ಗಾಂಧೀಜಿ ಇಡೀ ದೇಶಕ್ಕೆ ಪ್ರೇರಣಾಶಕ್ತಿ:ಸಿಎಂ ಬೊಮ್ಮಾಯಿ
ಬೆಂಗಳೂರು, ಅಕ್ಟೋಬರ್ 02: ದೇಶಕ್ಕಾಗಿ ತಮ್ಮ ಜೀವನ ಮತ್ತು ಸರ್ವಸ್ವವನ್ನು ತ್ಯಾಗ ಮಾಡಿದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಇಡೀ ದೇಶಕ್ಕೆ ಪ್ರೇರಣಾಶಕ್ತಿ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾನುವಾರ ವಿಧಾನಸೌಧ ಮತ್ತು ವಿಕಾಸಸೌಧ ಮಧ್ಯದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 153ನೇ ಜನ್ಮದಿನ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ ಪ್ರತಿಮೆಗಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಗಾಂಧಿ ಜಯಂತಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಗಾಂಧೀಜಿ ಬದುಕಿನಲ್ಲಿ ಹಲವಾರು ಅವಮಾನ, ಅಪಮಾನಗಳನ್ನು ಸಹಿಸಿಕೊಂಡು ಅದರ ವಿರುದ್ಧ ಗಟ್ಟಿಯಾಗಿ ನಿಂತು ಹೋರಾಟವನ್ನು ಮಾಡಿದವರು. ದೇಶಕ್ಕಾಗಿ ತಮ್ಮ ಜೀವನವನ್ನು ಮತ್ತು ಸರ್ವಸ್ವವನ್ನು ತ್ಯಾಗ ಮಾಡಿದವರು. ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ಹಾಗೂ ಆಯಾಮವನ್ನು ನೀಡಿದವರು ಎಂದರು.
ಸತ್ಯ ಹಾಗೂ ಅಹಿಂಸೆ ಎಂಬ ಎರಡು ಅಸ್ತ್ರಗಳನ್ನು ದೇಶಕ್ಕೆ ನೀಡಿದರು. ಆ ಸಂದರ್ಭದಲ್ಲಿ ಬಹಳ ಜನ ಈ ಬಗ್ಗೆ ತಮ್ಮದೇ ಅನುಮಾನ ಗಳನ್ನು ವ್ಯಕ್ತಪಡಿಸಿದ್ದರು. ಕಾಲಕ್ರಮೇಣ ಇವುಗಳು ದೈತ್ಯ ಬ್ರಿಟಿಷ್ ಸಾಮ್ರಾಜ್ಯ ದ ದಮನಕಾರಿ ನೀತಿಯ ವಿರುದ್ಧ ಜನಾಂದೋಲನ ಸೃಷ್ಟಿಯಾಗಿ ಕೊನೆಗೆ ಬ್ರಿಟಿಷರು ದೇಶವನ್ನು ಬಿಟ್ಟುಹೋಗುವ ಮಟ್ಟಕ್ಕೆ ಗಾಂಧೀಜಿ ಅವರ ನೇತೃತ್ವದಲ್ಲಿ ಹೋರಾಟದ ಫಲವಾಗಿ ಸ್ವಾತಂತ್ರ್ಯವೂ ದೊರೆತಿದೆ ಎಂದು ಹೇಳಿದರು.

ಗಾಂಧೀಜಿ ತೆರೆದ ಪುಸ್ತಕ
ಗಾಂಧೀಜಿಯಯವರೇ ಹೇಳಿದಂತೆ ಅವರ ಜೀವನವೇ ಒಂದು ತೆರೆದ ಪುಸ್ತಕ. ಅದೇ ನನ್ನ ಸಂದೇಶ ಎಂದಿದ್ದರು. ಸತ್ಯ, ಅಹಿಂಸೆಯ ಮಾರ್ಗವನ್ನು ಕೊನೆಯವರೆಗೂ ಬಿಡಲಿಲ್ಲ. ಇಂದಿಗೂ ನಮ್ಮ ದೇಶಕ್ಕೆ ಅಂತಃಸತ್ವದ ಅವರು ಪ್ರೇರಣೆಯಾಗಿದ್ದಾರೆ. ಅವರ ಹಲವಾರು ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ಅದು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗದೆ ಈ ದೇಶದ ಆರ್ಥಿಕ, ಸಾಮಾಜಿಕ ಜೀವನದ ಮೇಲೂ ಪ್ರಭಾವ ಬೀರಿದೆ. ಗ್ರಾಮ ಸ್ವರಾಜ್ಯ ಎಂಬ ಅವರ ಘೋಷಣೆ, ಕೆಳ ಹಂತದಲ್ಲಿ ದೇಶವನ್ನು ಕಟ್ಟಲು ತಿಳಿಸಿದರು. ಭಾರತಕ್ಕೆ ಸಾಮೂಹಿಕ ಉತ್ಪಾದನೆಗಿಂತಲೂ ಭಾರತದ ಜನರಿಂದ ಉತ್ಪಾದನೆ ಮಾಡುವ ಅಗತ್ಯವಿದೆ ಎಂದಿದ್ದ ಅವರ ಮಾತು ಇಂದಿಗೂ ಪ್ರಸ್ತುತ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮಹನೀಯರಂತೆ ಮುಂದುವರಿಯಬೇಕು
ಮಹಾತ್ಮ ಗಾಂಧೀಜಿ, ಲಾಲ್ ಬಹದ್ದೂರು ಶಾಸ್ತ್ರಿ ಅವರಂತಹ ಮಹನೀಯರ ದಾರಿಯಲ್ಲಿ ನಾವು ಮುಂದುವರೆದರೆ ಭಾರತ ಸಶಕ್ತ ರಾಷ್ಟ್ರವಾಗುವ ಜೊತೆಗೆ ಭಾರತೀಯರೆಲ್ಲರೂ ನೆಮ್ಮದಿಯ ಬದುಕನ್ನು, ಒಗ್ಗಟ್ಟಾಗಿ ಬದುಕಬಹುದು. ಜನ್ಮದಿನಾಚಾರಣೆಯಂದು ಅವರ ವಿಚಾರ ಹಾಗೂ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೀಗೆಂದು ನಾವು ಸಂಕಲ್ಪ ಮಾಡುವ ಹಾಗೂ ನಮ್ಮನ್ನು ನಾವೇ ಸಮರ್ಪಿಸಿಕೊಳ್ಳುವ ದಿನವಿದು ಎಂದರು.

ಗಾಂಧಿ-ಶಾಸ್ತ್ರಿಜಿ ಮಧ್ಯೆ ಸಾಮ್ಯಗಳು ಇವೆ
ಇಂದು ರಾಷ್ಟ್ರದ ಮತ್ತೊಬ್ಬ ಶ್ರೇಷ್ಠ ನಾಯಕ, ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಹೌದು. ಮಹಾತ್ಮ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಡುವಿನ ಸಾಮ್ಯಗಳು ಬಹಳ. ಅವರ ಜನ್ಮ ದಿನಾಂಕ ಒಂದೇ ಆಗಿರುವುದು ಕೂಡ ಸಾಮ್ಯತೆಗಳ ಪ್ರತೀಕವಾಗಿದೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಬಹಳ ದಿನಗಳು ನಮ್ಮ ದೇಶದ ಪ್ರಧಾನಿಗಳಾಗಿ ಇರಲಿಲ್ಲ, ಆದರೆ ಇಂದಿಗೂ ನಮ್ಮ ಜನಮಾನಸದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ. ಅತ್ಯಂತ ಬಡತನದ ಹಿನ್ನೆಲೆಯಲ್ಲಿ ಬಂದರೂ, ತಮ್ಮ ಬದುಕಿನಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳಲಿಲ್ಲ. ಕಠಿಣವಾದ ಜೀವನವನ್ನೇ ನಡೆಸಿದರು. ಪ್ರಧಾನಿಗಳಾದರೂ ಕೂಡ, ಆದರ್ಶಗಳನ್ನು ಪಾಲಿಸಿದ ಮಹಾನ್ ವ್ಯಕ್ತಿ ಎಂದು ಹೇಳಿದರು.

ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ
ಇಂಡೋ -ಪಾಕಿಸ್ತಾನ ಯುದ್ಧ ಸಂದರ್ಭದಲ್ಲಿ ಭಾರತದ ಗಡಿಗೆ ಹೋಗಿ ಸೈನಿಕರಲ್ಲಿ ಸ್ಫೂರ್ತಿ ತುಂಬಿದ ಮೊದಲನೇ ಉದಾಹರಣೆ, ಲಾಲ್ ಬಹದ್ದೂರ್ ಶಾಸ್ತ್ರಿ ಯುದ್ಧ ಗೆಲ್ಲಲು ಮಾರ್ಗದರ್ಶನವನ್ನು ನೀಡಿದರು. ನಂತರ, ದೇಶ ಆಹಾರ ಉತ್ಪಾದನೆ ಯಲ್ಲಿ ಸ್ವಾವಲಂಬಿಯಾಗಲು ಹಸಿರುಕ್ರಾಂತಿಗೆ ಭದ್ರ ಬುನಾದಿಯನ್ನು ಹಾಕಿದವರು. ದೇಶ ಕಾಯುವ ಹಾಗೂ ದೇಶಕ್ಕೆ ಅನ್ನ ಹಾಕುವವರಿಗಾಗಿ ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ಅತ್ಯಂತ ಗೌರವವನ್ನು ನೀಡಿದರು. ಅವರ ಆಡಳಿತ ನಮಗೆ ಆದರ್ಶ. ಸತ್ಯದಿಂದ ಆಡಳಿತ ನಡೆಸಿದರು. ಇದೆಲ್ಲವೂ ನಮಗೆ ಪ್ರೇರಣೆ ಆಗಿದೆ ಎಂದರು.












Click it and Unblock the Notifications