ಹಾಸ್ಯ ಸಾಹಿತಿ ಎಂಎಸ್ ಎನ್ ಅವರ 'ಮದಗಜಗಮನೆ' ಸೆ.2 ಕ್ಕೆ ಲೋಕಾರ್ಪಣೆ
ಬೆಂಗಳೂರು, ಆಗಸ್ಟ್ 30: ಖ್ಯಾತ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿಯವರ 'ಮದಗಜಗಮನೆ' ಎಂಬ ನಗೆಬರಹದ ಕೃತಿಯು ಸೆಪ್ಟೆಂಬರ್ 2, ಶನಿವಾರ ಲೋಕಾರ್ಪಣೆಗೊಳ್ಳಲಿದೆ.
'ನಾನ್ ಸ್ಟಾಪ್ ಹಾಸ್ಯ ಇರುವ ಈ ಕಾರ್ಯಕ್ರಮಕ್ಕೆ ತಪ್ಪದೇ ಬನ್ನಿ' ಎಂದು ಸ್ವತಃ ಎಂ.ಎಸ್.ಎನ್ ಅವರೇ ಫೇಸ್ ಬುಕ್ ನಲ್ಲಿ ಮನವಿ ಮಾಡಿರುವುದನ್ನು ನೋಡಿದರೆ ಈ ಕಾರ್ಯಕ್ರಮ ಹಾಸ್ಯಾಸಕ್ತರಿಗೆ ರಸದೌತಣ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಬೆಳಿಗ್ಗೆ 10:30ಕ್ಕೆ ಸಾಹಿತಿಗಳಾದ ಪ್ರೊ. ಎಂ.ಕೃಷ್ಟೇಗೌಡ, ಎಚ್.ದುಂಡಿರಾಜ್, ವೈ.ವಿ.ಗುಂಡೂರಾವ್ ಅವರ ಸಮ್ಮುಖದಲ್ಲಿ ಕೃತಿ ಬಿಡುಗಡೆಯಾಗಲಿದೆ. ಅಚ್ಯುತರಾವ್ ಪದಕಿ ಅವರು ಅಚ್ಚುಕಟ್ಟಾಗಿ ನಿರೂಪಣಾ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಬೆಳಿಗ್ಗೆ 9:30 ಕ್ಕೆ ಉಪಹಾರ ವ್ಯವಸ್ಥೆಯೂ ಇದೆ.
ವಿಕ್ರಮ್ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕ ಲೋಕಾರ್ಪಣೆಗೆ ಹಾಸ್ಯಾಸಕ್ತರು, ಸಹೃದಯಿಗಳು ಭಾಗವಹಿಸುವಂತೆ ಕೋರಲಾಗಿದೆ.
ಲೇಖಕರ ಬಗ್ಗೆ:
ಎಂ.ಎಸ್.ನರಸಿಂಹಮೂರ್ತಿ ಅವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ 1949 ಅಕ್ಟೋಬರ್ 20 ರಂದು ಜನಿಸಿದರು. ತಾಯಿ ಸಾವಿತ್ರಮ್ಮ, ತಂದೆ ಎಂ.ಎ.ಸೂರಪ್ಪ. ಕಾದಂಬರಿ, ಮಕ್ಕಳಸಾಹಿತ್ಯ, ವಿಚಾರ ಸಾಹಿತ್ಯ, ಹಾಸ್ಯ ಸಂಕಲನ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಛಾಪು ಮೂಡಿಸಿರುವ ಇವರು ಇದುವರೆಗೆ 50 ಪುಸ್ತಕಗಳನ್ನು ಬರೆದಿದ್ದಾರೆ.

ಸ್ವಯಂ ವಧು, ಶ್ರಮದಾನ, ಕಿವುಡು ಸಾರ್ ಕಿವುಡು ಮತ್ತು ಇತರೆ ನಗೆ ನಾಟಕಗಳು, ವರ್ಗಾವರ್ಗಿ ಮುಂತಾದ ಹಾಸ್ಯ ಸಂಕಲನಗಳು, ಮಂದಸ್ಮಿತ ಎಂಬ ಕಾದಂಬರಿ, ಭಾರತದ ರಾಷ್ಟ್ರೀಯತೆ ಎಂಬ ವಿಚಾರ ಸಾಹಿತ್ಯ ಮುಂತಾದವು ಅವರ ಪ್ರಮುಖ ಕೃತಿಗಳು.
ರಾಜ್ಯ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ಎಂಎಸ್ ಎನ್ ಅವರು ಕಿರುತರೆಯ ಕೆಲವು ಹಾಸ್ಯ ಧಾರಾವಾಹಿಗಳಲ್ಲಿ ಸಂಭಾಷಣೆ ಬರೆದ ಕೀರ್ತಿಗೂ ಪಾತ್ರರಾಗಿದ್ದಾರೆ.












Click it and Unblock the Notifications