓದಿ!

ಆತಂಕ ಬೇಡ ನಾವುದ್ದೇವೆ ಎಂದ ಅಶೋಕ್!
ಸರ್ಕಾರ ಆಗಸ್ಟ್ 23ರಿಂದ ಭೌತಿಕವಾಗಿ ಒಂಬತ್ತು ಮತ್ತು ಹತ್ತನೇ ತರಗತಿಗಳನ್ನು ಆರಂಭಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಶಾಲೆ ಆರಂಭಿಸುವ ಮೊದಲು ತಜ್ಞರ ಸಲಹೆಗಳನ್ನು ಪಡೆಯಲಾಗಿದೆ. ಕಳೆದೆರಡು ವರ್ಷಗಳಿಂದ ಶಾಲೆ ಬಂದ್ ಮಾಡಲಾಗಿದೆ. ಹೀಗಾಗಿ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿವೆ. ಶಾಲೆ ಆರಂಭ ಮಕ್ಕಳ ಶೈಕ್ಷಣಿಕ, ಬೌದ್ಧಿಕ ವಿಕಾಸಕ್ಕೆ ಅಗತ್ಯ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ತಯಾರಿ ಮಾಡಿಕೊಂಡಿದ್ದೇವೆ!
"ಬೆಂಗಳೂರಿನಲ್ಲಿ ಬಿಬಿಎಂಪಿ ಶಾಲೆಗಳನ್ನು ತೆರೆಯುತ್ತದೆ. ಶಾಲೆಗಳಿಂದ ಕೋವಿಡ್ ಹರಡದಂತೆ ತಡೆಯಲು ಅಗತ್ಯವಿರುವ ಎಲ್ಲ ತಯಾರಿಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ. ಶಾಲಾ ತರಗತಿಗಳಲ್ಲಿ ಮತ್ತು ಆವರಣಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ತುಂಬ ಯೋಚಿಸಿ ಈ ಸವಾಲಿನ ನಿರ್ಧಾರವನ್ನ ಸರ್ಕಾರ ಕೈಗೊಂಡಿದೆ. ನಾಳೆಯಿಂದಲೇ ಶಾಲೆಗಳು ಆರಂಭವಾಗಲಿದ್ದು, ಇದರ ಸಾಧಕ, ಬಾಧಕಗಳ ಮೇಲೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ" ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಪೋಷಕರು ಆತಂಕ ಪಡೆಬೇಕಿಲ್ಲ!
ಕೊರೊನಾ ಮೂರನೇ ಅಲೆಯ ಆತಂಕವಿದೆ. ಆದರೆ ಅದರ ಪರಿಣಾಮ ಹೆಚ್ಚಾಗಿ ಕಂಡು ಬಂದಿಲ್ಲ. ಹೀಗಾಗಿ ಶಾಲೆಗಳನ್ನು ಸರ್ಕಾರ ಆರಂಭಿಸುತ್ತಿದೆ. ಅದಕ್ಕೂ ಮೊದಲು ತಜ್ಞರ ಸಲಹೆಗಳನ್ನು ಪಡೆಯಲಾಗಿದೆ. ಆದರೂ ಸ್ವಲ್ಪ ಹೆಚ್ಚುಕಮ್ಮಿ ಆದಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಲಿದೆ. ಬೆಂಗಳೂರಿನಲ್ಲಿ ಯಾವುದೇ ಪೋಷಕರು ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳ ರಕ್ಷಣೆ ನಮ್ಮ ಹೊಣೆ. ಜೊತೆಗೆ ಮುಂದಿನ ದಿನಗಳಲ್ಲಿ ಏಳು, ಎಂಟನೇ ತರಗತಿಗಳನ್ನು ಕೂಡಾ ತೆರೆಯಲು ಕೂಡ ಇದು ನೆರವಾಗಲಿದೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಜೊತೆಗೆ ರಾಜಕಾರಣಿಗಳಿಗೆ ತಿಳುವಳಿಕೆಯನ್ನೂ ಅಶೋಕ್ ಕೊಟ್ಟಿದ್ದಾರೆ.
Recommended Video

ಬೆಂಗಳೂರಿನಲ್ಲಿ ಮಾಸ್ಕ್ ದಂಡ: ಆರ್. ಅಶೋಕ್ ಎಚ್ಚರಿಕೆ!
ಮಾಸ್ಕ್ ಹಾಕುವ ಕುರಿತು ಮಾರ್ಷಲ್ಗಳು ಬೆಂಗಳೂರಿನಲ್ಲಿ ಕಿರಿಕಿರಿ ಮಾಡುತ್ತಿದ್ದಾರೆ, ಆದರೆ ರಾಜಕಾರಣಗಳು ಮಾಸ್ಕ್ ಹಾಕುವುದೇ ಇಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಕಂದಾಯ ಸಚಿವ ಆರ್. ಅಶೋಕ್ ಉತ್ತರಿಸಿದ್ದಾರೆ. "ನಮ್ಮ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಅದು ಬೇರೆ ಯಾರದ್ದೆ ರಕ್ಷಣೆಗಾಗಿ ಅಲ್ಲ, ನಮ್ಮ ಮತ್ತು ಇತರರ ಸುರಕ್ಷತೆಗೆ ಧರಿಸಲೇಬೇಕು. ಇದರಲ್ಲಿ ಯಾವುದೇ ಬೇಧ, ಭಾವ ಇಲ್ಲ. ರಾಜಕಾರಣಿಗಳು, ಅಧಿಕಾರಿಗಳು, ಜನಸಾಮಾನ್ಯರು ಯಾರಾದರೂ ಸರಿಯೇ, ಮಾಸ್ಕ್ ಧರಿಸುವುದು ಕಡ್ಡಾಯ. ಅದರಲ್ಲಿ ಯಾವ ವಿನಾಯಿತಿಯೂ ಇಲ್ಲ. ತಪ್ಪಿದ್ದಲ್ಲಿ ಖಂಡಿತಾ ದಂಡ ಹಾಕಬೇಕಾಗುತ್ತದೆ" ಎಂದು ಕಂದಾಯ ಸಚಿವ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications