ಲೋಕಸಭೆ ಉಪಚುನಾವಣೆ ಅಗತ್ಯವಿರಲಿಲ್ಲ: ಬಿಎಸ್ ಯಡಿಯೂರಪ್ಪ
ಬೆಂಗಳೂರು, ಅಕ್ಟೋಬರ್ 08: 'ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸುವ ಅಗತ್ಯವೇ ಇರಲಿಲ್ಲ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದರು.
ಚುನಾವಣಾ ಆಯೋಗ ಸೆ.6 ರಂದು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಮಿಜೋರಾಂ, ತೆಲಂಗಾಣ ಈ ಐದು ರಾಜ್ಯಗಳ ಚುನಾವಣಾ ದಿನಾಂಕ ಘೋಷಿಸಿದೆ. ಅದರೊಟ್ಟಿಗೇ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರ ಮತ್ತು ಮೂರು ಲೋಕಸಭಾ ಕ್ಷೇತ್ರಗಳಿಗೂ ಚುನಾವಣೆ ದಿನಾಂಕ ಘೋಷಿಸಿರುವುದು ಕರ್ನಾಟಕದ ನಾಯಕರಲ್ಲೇ ಅಚ್ಚರಿಯನ್ನುಂಟು ಮಾಡಿದೆ.
ಕರ್ನಾಟಕ ಲೋಕಸಭೆ, ವಿಧಾನಸಭೆ ಉಪಚುನಾವಣೆಗಳಿಗೆ ಮುಹೂರ್ತ ನಿಗದಿ: ನ.3ರಂದು ಮತದಾನ
"ಮೂರ್ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಈಗ ಮತ್ತೆ ಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆದರೆ ವೃಥಾ ದುಂದುವೆಚ್ಚ. ಸಮಯವೂ ವ್ಯರ್ಥ" ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
ವಿಧಾನಸಭೆ ಉಪಚುನಾವಣೆ ಅನಿವಾರ್ಯ
ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತು ಗೆದ್ದಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಚನ್ನಪಟ್ಟಣವನ್ನು ತಾವೇ ಉಳಿಸಿಕೊಂಡ ಕಾರಣ ರಾಮನಗರದಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದೆ. ಜೊತೆಗೆ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೂ ಚುನಾವಣೆ ನಡೆಯಲಬೇಕಿದೆ. ವಿಧಾನಸಭೆಯ ಕಾಲಾವಧಿ ಇನ್ನೂ ನಾಲ್ಕೂವರೆ ವರ್ಷ ಬಾಕಿ ಇರುವುದರಿಂದ ಈ ಉಪಚುನಾವಣೆಗಳು ಅನಿವಾರ್ಯ.
ಲೋಕಸಭೆ ಉಪಚುನಾವಣೆಯ ಅಗತ್ಯವೇನಿದೆ?
ಆದರೆ ಲೋಕಸಭಾ ಚುನಾವಣೆ ಇನ್ನು ನಾಲ್ಕೈದು ತಿಂಗಳಲ್ಲೇ ನಡೆಯಲಿರುವುದರಿಂದ ಈಗ ಮತ್ತೆ ಉಪಚುನಾವಣೆ ನಡೆಸುವ ಅಗತ್ಯವೇನಿದೆ ಎಂಬುದು ಬಿ ಎಸ್ ಯಡಿಯೂರಪ್ಪ ಅವರ ಪ್ರಶ್ನೆ. 2019 ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿಯೇ ಲೋಕಸಭಾ ಚುನಾವಣೆ ನಡೆಯಬಹುದು ಎಂದು ಅಂದಾಜಿಸಲಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಮಿಜೋರಾಂ ಮತ್ತು ತೆಲಂಗಾಣ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ ಲೋಕಸಭಾ ಚುನಾವಣೆಯ ದಿನಾಂಕಗಳೂ ಫೆಬ್ರವರಿ ತಿಂಗಳಿನಲ್ಲಿ ಘೋಷಣೆಯಾಬಗುವ ಸಾಧ್ಯತೆ ಇದೆ.
ಸಚಿತ್ರ ವರದಿ : ಪಂಚ ರಾಜ್ಯಗಳ ಚುನಾವಣೆ ದಿನಾಂಕ, ಮತ ಎಣಿಕೆ
ಅಚ್ಚರಿ ತಂದ ಚುನಾವಣಾ ಆಯೋಗದ ನಿರ್ಧಾರ!
ಲೋಕಸಭಾ ಉಪಚುನಾವಣೆಯ ದಿನಾಂಕ ಘೋಷಣೆ ಕುರಿತು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರೇ ಅಚ್ಚರಿ ವ್ಯಕ್ತಪಡಿಸಿದ್ದು, ಅವರೂ ಸಹ ಈ ಚುನಾವಣೆಯ ಅಗತ್ಯವಿರಲಿಲ್ಲ ಎಂದಿದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, 'ಇನ್ನೂ ಮೂರ್ನಾಲ್ಕು ತಿಂಗಳು ಲೋಕಸಭೆಯ ಕಾಲಾವಧಿ ಇರುವುದರಿಂದ ಉಪಚುನಾವಣೆ ನಡೆಸಿದರೆ ತಪ್ಪೇನಿಲ್ಲ' ಎಂದಿದ್ದಾರೆ.
ಉಪಚುನಾವಣೆ ಕದನ: ದೋಸ್ತಿ ಸರ್ಕಾರದ ಮೈತ್ರಿ ಜಪ ಯಶಸ್ವಿಯಾಗುತ್ತಾ?
ಉಪಚುನಾವಣೆ ತಪ್ಪಿಸಲು ಸಾಧ್ಯವಿತ್ತೇ?
ಹಾಗಾದರೆ ಉಪಚುನಾವಣೆ ತಪ್ಪಿಸಲು ಸಾಧ್ಯವಿತ್ತೆ? ಖಂಡಿತ ಸಾಧ್ಯವಿತ್ತು. ಕರ್ನಾಟಕದಲ್ಲಿ ಸರ್ವಪಕ್ಷಗಳೂ ಒಮ್ಮತದ ನಿರ್ಧಾರಕ್ಕೆ ಬಂದು, ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವುದರಿಂದ ಉಪಚುನಾವಣೆಯ ಅಗತ್ಯವಿಲ್ಲ ಎಂದು ಮೊದಲೇ ಚುನಾವಣೆ ಆಯೋಗದ ಬಳಿ ಮನವಿ ಮಾಡಿಕೊಳ್ಳಬಹುದಿತ್ತು. ಆದರೆ ಚುನಾವಣೆ ದಿನಾಂಕ ಘೋಷಣೆಯಾದ ಮೇಲೆ ಬೇರೆ ದಾರಿ ಇಲ್ಲ. ಈಗ ಉಪಚುನಾವಣೆಯ ಫಲಿತಾಂಶವೇ ಮುಂದೆ ಲೋಕಸಭಾ ಚುನಾಣೆಯ ಮೇಲೂ ಪರಿಣಾಮ ಬೀರುವುದು ಗ್ಯಾರಂಟಿ. ಆದ್ದರಿಂದ ಇದನ್ನು ದಿಕ್ಸೂಚಿ ಎಂದೇ ಪರಿಗಣಿಸಿ ರಾಜ್ಯ ನಾಯಕರು ಸಜ್ಜಾಗಬೇಕಿದೆ!
ಲೋಕಸಭಾ ಉಪಚುನಾವಣೆ ಏಕೆ?
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರಿಂದ ತೆರವಾದ ಸ್ಥಾನ, ಬಳ್ಳಾರಿಯಲ್ಲಿ ಸಂಸದರಾಗಿದ್ದ ಶ್ರೀರಾಮುಲು ಅವರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ರಾಜೀನಾಮೆ ನೀಡಿದ ಸ್ಥಾನ ಮತ್ತು ಮಂಡ್ಯದಲ್ಲಿ ಜೆಡಿಎಸ್ ನ ಸಿಎಸ್ ಪುಟ್ಟರಾಜು ಅವರು ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ತೆರವಾದ ಸ್ಥಾನಕ್ಕೆ ನ.3 ರಂದು ಉಪಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಪ್ರಕಟವಾಗಲಿದೆ.
ಉಪಚುನಾವಣೆ: ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಬಿ.ವೈ ರಾಘವೇಂದ್ರ ಸ್ಪರ್ಧೆ ಖಚಿತ