ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಗಣ್ಯರು ಏನಂತಾರೆ?
ಬೆಂಗಳೂರು, ಸೆಪ್ಟೆಂಬರ್ 6: ಹಿರಿಯ ಪತ್ರಕರ್ತೆ, ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್(55) ಹತ್ಯೆ ಕರ್ನಾಟಕದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ.
ಅಪರೂಪದ ಪತ್ರಕರ್ತೆ ಗೌರಿ ಲಂಕೇಶ್ ವ್ಯಕ್ತಿ ಪರಿಚಯ
ಮಹಿಳಾ ಪತ್ರಕರ್ತೆಯಾಗಿ ಸದಾ ಒಂದಿಲ್ಲೊಂದು ಕ್ರಾಂತಿಯ ಹಾದಿ ತುಳಿಯುತ್ತ, ಸಾಮಾಜಿಕ ಬದಲಾವಣೆಗೆ ತುಡಿಯುತ್ತ ಹಲವು ಅಭಿಮಾನಿಗಳನ್ನು ಸಂಪಾದಿಸಿದ್ದ ಗೌರಿ ಲಂಕೇಶ್ ಇನ್ನು ನೆನಪು ಮಾತ್ರ ಎಂದರೆ ಹಲವರಿಗೆ ನಂಬುವುದಕ್ಕೆ ಕಷ್ಟವಾಗಬಹುದು. ಆದರೆ ನಡೆಯಬಾರದ ಘಟನೆಯೊಂದು ನಡೆದುಬಿಟ್ಟಿದೆ.
ಗೌರಿ ಲಂಕೇಶ್ ಹತ್ಯೆ ಪ್ರಾಥಮಿಕ ತನಿಖೆಯ ಮುಖ್ಯಾಂಶಗಳು
ಒಬ್ಬ ನಿರ್ಭೀತ ಪತ್ರಕರ್ತೆಯ ಹತ್ಯೆ ಇಡೀ ರಾಜ್ಯದಾದ್ಯಂತ ಆತಂಕ ಸೃಷ್ಟಿಸಿದೆ. ಅಪರಾಧಿಗಳ ಶೀಘ್ರ ಪತ್ತೆಗೆ ತ್ವರಿತವಾಗಿ ವಿಚಾರಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ ನೀಡಿದ್ದಾರೆ. ಹಾಗೆಯೇ ವೈಚಾರಿಕ ಭಿನ್ನಾಭಿಪ್ರಾಯಗಳನ್ನೆಲ್ಲ ಬದಿಗಿಟ್ಟು ಹಲವು ಗಣ್ಯರು ಗೌರಿ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಈಗಲೇ ಪ್ರತಿಕ್ರಿಯಿಸುವುದು ಕಷ್ಟ
ಗೌರಿ ಲಂಕೇಶ್ ಹತ್ಯೆಯನ್ನು ನಾನು ಖಂಡಿಸುತ್ತೇನೆ. ಇದಕ್ಕೆ ಕಾರಣ ಸೈದ್ಧಾಂತಿಕ ಭಿನ್ನಾಭಿಪ್ರಾಯವೇ ಅಥವಾ ವೈಯಕ್ತಿಕ ಕಾರಣವೇ ಎಂಬುದರ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ತನಿಖೆ ನಂತರ ಸತ್ಯ ಹೊರಬರಲಿದೆ. ಜೀವ ಬೆದರಿಕೆ ಇದೆ ಎಂದು ಮೊದಲೇ ಮಾಹಿತಿ ನೀಡಿದ್ದರೆ ಪೊಲೀಸ್ ರಕ್ಷಣೆ ನೀಡುತ್ತಿದ್ದೆವು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ
ಖ್ಯಾತ ಪತ್ರಕರ್ತೆ, ಸಾಹಿತಿ, ಚಿಂತಕಿ ಗೌರಿ ಲಂಕೇಶ್ ಹತ್ಯೆ ತೀವ್ರ ಆಘಾತ ತಂದಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂಥ ಸಂಗತಿ. ರಾಜ್ಯ ಸರ್ಕಾರ ಹಂತಕರನ್ನು ಬಂಧಿಸುವಲ್ಲಿ ಶೀಘ್ರ ಕ್ರಮ ಕೈಗೊಳ್ಳಲಿ. ಅವರ ಆಪ್ತೇಷ್ಟರಿಗೆ, ಅಭಿಮಾನಿಗಳಗೆ ಈ ದುಃಖ ಸಹಿಸುವ ಶಕ್ತಿ ಸಿಗಲಿ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಹತ್ಯೆ ಖಂಡನೀಯ
ಈ ಹತ್ಯೆ ನಿಜಕ್ಕೂ ಖಂಡನೀಯ. ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ ಗೌರಿ ಲಂಕೇಶ್ ರ ಸಾಮಾಜಿಕ ಕಳಕಳಿ ಮೆಚ್ಚುವಂಥದು. ದುಷ್ಕರ್ಮಿಗಳನ್ನು ಸರ್ಕಾರ ತಕ್ಷಣವೇ ಬಂಧಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಹೊಡೆತ
ಈ ರೀತಿಯ ಅಂತ್ಯ ಯಾರೂ ಊಹಿಸಿರಲಿಲ್ಲ. ಇದು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಬಹುದೊಡ್ಡ ಹೊಡೆತ. ಈ ನಿಟ್ಟಿನಲ್ಲಿ ಸಕ್ರಿಯರಾಗಿರುವವರನ್ನು ಇಂಥ ಹೊಡೆತಗಳು ವಿಚಲಿತರನ್ನಾಗಿ ಮಾಡುವುದು ಖಚಿತ ಎಂದು ಸಾಹಿತಿ ಚಂದ್ರಶೇಖರ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ದಿಟ್ಟ ಪತ್ರಕರ್ತೆ
ಸ್ವತಂತ್ರವಾಗಿ ಚಿಂತನೆ ನಡೆಸುತ್ತಿದ್ದ ಗೌರಿ ಲಂಕೇಶ್ ಹತ್ಯೆ ಖಂಡನೀಯ. ತಂದೆ ಲಂಕೇಶ್ ರಂತೆಯೇ ದಿಟ್ಟ ಪತ್ರಕರ್ತೆಯಾಗಿದ್ದ ಅವರನ್ನು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಮೆಚ್ಚಿಕೊಂಡಿದ್ದೆ. ಈ ಹತ್ಯೆ ಅತೀವ ನೋವನ್ನುಂಟುಮಾಡಿದೆ. ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಮಾಡಿ ಶಿಕ್ಷಿಸಬೇಕು ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟಿದ್ದಾರೆ.