ಮೆಟ್ರೋ ಎರಡನೇ ಹಂತದ ಕಾಮಗಾರಿಯಲ್ಲಿ ಎರಡೂ ನಕ್ಷೆಗೂ ಅಪಸ್ವರ
ಬೆಂಗಳೂರು, ನವೆಂಬರ್ 23 : ಮೆಟ್ರೋ ಎರಡನೇ ಹಂತದ ಕಾಮಗಾರಿ ಯೋಜನೆಯಲ್ಲಿ ಬರುವ ಗೊಟ್ಟಿಗೆರೆ-ನಾಗವಾರ ಮಾರ್ಗದ ಕಾಮಗಾರಿ ಪ್ರಾರಂಭದ ಹಂತದಲ್ಲಿದೆ ಇದೀಗ ಮೂಲನಕ್ಷೆಗೂ ಅಪಸ್ವರ ಕೇಳಿಬಂದಿದೆ.
ಪರಿಷ್ಕೃತ ಪಟ್ಟಿಯನ್ನು ಪರಿಗಣಿಸುವಂತೆ ಬಿಎಂಆರ್ ಸಿ ಎಲ್ ಮೇಲೆ ಒತ್ತಡ ಹಾಕಲಾಗುತ್ತಿದೆ. ಮೂಲ ನಕ್ಷೆಯು ಕಂಟೋನ್ಮೆಂಟ್ ಮೂಲಕ ಹಾದುಹೋಗುತ್ತದೆ. ಹೀಗೆ ಹಾದು ಹೋಗುವ ಮಾರ್ಗದ ಮಧ್ಯೆ ಸುರಕ್ಷತೆ ದೃಷ್ಟಿಯಿಂದ ದೊಡ್ಡ ಬಾವಿ ಆಕಾರದ ಗುಂಡಿಯನ್ನು (ಶಾಫ್ಟ್) ತೆರೆಯಬೇಕಾಗುತ್ತದೆ. ಈ ಶಾಫ್ಟ್ ಮಾಂಗಲ್ಯ ಅಪಾರ್ಟ್ ಮೆಂಟ್ ಇರುವ ಜಾಗದಲ್ಲೇ ಬರುತ್ತದೆ. ಹಾಗಾಗಿ ಅಪಾರ್ಟ್ ಮೆಂಟ್ ಮತ್ತು ಸುತ್ತಲಿನ ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಲಿದೆ. ಇದಕ್ಕೆ ಈಗ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿದೆ.

ಪರಿಷ್ಕೃತ ನಕ್ಷೆಯಲ್ಲಿ ಯಾವೊಂದು ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸುರಕ್ಷತೆ ಆರ್ಥಿಕ ದೃಷ್ಟಿಯಿಂದಲೂ ಪರಿಷ್ಕೃತ ನಕ್ಷೆ ಸೂಕ್ತ ಎಂದು ಸ್ವತಃ ನೀವೇ (ಬಿಎಂಆಆರ್ ಸಿಎಲ್ )ಹೇಳುತ್ತಿದ್ದೀರಿ, ಪರ್ಯಾಯ ಮಾರ್ಗ ಇರುವಾಗ, ಭೂಸ್ವಾಧೀನ ಯಾಕೆ? ಎಂದು ಸುಮಾರು 59 ಫ್ಲ್ಯಾಟ್ ಗಳಿರುವ ಮಾಂಗಲ್ಯ ಅಪಾರ್ಟ್ ಮೆಂಟ್ ನಿವಾಸಿಗಳು ಬಿಎಂಆರ್ ಸಿ ಎಲ್ ಅಧಿಕಾರಿಗಳನ್ನು ಕೇಳುತ್ತಿದ್ದಾರೆ.
ಈ ಕುರಿತು ಈಗಾಗಲೇ ಮಾಂಗಲ್ಯ ಅಪಾರ್ಟ್ ಮೆಂಟ್ ನಿವಾಸಿಗಳ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಬಿಎಂಆರ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ಅವರನ್ನು ಭೇಟಿ ಮಾಡಿ, ಮನವಿ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಹಾಗೊಂದು ವೇಳೆ ಮೂಲನಕ್ಷೆಯೇ ಅಂತಿಮವಾದರೆ, ಮುಂದಿನ ಹೋರಾಟದ ಹೆಜ್ಜೆ ಹೇಗಿರಬೇಕು ಎಂಬುದರ ಬಗ್ಗೆ ಚರ್ಚಿಸಲು ಸಭೆಯನ್ನೂ ಕೂಡ ನಡೆಸಲಿದ್ದಾರೆ.
ಸುತ್ತಲಿನ ಕಟ್ಟಡಕ್ಕೂ ಧಕ್ಕೆ: ಮೂಲನಕ್ಷೆ ಪ್ರಕಾರ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಮುಂದಾದರೆ, ಖಂಡಿತವಾಗಿಯೂ ನಾವು ಬಿಎಂಆರ್ ಸಿಎ ಎಲ್ ಹಾಗೂ ಸರ್ಕಾಋದ ಮೇಲೆ ಒತ್ತಡ ತರಬೇಕಾಗುತ್ತದೆ. ಹತ್ತಾರು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ಈಗ ನಿಗಮದ ಮುಂದೆ ಪರ್ಯಾಯ ಆಯ್ಕೆ ಇರುವುದರಿಂದ ಅದನ್ನೇ ಪರಿಗಣಿಸಲು ಮನವಿ ಮಾಡಬೇಕಾಗುತ್ತದೆ ಎಂದು ಮಾಂಗಲ್ಯ ಅಪಾರ್ಟ್ ಎಂಟ್ ನಿವಾಸಿಗಳ ಹಿರಕ್ಷಣಾ ವೇದಿಕೆ ಕಾರ್ಯದರ್ಶಿ ವಿನೋದ್ ತಿಳಿಸಿದರು.
ಈ ಮಧ್ಯೆ ಪರಿಷ್ಕೃತ ನಕ್ಷೆಗೆ ಈಗಾಗಲೇ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದು, ಜಂಬೂ ಬಜಾರ್ ನಿವಾಸಿಗಳು ಸೇರಿದಂತೆ ಹಲವು ಹೋರಾಟಗಾರರು ಕಂಟೋನ್ಮೆಂಟ್ ಮೂಲಕವೇ ಹಾದುಹೋಗಬೇಕು ಎಂದು ಪಟ್ಟುಹಿಡಿದಿದ್ದಾರೆ.
ಇದಕ್ಕೆ ಸಂಸದ ಪಿ.ಸಿ. ಮೋಹನ್, ರಾಜ್ಯಸಭಾ ಸದಸ್ಯೆ ರಾಜೀವ್ ಚಂದ್ರಶೇಖರ್ ಕೂಡ ಕೈಜೋಡಿಸಿದ್ದಾರೆ. ಹೀಗೆ ಎರಡೂ ಮಾರ್ಗಗಳಿಗೂ ವಿರೋಧಗಳು ಕೇಳಿ ಬರುತ್ತಿರುವ ಕಾರಣ ಬಿಎಂಆರ್ ಸಿಎಲ್ ಗೆ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.












Click it and Unblock the Notifications