ಬಿಬಿಎಂಪಿ ಮೇಯರ್ ಹುದ್ದೆ ಈ ಬಾರಿ ಜೆಡಿಎಸ್ ಪಾಲು?
ಬೆಂಗಳೂರು, ಸೆಪ್ಟೆಂಬರ್ 04 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ದಿನಾಂಕ ನಿಗದಿಯಾಗಿದೆ. ಕಾಂಗ್ರೆಸ್ನಲ್ಲಿ ಮೇಯರ್ ಪಟ್ಟಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ. ಮತ್ತೊಂದು ಕಡೆ ಜೆಡಿಎಸ್ ಮೇಯರ್ ಪಟ್ಟ ನೀಡಿ ಎಂಬ ಬೇಡಿಕೆ ಇಟ್ಟಿದೆ.
ಸೆ.28ರಂದು ಬಿಬಿಎಂಪಿಯ ನೂತನ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಮೇಯರ್ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಕಾರ್ಪೊರೇಟರ್ಗಳು ಈಗಾಗಲೇ ಲಾಬಿ ಆರಂಭಿಸಿದ್ದಾರೆ.
ಬಿಬಿಎಂಪಿ ಮೇಯರ್ ಆಯ್ಕೆ ದಿನಾಂಕ ನಿಗದಿ, ಚುನಾವಣೆ ಹೇಗೆ?
'ಮೇಯರ್ ಆಯ್ಕೆ ವಿಚಾರದಲ್ಲಿ ಪಕ್ಷದ ಎಲ್ಲಾ ಕಾರ್ಪೊರೇಟರ್ಗಳ ಜೊತೆ ಚರ್ಚಿಸಿ ನಿರ್ಧಾರವನ್ನು ಕೈಗೊಳ್ಳುತ್ತೇವೆ' ಎಂದು ಬೆಂಗಳೂರು ಅಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.
ಯಾರಾಗಲಿದ್ದಾರೆ ಬಿಬಿಎಂಪಿಯ ನೂತನ ಮೇಯರ್?
5 ಸಂಸದರು, 9 ರಾಜ್ಯಸಭಾ ಸದಸ್ಯರು, 19 ವಿಧಾನ ಪರಿಷತ್ ಸದಸ್ಯರು, 28 ಶಾಸಕರು, 198 ಪಾಲಿಕೆ ಸದಸ್ಯರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ. ಮೇಯರ್ ಯಾರಾಗುತ್ತಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಬಿಬಿಎಂಪಿ ಮೇಯರ್ ಹುದ್ದೆ ಲಿಂಗಾಯತರಿಗೆ, ರಾಹುಲ್ ಗಾಂಧಿಗೆ ಪತ್ರ!
ಯಾರಾಗಲಿದ್ದಾರೆ ಮೇಯರ್?
ಬಿಬಿಎಂಪಿ ಮೇಯರ್ ಆಗಲು ಜಯನಗರ ವಾರ್ಡ್ ಗಂಗಾಬಿಕೆ, ಗಾಂಧಿನಗರ ವಾರ್ಡ್ ಆರ್.ಕೆ.ಲತಾ, ಶಾಂತಿನಗರ ವಾರ್ಡ್ನ ಪಿ.ಸೌಮ್ಯಾ, ಲಿಂಗರಾಜಪುರ ವಾರ್ಡ್ ಲಾವಣ್ಯ ಗಣೇಶ್ ರೆಡ್ಡಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.
ತಮ್ಮ-ತಮ್ಮ ಕ್ಷೇತ್ರದ ಶಾಸಕರ ಮೂಲಕ ಮೇಯರ್ ಹುದ್ದೆಗೆ ಕಾರ್ಪೊರೇಟರ್ಗಳು ಲಾಬಿ ನಡೆಸಿದ್ದಾರೆ. ಆರ್.ಕೆ.ಲತಾ ಅವರ ಪರವಾಗಿ ದಿನೇಶ್ ಗುಂಡೂರಾವ್ ಅವರು ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮೇಯರ್ ಆಯ್ಕೆ ಕಗ್ಗಂಟು?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ. ಮೂರು ವರ್ಷಗಳಿಂದ ಮೇಯರ್ ಹುದ್ದೆಯನ್ನು ಕಾಂಗ್ರೆಸ್, ಉಪ ಮೇಯರ್ ಹುದ್ದೆಯನ್ನು ಜೆಡಿಎಸ್ ಹಂಚಿಕೊಂಡಿವೆ.
ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದ್ದರಿಂದ, ಜೆಡಿಎಸ್ ಮೇಯರ್ ಪಟ್ಟಕ್ಕಾಗಿ ಬೇಡಿಕೆ ಇಡುತ್ತಿದೆ. ಮೂರು ವರ್ಷದಿಂದ ಮೇಯರ್ ಪಟ್ಟ ನಿಮಗೆ ಸಿಕ್ಕಿದೆ. ಈ ಬಾರಿ ಬಿಟ್ಟುಕೊಡಿ ಎಂಬುದು ಜೆಡಿಎಸ್ ಬೇಡಿಕೆ. ಇದಕ್ಕೆ ಕಾಂಗ್ರೆಸ್ ಇನ್ನೂ ಒಪ್ಪಿಗೆ ಸೂಚಿಸಿಲ್ಲ.
ಗಂಗಾಬಿಕೆ ಅವರಿಗೆ ಬೆಂಬಲ
ಜಯನಗರ ವಾರ್ಡ್ನ ಗಂಗಾಬಿಕೆ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಎರಡು ಬಾರಿ ಗೆಲುವು ಸಾಧಿಸಿರುವ ಗಂಗಾಬಿಕೆ ಅವರಿಗೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಅವರ ಬೆಂಬಲವಿದೆ.
ಗಂಗಾಬಿಕೆ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಮೇಯರ್ ಪಟ್ಟವನ್ನು ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ.
ಪಿ.ಸೌಮ್ಯಾ ಅವರ ಹೆಸರು ಮುಂಚೂಣಿಯಲ್ಲಿ
ಶಾಂತಿನಗರ ವಾರ್ಡ್ನ ಕಾರ್ಪೊರೇಟರ್ ಪಿ.ಸೌಮ್ಯಾ ಹೆಸರು ಮುಂಚೂಣಿಯಲ್ಲಿದೆ. 2016ರಲ್ಲಿಯೇ ಪಿ.ಸೌಮ್ಯಾ ಅವರು ಮೇಯರ್ ಪಟ್ಟದ ಆಕಾಂಕ್ಷಿಯಾಗಿದ್ದರು. ಆದರೆ, ಹಿರಿತನದ ಆಧಾರದ ಮೇಲೆ ಜಿ.ಪದ್ಮಾವತಿ ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ಶಾಸಕ ಎನ್.ಎ.ಹ್ಯಾರೀಸ್ ಅವರು ಸೌಮ್ಯಾ ಅವರ ಪರವಾಗಿ ನಿಂತಿದ್ದಾರೆ.
ಮೈತ್ರಿ ಸರ್ಕಾರ
2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ, 76 ಸ್ಥಾನ ಪಡೆದ ಕಾಂಗ್ರೆಸ್, 14 ಸ್ಥಾನ ಪಡೆದ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿದ್ದವು. ಏಳು ಪಕ್ಷೇತರ ಅಭ್ಯರ್ಥಿಗಳು ಮೈತ್ರಿಗೆ ಬೆಂಬಲ ಸೂಚಿಸಿದ್ದರು.
ಕಾಂಗ್ರೆಸ್ ಮೇಯರ್ ಪಟ್ಟವನ್ನು, ಜೆಡಿಎಸ್ ಉಪ ಮೇಯರ್ ಪಟ್ಟವನ್ನು ಹಂಚಿಕೊಂಡಿವೆ.