ಎರಡು ವರ್ಷ ನಿಂತಲ್ಲೇ ನಿಂತಿದ್ದ ಕಲರ್ ಕಾರು : ಕಾರನಲ್ಲಿತ್ತು ಶವ..!
ಬೆಂಗಳೂರು, ಮೇ13: ಅದೊಂದು ಕಾರು ನಿಂತಲ್ಲೇ ನಿಂತು ಬರೊಬ್ಬರಿ ಎರಡು ವರ್ಷಗಳಾಗಿತ್ತು. ಕಾರಿಗೆ ಕಲರ್ ಫುಲ್ ಬಣ್ಣ ಬಳಿಯಲಾಗಿತ್ತು. ಮುಂಜಾನೆ ಆ ಕಾರಿನ ಬಳಿಯಲ್ಲಿ ವಿಚಿತ್ರವಾಗಿ ವಾಸನೆ ಬರತೊಡಗಿತ್ತು. ಜನರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಈ ವೇಳೆ ಬಂದು ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಪತ್ತೆಯಾಯ್ತು ಪುರುಷನ ಕೊಳೆತ ಶವ.
ಸಿನಿಮಾಗೆ ಬಳಕೆಯಾಗುತ್ತಿದ್ದ ಕಾರು..!
ರಾಜಾಜಿನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ರೆಟ್ರೋ ಸ್ಟೈಲ್ ನಲ್ಲಿ ಕಲರ್ ಫುಲ್ ಆಗಿದ್ದ ಕಾರು ನಿಂತಿತ್ತು. ಎರಡು ವರ್ಷದ ಹಿಂದೆ ಸಿನಿಮಾಗಳಿಗೆ ಬಳಕೆ ಮಾಡಲಾಗಿದ್ದ ಕಾರು ಅದಾಗಿತ್ತು. ಕೋವಿಡ್ ನಂತರದಲ್ಲಿ ಕಾರನ್ನು ಬಳಕೆ ಮಾಡಿರಲಿಲ್ಲ. ಇನ್ನು ಕಾರಿನ ಮಾಲೀಕರು ಮನೆಯನ್ನು ಖಾಲಿ ಮಾಡಿಕೊಂಡು ಹೋಗಿದ್ದರು. ಮನೆ ಖಾಲಿಯಾಗಿದ್ದರೂ ಕಾರು ಮಾತ್ರ ಬಿಟ್ಟು ಹೋಗಿದ್ದರಿಂದ ಕಾರು ನಿಂತಲ್ಲೇ ನಿಂತಿತ್ತು. ಇದರಿಂದಾಗಿ ಕಾರಿನ ಮಾಲೀಕರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಅಂಬಾಸಿಡರ್ ಕಾರಿನಲ್ಲಿ ಪತ್ತೆಯಾಯ್ತು ಶವ:
ಸಿನಿಮಾಗಾಗಿ ರೀ ಪೈಂಟ್ ಮಾಡಿದ್ದ ಅಂಬಾಸಿಡರ್ ಕಾರು ಸಿನಿಮಾ ನಂತರ ಬಳಕೆ ಯಾಗಿರಲಿಲ್ಲ. ಯಾಕೆಂದರೆ ಕಾರಿಗೆ ನಂಬರ್ ಪ್ಲೇಟ್ ಇರಲಿಲ್ಲ. ಕಾರಿನ ಬಣ್ಣವನ್ನು ಬದಲಿಸುವಂತಿಲ್ಲ. ಇದರಿಂದ ಸಂಚಾರಿ ಪೊಲೀಸರು ದಂಡ ಹಾಕುತ್ತಾರೆ. ಹೀಗಾಗಿ ಕಾರನ್ನು ಬಳಸುತ್ತಿರಲಿಲ್ಲ. ಆದರೆ ಎರಡು ವರ್ಷದಿಂದ ನಿಂತಲ್ಲೇ ನಿಂತಿದ್ದ ಕಾರನ್ನು ಗಮನಿಸಿದ ದುಷ್ಕರ್ಮಿಗಳು ಕೊಲೆಯನ್ನು ಮಾಡಿ ಕಾರಿನಲ್ಲಿ ಮೃತದೇಹವನ್ನು ಎಸೆದು ಹೋಗಿರುವ ಅನುಮಾನ ವ್ಯಕ್ತವಾಗಿದೆ. ಇನ್ನು ಮೃತವ್ಯಕ್ತಿ ಯಾರು ಎಂಬುದು ತಿಳಿದುಬಂದಿಲ್ಲ. ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರೋದ್ರಿಂದ ಸತ್ತಿರೋ ವ್ಯಕ್ತಿ ಯಾರು ಎಂಬುದರ ಗುರುತು ಪತ್ತೆ ಹಚ್ಚಲಾಗಿಲ್ಲ.
ಕೊಲೆ ಮಾಡಿ ಕಾರಿನಲ್ಲಿ ಶವ ಎಸೆದಿದ್ದಾರೆಯೇ..? ಕುಡಿದು ಸಾವನ್ನಪ್ಪಿದ್ದಾನೆಯೇ..?
ಇನ್ನು ಸುಮಾರು 30 ವಯಸ್ಸಿನ ವ್ಯಕ್ತಿಯನ್ನು ಕೊಲೆ ಮಾಡಿ ಬಳಿಕ ನಿಂತಿದ್ದ ಕಾರಿನಲ್ಲಿ ಶವವನ್ನು ಹಾಕಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಅಥವಾ ಮೃತ ವ್ಯಕ್ತಿಯೇ ಕಾರಿನಲ್ಲಿ ಕುಡಿದು ಮಲಗಿ ಉಸಿರುಗಟ್ಟಿ ಪ್ರಾಣವನ್ನು ಬಿಟ್ಟಿದ್ದಾನೆಯೇ ಎಂಬುದನ್ನು ಪೊಲೀಸರು ತಿಳಿಯಬೇಕಿದೆ. ಈಗಾಗಲೇ ಕೊಳೆತ ಶವವನ್ನು ಮರಣೋತ್ತರ ಪರೀಕ್ಷೆೆಗಾಗಿ ಕಳುಹಿಸಲಾಗಿದೆ.
ಮಾಗಡಿ ರಸ್ತೆಯ ಸುತ್ತಮುತ್ತಲಿನ ಪೊಲೀಸ್ ಠಾಣೆಗಳಲ್ಲಿನ ಮಿಸ್ಸಿಂಗ್ ದೂರು ಪರಿಶೀಲನೆ.
ಇನ್ನು ಮಾಗಡಿ ರಸ್ತೆಯ ಸುತ್ತಮುತ್ತ ಬರುವ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸುಮಾರು 25 ರಿಂದ 35 ವಯೋಮಾನದ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆಯೇ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಆಗೊಂದು ವೇಳೆ ಮಿಸ್ಸಿಂಗ್ ಕಂಪ್ಲೇಟ್ ಕೊಟ್ಟಿರುವ ಮುಖಚಹರೆ ದೇಹ, ಬಟ್ಟೆ ಗುರುತು ಸಾಮ್ಯತೆ ಕಂಡು ಬಂದರೇ ದೂರುದಾರರನ್ನು ಕರೆತಂದು ಗುರುತು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸರು ಮಾಡಲಿದ್ದಾರೆ.
ಮೃತ ವ್ಯಕ್ತಿಯ ಜೇಬಿನಲ್ಲಿ ಪತ್ತೆಯಾಗಿದೆ ಆಧಾರ್ ಕಾರ್ಡ್..
ಇನ್ನು ಮೃತ ವ್ಯಕ್ತಿಯ ಜೇಬಿನಲ್ಲಿ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆದರೆ ಆ ಆಧಾರ್ ಕಾರ್ಡ್ ಗೂ ಸತ್ತ ವ್ಯಕ್ತಿಗೂ ಹೋಲಿಕೆಯಾಗುತ್ತಿಲ್ಲ. ಮೃತ ವ್ಯಕ್ತಿಯ ತಂದೆಯ ಆಧಾರ್ ಕಾರ್ಡ್ ಇರಬಹುದು ಎನ್ನಲಾಗುತ್ತಿದೆ. ಅಗ್ರಹಾರ ದಾಸರಹಳ್ಳಿ ವಿಳಾಸವಿರುವ ಆಧಾರ್ ಕಾರ್ಡ್ ನಲ್ಲಿರುವ ವ್ಯಕ್ತಿಯನ್ನು ಪತ್ತೆ ಮಾಡಿದ್ರೆ ಮೃತ ವ್ಯಕ್ತಿಯ ಮಾಹಿತಿ ಸಿಗಬಹುದಾಗಿದೆ.
ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು
Recommended Video
ಮಾಗಡಿ ರಸ್ತೆಯ ಹೊಸ ಇನ್ಸ್ ಪೆಕ್ಟರ್ ರಾಜುರವರು ಖುದ್ದು ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನುಮಾನಕ್ಕೆ ಆಸ್ಪದ ಕೊಡುವಂತ ಸನ್ನಿವೇಶ ಕಂಡು ಬಂದಿಲ್ಲ. ಕಾರಿನಲ್ಲಿ ಮದ್ಯದ ಬಾಟಲಿಗಳು ಸಿಕ್ಕಿರೋದ್ರಿಂದ ಕುಡಿದು ಸಾವನ್ನಪ್ಪಿರುವ ಅನುಮಾನದ ಮೇಲೆ ಯುಡಿಆರ್ ಕೇಸ್ ದಾಖಲಿಸಿಕೊಳ್ಳಲಾಗಿದೆ. ಆದರೂ ಅನುಮಾನದ ಮೇಲೆ ಕೇಸ್ನ ತನಿಖೆಯನ್ನು ಮುಂದುವರೆಸಿ ಮೃತ ವ್ಯಕ್ತಿಯ ಗುರುತನ್ನು ಪತ್ತೆ ಮಾಡಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.