Lok Sabha Election: ಬೆಂಗಳೂರಿನಲ್ಲಿ ಬಿಜೆಪಿ ಕಟ್ಟಿದ್ದ 20 ವರ್ಷದ ಕೋಟೆಯನ್ನು ಭೇದಿಸುವುದೇ ಕಾಂಗ್ರೆಸ್?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರ ಚಿತ್ತ ಕದ್ದ ಕ್ಷೇತ್ರಗಳಲ್ಲಿ ಬೆಂಗಳೂರು ಕ್ಷೇತ್ರಗಳ ಸಹ ಸೇರಿವೆ. ಈ ಬಾರಿ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಸತತ 20 ವರ್ಷಗಳಿಂದ ಗೆಲುವು ದಾಖಲಿಸಿ ತನ್ನ ಬೇರುಗಳನ್ನು ಗಟ್ಟಿ ಪಡಿಸಿಕೊಳ್ಳುತ್ತಾ ಬಂದಿತ್ತು. ಈ ಬಾರಿಯ ಈ ಕ್ಷೇತ್ರದ ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬುದು ಕಾದು ನೋಡಬೇಕಿದೆ.
ಬಿಜೆಪಿ ಈ ಕ್ಷೇತ್ರಗಳಲ್ಲಿ ತನ್ನ ಪ್ರಾಭಲ್ಯವನ್ನು ಸಾಧಿಸುತ್ತಲೇ ಬರುತ್ತಲೇ ಇದೆ. 20 ವರ್ಷದಿಂದ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಧಿಪತ್ಯ ಸಾಧಿಸಿದೆ. ಬಿಜೆಪಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು 1991ರಿಂದ ಗೆಲ್ಲುತ್ತಲೇ ಬರುತ್ತಿದೆ. ಬೆಂಗಳೂರು ಉತ್ತರ ಭಾಗದಲ್ಲಿ ಬಿಜೆಪಿ 2004ರಲ್ಲಿ ತನ್ನ ತೆಕ್ಕೆಗೆ ಹಾಕಿಕೊಂಡಿತು. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವಾದಾಗಿನಿಂದ ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಹಿಡಿತ ಮುಂದುವರಿಸಿದೆ.

ಯುವಕರಿಗೆ ಅವಕಾಶ
ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಯುವ ಮುಖಕಕ್ಕೆ ಮಣೆ ಹಾಕಿದೆ. ಈ ಕ್ಷೇತ್ರದ ಹಾಲಿ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಅವಕಾಶ ನೀಡಿದೆ. ಕ್ಷೇತ್ರದಲ್ಲಿ ಸೌಮ್ಯ ರೆಡ್ಡಿ ಚುನಾವಣೆ ಸ್ಪರ್ಧೆ ನಡೆಸಿದ್ದರೂ ಸಹ, ಹಿಂಬದಿಯ ಕೆಲಸಗಳನ್ನು ತಂದೆ ರಾಮಲಿಂಗಾರೆಡ್ಡಿ ಮಾಡುತ್ತಿದ್ದಾರೆ.
ಮೋಹನ್ ಗೆಲುವಿನ ಓಟ
ಇನ್ನು ಬೆಂಗಳೂರು ಸೆಂಟ್ರಲ್ನಲ್ಲಿ ಸೋಲನ್ನೇ ಕಾಣದ ಪಿಸಿ ಮೋಹನ್ ಅವರ ಎದುರು ಕಾಂಗ್ರೆಸ್ ಹೊಸ ಮುಖಕಕ್ಕೆ ಮಣೆ ಹಾಕಿದೆ. ಈ ಕ್ಷೇತ್ರದಲ್ಲಿ ಪಿಸಿ ಮೋಹ್ 2009ರಿಂದ ಗೆಲುವು ಸಾಧಿಸುತ್ತಿದ್ದು, ಮತ್ತೊಮ್ಮೆ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಇವರಿಗೆ ಕಾಂಗ್ರೆಸ್ನ ಮನ್ಸೂರ್ ಅಲಿ ಖಾನ್ ಸವಾಲು ಎಸೆಯಲಿದ್ದಾರೆ. ಮನ್ಸೂರ್ ಈ ಕ್ಷೇತ್ರದಲ್ಲಿ ಅಹಿಂದಾ ಮತಗಳನ್ನು ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಉತ್ತರದಲ್ಲಿ ಶೋಭಾ vs ಎಂವಿ ರಾಜೀವ್ ಗೌಡ್
ಬೆಂಗಳೂರಿನ ಉತ್ತರ ಕ್ಷೇತ್ರದಲ್ಲಿ ಡಿವಿ ಸದಾನಂದ್ಗೌಡ್ ಬದಲಿಗೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಅವಕಾಶ ನೀಡಲಾಗಿದೆ. ಕಾಂಗ್ರೆಸ್ ಈ ಕ್ಷೇತ್ರದಲ್ಲೂ ಹೊಸ ಮುಖಕ್ಕೆ ಮಣೆ ಹಾಕಿದೆ. ಶೋಭಾ ಅವರಿಗೆ ಎಂವಿ ರಾಜೀವ್ ಗೌಡ್ ಪೈಪೋಟಿ ನೀಡಲಿದ್ದಾರೆ.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಪಡೆಯುವಲ್ಲಿ ವಿಫಲವಾಗಿದೆ. ಆದರೆ ಬೆಂಗಳೂರು ಜನರ ಪ್ರೀತಿ ಗೆಲ್ಲುವಲ್ಲಿ ಸಫಲವಾಗಿದೆ. ಬೆಂಗಳೂರಿನ 28 ಸ್ಥಾನಗಳ ಪೈಕಿ ಬಿಜೆಪಿ 16 ಸ್ಥಾನಗಳಲ್ಲಿ ಮೇಲುಗೈ ಸಾಧಿಸಿದೆ. ಇದು ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಐದು ಸ್ಥಾನವನ್ನು ವೃದ್ಧಿಸಿದೆ. ಈ ಫಲಿತಾಂಶ ಬಿಜೆಪಿಗೆ ಧೈರ್ಯವನ್ನು ತಂದಿದೆ.
ವಿಧಾನಸಭೆಯಲ್ಲಿ ಹೇಗಿತ್ತು ಸಾಧನೆ?
ಸಾಂಪ್ರದಾಯಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ 28 ಸ್ಥಾನಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಮೇಲುಗೈ ಸಾಧಿಸಿದೆ. ಆದರೆ ಕಳೆದ ವರ್ಷದ ಚುನಾವಣಾ ಫಲಿತಾಂಶ ಬಿಜೆಪಿಗೆ ಧೈರ್ಯ ತುಂಬಿದೆ. ಬಿಜೆಪಿ ಇಷ್ಟು ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ನಿಂದ ಬಂದಿದ್ದ ಎಸ್ಟಿ ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ ಅವರ ಶ್ರಮವೂ ಇದೆ.

ವಿಧನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಗೆ ಟಫ್ ಫೈಟ್ ನೀಡಿತ್ತು. ಇದನ್ನೇ ಬಳಸಿಕೊಂಡು ಈ ಬಾರಿ ಬಿಜೆಪಿ ಕಟ್ಟಿದ ಕೋಟೆಯನ್ನು ಬೇಧಿಸುವ ಕನಸನ್ನು ಕೈ ಪಡೆ ಕಾಣುತ್ತಿದೆ. ಈ ಬಾರಿ ಇಲ್ಲಿ ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿ ಈ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಮೆರೆಯುತ್ತಾ ಎಂಬುದಕ್ಕೆ ಜೂನ್ 4 ರಂದು ಉತ್ತರ ಸಿಗಲಿದೆ.












Click it and Unblock the Notifications