ನೆರೆಗೆ ತತ್ತರಿಸಿದ ಉತ್ತರ ಕರ್ನಾಟಕದ ಪರ ದನಿ ಎತ್ತೋಣ ಬನ್ನಿ
ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಗೆ ಪರಿಹಾರ ಧನ ಒದಗಿಸುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮಾಡಲು ನಾಗರಿಕರು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಭಾನುವಾರ(ಸೆ.29)ದಂದು ಹಮ್ಮಿಕೊಳ್ಳಲಾಗಿದೆ.
ಕನ್ನಡಿಗರೆ, ನಿಮಗೆಲ್ಲ ತಿಳಿದಿರುವಂತೆ ಕರ್ನಾಟಕದ ಉತ್ತರ ಭಾಗ ಮುಂಗಾರಿನ ನೆರೆಗೆ ತತ್ತರಿಸಿ ಕೃಷ್ಣೆ, ಕಾಳಿ,ತುಂಗೆ, ಘಟಪ್ರಭಾ, ಮಲಪ್ರಭಾ ಮತ್ತು ಬೀಮಾ ತೀರದ ತಟದ ನಮ್ಮ ಜನರ ಬದುಕು ಅಕ್ಷರ ಸಹ ಬೀದಿಗೆ ಬಂದಿದೆ, ಪ್ರಕೃತಿಯ ರೌದ್ರ ಭೀಕರತೆಗೆ ಮನೆ, ಮಠ, ತೋಟ, ಗದ್ದೆ ,ಬೆಳೆ, ಶಾಲೆ ಕಾಲೇಜು, ಆಸ್ಪತ್ರೆ ಜೊತೆಗೆ ಅಲ್ಲಿಯ ಜನರ ನೆಮ್ಮದಿಯನ್ನ ನದಿಯ ನೆರೆ ಕೊಚ್ಚಿಕೊಂಡು ಹೋಗಿದೆ, ಒಂದು ಕಾಲದ ಶ್ರೀಮಂತ ಜನರು ಬಡ ಜನರು ಮಧ್ಯಮ ವರ್ಗ ಎನ್ನದೆ ಎಲ್ಲರೂ ತುತ್ತು ಅನ್ನಕ್ಕಾಗಿ ತಾತ್ವರ ಪಡುವಂತಾಗಿದೆ!
ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?
ಎಲ್ಲ ಜಾತಿ ಧರ್ಮದ ಜನರ ಬದುಕು ಅಲ್ಲಿ ಈಗ ಮೂರಾಬಟ್ಟೆಯಾಗಿದೆ, ಅವರೆಲ್ಲ ನಮ್ಮ ಜನರು ಕನ್ನಡ ಜನರು ನಮ್ಮ ಸಹೋದರರು .. ಆದರೆ ಇಲ್ಲಿಯವರೆಗೆ ಕೇಂದ್ರದ ಜೊತೆಗೆ ರಾಜ್ಯಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ, ಕೇಂದ್ರ ಸರ್ಕಾರ ಇಲ್ಲಿಯವರೆಗೆ ಪರಿಹಾರ ಬಿಡುಗಡೆ ಮಾಡಿಲ್ಲ ಅವರಿಗೆ ಕನಿಷ್ಠ ಧೈರ್ಯ ಕೊಡುತ್ತಿಲ್ಲ.
ಹೀಗಾಗಿ ಅಲ್ಲಿಯ ಜನ ದಿನದಿಂದ ದಿನಕ್ಕೆ ದೈರ್ಯ ಕಳೆದುಕೊಳ್ಳುತ್ತಿದ್ದಾರೆ. ಕೆಲ ಜನ ಆತ್ಮಹತ್ಯೆಯಂಥ ಕೆಲಸಕ್ಕೂ ಕೈ ಹಾಕುತ್ತಿದ್ದಾರೆ, ಈಥರದ ಕೃತ್ಯ ನಮ್ಮ ನೆಲದಲ್ಲಿ ಆಗುತ್ತಿರುವುದು ದುರಂತ. ಗೆಳೆಯರೆ ಹಾಗಂತ ನಾವು ಕೈಕಟ್ಟಿ ಕುಳಿತುಕೊಳ್ಳುವುದು ಹೇಡಿತನ ಬನ್ನಿ ಜೊತೆಯಾಗಿ ಒಂದಾಗಿ ಅವರಿಗೆ ಪರಿಹಾರ ಸಿಗುವರೆಗು ಪ್ರತಿಭಟಿಸೋಣ ಧರಣಿ ಮಾಡೋಣ ಸರ್ಕಾರದ ನಡೆಯನ್ನ ಖಂಡಿಸೋಣ ಬೇಗ ಪರಿಹಾರ ಕೊಡಿ ಎಂದು ಒತ್ತಾಯಿಸೋಣ ಬನ್ನಿ ಎಲ್ಲರು ಜೊತೆಗೂಡೋಣ ನಮ್ಮ ಸಹೋದರರ ಕಷ್ಟಗಳಿಗೆ ಒಂದಾಗಿ ಅವರ ಧ್ವನಿಗೆ ಧ್ವನಿಯಾಗೋಣ ಎಂದು ಶಿವಾನಂದ ಅವರು ಮನವಿ ಮಾಡಿಕೊಂಡಿದ್ದಾರೆ.