ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರಲ್ಲಿ ಸೈಬರ್ ಅಪರಾಧ ಹೆಚ್ಚಳ
ಬೆಂಗಳೂರು, ಜೂನ್ 16 : ಲಾಕ್ ಡೌನ್ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ ಕೊಲೆ, ದರೋಡೆ ಮುಂತಾದ ಅಪರಾಧಗಳು ಕಡಿಮೆಯಾಗಿದ್ದವು. ಆದರೆ, ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು ಅಂಕಿ-ಅಂಶಗಳ ಮಾಹಿತಿ ಇಲ್ಲಿದೆ.
ಲಾಕ್ ಡೌನ್ ಅವಧಿಯಲ್ಲಿ ಕೆಲಸ ಕಳೆದುಕೊಂಡು, ವೇತನ ಕಡಿತವಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದರು. ಆದರೆ, ಸೈಬರ್ ಕ್ರೈಂ ಮೂಲಕ ಹಲವರ ಖಾತೆಗೆ ಕನ್ನ ಹಾಕಿ ಹಣ ಕದಿಯಲಾಗಿದೆ.
ಜನವರಿಯಿಂದ ಮಾರ್ಚ್ ತನಕ ನಗರದಲ್ಲಿ 804 ಸೈಬರ್ ಕ್ರೈಂ ಪ್ರಕರಣ ದಾಖಲಾಗಿತ್ತು. ಆದರೆ ಮಾರ್ಚ್ನಿಂದ ಮೇ ತನಕ 2157 ಪ್ರಕರಣ ದಾಖಲಾಗಿದೆ. ಸರ್ಕಾರದಿಂದ ಪರಿಹಾರ ಕೊಡಿಸುತ್ತೇವೆ ಎಂದು ಖಾತೆಗೆ ಕನ್ನ ಹಾಕಿದ ಘಟನೆಯೂ ನಡೆದಿದೆ.

ಪಟ್ಟೆಗಾರೆಪಾಳ್ಯದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಅನಾಮಿಕ ವ್ಯಕ್ತಿ ಪ್ರಧಾನ ಮಂತ್ರಿಗಳ ಸಹಾಯಧನ ಯೋಜನೆಯಡಿ ನಿಮಗೆ 5 ಸಾವಿರ ರೂ. ಬರುತ್ತದೆ. ನಿಮ್ಮ ಮೊಬೈಲ್ಗೆ ಬಂದಿರುವ ಒಟಿಪಿ ಹೇಳಿ ಎಂದು ಕೇಳಿದ್ದ.
45 ವರ್ಷದ ವ್ಯಕ್ತಿ ಕರೆಯನ್ನು ಸತ್ಯ ಎಂದು ನಂಬಿ ಒಟಿಪಿ ಹೇಳಿದ್ದ. ಆಗ ಖಾತೆಯಲ್ಲಿದ್ದ 1 ಲಕ್ಷ ರೂ. ಹಣವನ್ನು ದೋಚಲಾಗಿದೆ. ಕೆಲವು ದಿನಗಳ ಹಿಂದೆ 2ನೇ ಮಗನ ಮದುವೆಯಲ್ಲಿ ಬಂದ ಹಣ, ತನ್ನ ಉಳಿತಾಯದ ಹಣವನ್ನು ವ್ಯಕ್ತಿ ಬ್ಯಾಂಕ್ನಲ್ಲಿ ಇಟ್ಟಿದ್ದ.
ಬೆಂಗಳೂರು ನಗರದಲ್ಲಿ ಫೆಬ್ರವರಿಯಲ್ಲಿ 483, ಮಾರ್ಚ್ನಲ್ಲಿ 877, ಏಪ್ರಿಲ್ನಲ್ಲಿ 425 ಮತ್ತು ಮೇ ತಿಂಗಳನಲ್ಲಿ 855 ಸೈಬರ್ ಕ್ರೈಂ ಪ್ರಕರಣ ದಾಖಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಒಟ್ಟು 2157 ಪ್ರಕರಣ ನಡೆದಿದೆ.
ಪರಿಹಾರ ಧನ ಸಿಗಲಿದೆ ಎಂಬ ನಕಲಿ ಕರೆ, ಇಎಂಇ ಮನ್ನಾ ಆಗಲಿದೆ ಎಂಬ ಕರೆಗಳನ್ನು ನಂಬಿ ಹಲವಾರು ಜನರು ಹಣವನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications