ಮಳೆ ಅವಾಂತರ: ಬೆಂಗಳೂರಿನ ಶಾಲೆಗಳಲ್ಲಿ ಮತ್ತೆ ಆನ್ಲೈನ್ ತರಗತಿ ಪ್ರಾರಂಭ
ಬೆಂಗಳೂರು, ಸೆಪ್ಟೆಂಬರ್ 03: ಬೆಂಗಳೂರಿನಲ್ಲಿ ಮಳೆಯು ಸೃಷ್ಟಿಸಿದ ಅವಾಂತರದಿಂದ ಜಲಾವೃತ, ಕೆಟ್ಟ ರಸ್ತೆಗಳು ಮತ್ತು ಟ್ರಾಫಿಕ್ ದಟ್ಟಣೆಯಂತಹ ಸಮಸ್ಯೆಗಳು ಉಲ್ಬಣಗೊಂಡಿರುವುದರಿಂದ ಕೆಲವು ಶಾಲೆಗಳು ಸಾಂಕ್ರಾಮಿಕ ಸಮಯದಲ್ಲಿ ಅಳವಡಿಸಿಕೊಂಡ ಆನ್ಲೈನ್ ತರಗತಿಗಳನ್ನು ನಡೆಸಲು ಮುಂದಾಗಿವೆ.
ರಸ್ತೆಯಲ್ಲಿ ನೀರಿನ ಪ್ರವಾಹ ಮತ್ತು ಇತರ ಅಪಾಯಗಳ ಭಯದಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಮಳೆ ನೀರಿನಿಂದ ಉಂಟಾದ ಸಮಸ್ಯೆ ಬಗ್ಗೆ ಹಲವು ಬಾರಿ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾರೂ ಕೇಳಲು ಮುಂದಾಗಿಲ್ಲ. ನಾವು ನಮ್ಮ ಮಕ್ಕಳನ್ನು ಎತ್ತಿಕೊಂಡು ಹೋಗಿ ಶಾಲೆಗೆ ಬಿಡಬೇಕು. ಅಲ್ಲದೆ ನಮಗೆ ರಸ್ತೆ ಬಗ್ಗೆ ಅಧಿಕ ಭಯವಿದೆ ಎಂದು ಪೋಷಕರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕಳಪೆ ಹವಾಮಾನ ಪರಿಸ್ಥಿತಿಗಳನ್ನು ನೋಡಿ ಕೆಲವು ಶಾಲೆಗಳು ಈಗಾಗಲೇ ಆನ್ಲೈನ್ ತರಗತಿಗಳನ್ನು ನಡೆಸುತ್ತಿವೆ. ನಗರದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ವೈಟ್ಫೀಲ್ಡ್ನಲ್ಲಿರುವ ಇನ್ವೆಂಚರ್ ಅಕಾಡೆಮಿ, ವಾರದಿಂದಲೇ ಆನ್ಲೈನ್ ತರಗತಿಗಳನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದೆ.
ಬೆಂಗಳೂರು:ರಸ್ತೆ ಜಲಾವೃತ, ಬಿಟಿಪಿ ಕೆಲಸಕ್ಕೆ ಮೆಚ್ಚುಗೆ ಬಿಬಿಎಂಪಿ ವಿರುದ್ಧ ಆಕ್ರೋಶ
ಈ ಬಾರಿಯ ಮುಂಗಾರು ಮಳೆಯು ನಗರಕ್ಕೆ ಹೊರೆಯಾಗಿದ್ದು, ಮೂಲಸೌಕರ್ಯಗಳ ಮೇಲೆ ಹಾನಿಯನ್ನು ಮುಂದುವರೆಸುತ್ತಿರುವುದರಿಂದ ನಾವು ಈ ವಾರ ಆನ್ಲೈನ್ ತರಗತಿಗಳನ್ನು ನಡೆಸಲು ಮುಂದಾಗಿದ್ದೇವೆ. ಇಂಟರ್ನೆಟ್ ಮತ್ತು ವಿದ್ಯುತ್ ಕೊರತೆ, ಅಪಾಯಕಾರಿ ಹೊಂಡಗಳಿಂದ ಕೂಡಿದ ರಸ್ತೆಗಳು ಮತ್ತು ನಂತರದ ಸಂಚಾರ ದಟ್ಟಣೆಗಳು ನಮ್ಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮನೆಯಲ್ಲಿಯೇ ಇರಿಸುವಂತೆ ಮಾಡುತ್ತಿವೆ ಎಂದು ಶಾಲೆಯು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ತಿಳಿಸಿದೆ.
ಆಗಸ್ಟ್ 30 ರಂದು ಶಾಲೆಗಳಿಗೆ ರಜೆ ನೀಡಲಾಗಿತ್ತು
ಉತ್ತರ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಹವಾಮಾನ ಪರಿಸ್ಥಿತಿಗಳು, ಪ್ರವಾಹ ಮತ್ತು ಕಳಪೆ ಮೂಲಸೌಕರ್ಯದಿಂದಾಗಿ ಇತರ ಖಾಸಗಿ ಶಾಲೆಗಳು ಸಹ ಆನ್ಲೈನ್ ತರಗತಿ ನಡೆಸಲು ಮುಂದಾಗಿವೆ. ವಾಸ್ತವವಾಗಿ ಇತ್ತೀಚಿನ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯು ಆಗಸ್ಟ್ 30 ರಂದು ಸರ್ಕಾರಕ್ಕೆ ಆದೇಶ ನೀಡಿ ಶಾಲೆಗಳನ್ನು ಮುಚ್ಚುವಂತೆ ಮಾಡಿತು.
ಜ್ವರ, ನೆಗಡಿ, ಕೆಮ್ಮುನಂತಹ ಸಾಮಾನ್ಯ ರೋಗ
ಸಾಂಕ್ರಾಮಿಕ ರೋಗದ ಮೊದಲು ಕಂಡು ಕೇಳರಿಯದ ಆನ್ಲೈನ್ ತರಗತಿಗಳನ್ನು ನಡೆಸುವ ಸಮಸ್ಯೆಯು ಕಳಪೆ ಹವಾಮಾನ ಪರಿಸ್ಥಿತಿಗಳಲ್ಲಿ ಅಥವಾ ಕೋವಿಡ್ ಹೊರತುಪಡಿಸಿ ವೈದ್ಯಕೀಯ ಕಾಳಜಿಯ ಸಮಯದಲ್ಲಿ ಶಾಲೆಗಳಿಗೆ ಈಗ ಜನಪ್ರಿಯ ಆಯ್ಕೆಯಾಗಿದೆ. ಕಳೆದ ತಿಂಗಳು ಕೆಲವು ಶಾಲೆಗಳು ಆನ್ಲೈನ್ ತರಗತಿ ನಡೆಸಲು ಮುಂದಾದವು. ಏಕೆಂದರೆ ಶಾಲಾ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಂತ ಸಮಸ್ಯೆಗಳು ಕಂಡುಬಂದಿದ್ದವು.
ಆಫ್ಲೈನ್ ಮತ್ತು ಆನ್ಲೈನ್ ತರಗತಿ
ಆಫ್ಲೈನ್ ತರಗತಿಗಳು ಪ್ರಾರಂಭವಾದಾಗ, ಕೆಲವು ಖಾಸಗಿ ಶಾಲೆಗಳು ಅಸಮರ್ಪಕ ಸಾರಿಗೆ ಮತ್ತು ವಿದ್ಯಾರ್ಥಿಗಳ ಕಡೆಯಿಂದ ಕಳಪೆ ಹಾಜರಾತಿಯಿಂದಾಗಿ ಆನ್ಲೈನ್ ತರಗತಿಗಳನ್ನು ಮುಂದುವರಿಸಲು ಆದ್ಯತೆ ನೀಡಿದವು. ಆನ್ಲೈನ್ ತರಗತಿಗಳಿಗೆ ಬದಲಾದ ಶಾಲೆಗಳ ಸಂಖ್ಯೆಯು ಸೀಮಿತವಾಗಿರುವಂತೆ ತೋರುತ್ತಿದೆ, ಆದರೆ ಇತರ ಶಾಲೆಗಳು ಸಹ ಈ ಹಿಂದೆ ಕಳಪೆ ಹವಾಮಾನದ ಕಾರಣದಿಂದಾಗಿ ಆಫ್ಲೈನ್ ಮತ್ತು ಆನ್ಲೈನ್ ತರಗತಿಗಳ ನಡುವೆ ಬದಲಾಗಿವೆ.
ರಸ್ತೆಗಳಲ್ಲಿ ನಡುಮಟ್ಟದ ನೀರು
ಕಳೆದ ಒಂದು ವಾರದಿಂದ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರಿಸುತ್ತಿದ್ದು, ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಹೊರ ವರ್ತುಲ ರಸ್ತೆಗಳು, ವೇಟ್ಫೀಲ್ಡ್ನ ಭಾಗದ ರಸ್ತೆಗಳಂತು ನಡುಮಟ್ಟದ ನೀರು ನಿಂತು ಇನ್ನೂ ತೆರವು ಆಗಿಲ್ಲ. ಬೆಂಗಳೂರಿನಲ್ಲಿ ನಿತ್ಯ ಮಧ್ಯಾಹ್ನದ ನಂತರ ಸುರಿಯುತ್ತಿರುವ ಭಾರಿ ಮಳೆಯು ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಇದೀಗ ಮತ್ತೆ ಮಳೆ ಮುಂದುವರಿಯುವ ಮುನ್ಸೂಚನೆ ಇದ್ದು ಇದು ಸೆಪ್ಟೆಂಬರ್ 6ರವರೆಗೂ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.