ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಕೂಡ್ಲುಗೇಟ್ ಸಮೀಪದ ಜನರಿಗೆ ತಪ್ಪದ ಆತಂಕ
ಬೆಂಗಳೂರು, ನವೆಂಬರ್ 06: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿರತೆಯ ಓಟಕ್ಕೆ ಸದ್ಯ ಬ್ರೇಕ್ ಬಿದ್ದಂತೆ ಕಾಣುತ್ತಿಲ್ಲ. ಕೂಡ್ಲುಗೇಟ್ ಸಮೀಪ ಕಾಣಿಸಿಕೊಂಡಿದ್ದ ಚಿರತೆಯನ್ನ ಅರಣ್ಯ ಇಲಾಖೆ ಗುಂಡಿಕ್ಕಿ ಕೊಂದಿದ್ದ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೆರೆಡು ಕಡೆ ಚಿರತೆ ಕಾಣಿಸಿಕೊಂಡಿದ್ದು, ಬೆಂಗಳೂರಿನ ಜನರಲ್ಲಿ ಮತ್ತೆ ಆತಂಕ ಹೆಚ್ಚಾಗಿದೆ.
ಕಳೆದ ವಾರವಷ್ಟೇ ಬೊಮ್ಮನಹಳ್ಳಿಯ ಕೂಡ್ಲುಗೇಟ್ ಸಮೀಪ ಕಾಣಿಸಿಕೊಂಡಿದ್ದ ಚಿರತೆಯನ್ನ ಅರಣ್ಯ ಇಲಾಖೆ ಗುಂಡಿಕ್ಕಿ ಕೊಂದಿದ್ದರು. ಈ ಭಾಗದ ಜನರು ಚಿರತೆ ಕಾಟ ತಪ್ಪಿತು ಎನ್ನುವಷ್ಟರಲ್ಲಿ ಮತ್ತೆ ಕೂಡ್ಲು ಸಮೀಪದ ಎಸಿಎಸ್ ಲೇಔಟ್ನ ಎಮ್.ಎಸ್ ಧೋನಿ ಸ್ಕೂಲ್ ಸಮೀಪ ಕಳೆದ ರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದೆ.

ನಿನ್ನೆ ರಾತ್ರಿ 10.30 ರ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತಬ್ರೇಜ್ ಎಂಬಾತ ಚಿರತೆ ಓಡಾಡುತ್ತಿರುವುದನ್ನ ನೋಡಿದ್ದಾರೆ. ಈ ಬಗ್ಗೆ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಹೆಜ್ಜೆ ಗುರುತುಗಳನ್ನ ಪರಿಶೀಲನೆ ನಡೆಸಿದ್ದಾರೆ. ಇ
ಕಳೆದ ತಿಂಗಳ 27 ನೇ ತಾರೀಖಿನಂದು ಇದೇ ಏರಿಯಾದಲ್ಲಿ ಚಿರತೆ ರಸ್ತೆ ದಾಟಿ ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು. ಇದರ ಪಕ್ಕದ ರಸ್ತೆಯಲ್ಲಿ ಬೈಕ್ ಸವಾರ ತಬ್ರೇಜ್ ಚಿರತೆಯನ್ನು ನೋಡಿರೋದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಜನರಲ್ಲಿ ಮತ್ತೆ ಚಿರತೆ ಭಯ ಶುರುವಾಗಿದೆ.
ಚಿರತೆ ಕಾಣಿಸಿಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ಜನರು ಮನೆಯಿಂದ ಹೊರಬರಲು ಸಹ ಭಯ ಪಡುವಂತಾಗಿದೆ. ಕೂಡ್ಲುಗೇಟ್ ಸಮೀಪದ ಎಸಿಎಸ್ ಲೇಔಟ್ನ ಸುತ್ತಮುತ್ತಲಿನ ಕಡೆಗಳಲ್ಲಿ ಪ್ರತಿಷ್ಠಿತ ಶಾಲಾ ಕಾಲೇಜು ಹಾಗೂ ಅಪಾರ್ಟ್ಮೆಂಟ್ಗಳಿದ್ದು ಜನವಸತಿ ಪ್ರದೇಶದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಸೃಷ್ಟಿಮಾಡಿದೆ.
ಈ ಏರಿಯಾಗಳಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದು ರಸ್ತೆ ಬದಿಗಳಲ್ಲಿ ನಿಲ್ಲಸಲಾದ ಕಾರುಗಳ ಕೆಳಗೆ, ಹೋಟೆಲ್, ಬಾರ್ಗಳ ಸಮೀಪ ಹೆಚ್ಚಾಗಿ ಕಂಡುಬರುತ್ತಿದ್ದವು. ಆದರೆ ಕೆಲ ದಿನಗಳಿಂದ ಒಂದೊಂದಾಗಿಯೇ ಬೀದಿ ನಾಯಿಗಳು ಕಾಣೆಯಾಗುತ್ತಿದ್ದು, ಚಿರತೆ ಬೇಟೆಯಾಡಿದೆ ಎನ್ನುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಕೂಡ್ಲುಗೇಟ್ನ ಕೃಷ್ಣರೆಡ್ಡಿ ಲೇಔಟ್ನಲ್ಲಿ ಕಾಣಿಸಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಗುಂಡಿಕ್ಕಿ ಕೊಂದು ಮೂರ್ನಾಲ್ಕು ದಿನ ಕಳೆಯುವಷ್ಟರಲ್ಲಿ ಮತ್ತೆರಡು ಕಡೆಗಳಲ್ಲಿ ಚಿರತೆ ಕಾಣಿಸಿಕೊಂಡಿದೆ. ಕೂಡ್ಲುಗೇಟ್ ಸಮೀಪ ಹಾಗೂ ಎಲೆಕ್ಟ್ರಾನಿಕ್ ಸಿಟಿಯ ನೈಸ್ ರೋಡ್ ಸಮೀಪದ ಚಿಕ್ಕತೋಗೂರು ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಹೆಜ್ಜೆ ಗುರುತುಗಳು ಸಹ ಪತ್ತೆಯಾಗಿದೆ.
ಚಿರತೆಯನ್ನು ಗುಂಡಿಕ್ಕಿ ಕೊಂದಿದ್ದ ಅರಣ್ಯ ಇಲಾಖೆ ಈ ಬಾರಿ ಆ ರೀತಿಯ ಎಡವಟ್ಟು ಮಾಡದೆ ಬೋನ್ಗಳನ್ನು ಸರಿಯಾಗಿ ಇಟ್ಟು ಕಾರ್ಯಾಚರಣೆ ನಡೆಸಿ ಚಿರತೆಯನ್ನ ಸೆರೆ ಹಿಡಿದು ಕಾಡಿಗೆ ಬೀಡುವಂತಹ ಕೆಲಸವನ್ನು ಮಾಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಒಂದು ಚಿರತೆಯ ಕಾಟ ತಪ್ಪಿತ್ತು ಎನ್ನುವಷ್ಟರಲ್ಲಿ ಮತ್ತೆರಡು ಕಡೆ ಚಿರತೆ ಕಾಣಿಸಿಕೊಂಡಿದೆ. ಜನ ವಾಸಿಸುವ ಜಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಜನರ ಎದೆ ಬಡಿತ ಹೆಚ್ಚಿಸಿದೆ. ಸಿಸಿಟಿವಿ ದೃಶ್ಯ ಹಾಗೂ ಚಿರತೆಯ ಹೆಜ್ಜೆ ಗುರುತುಗಳನ್ನು ಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆ ಚಿರತೆ ಯಾವ ಭಾಗದಲ್ಲಿದೆ ಎನ್ನುವ ಬಗ್ಗೆ ಖಚಿತವಾದ ಕೂಡಲೆ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.












Click it and Unblock the Notifications