ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಪ್ರಸ್ತಾಪ; ಸಾರಿಗೆ ಸಚಿವರು ಹೇಳುವುದೇನು?
ಬೆಂಗಳೂರು, ಜೂನ್ 08: ರಾಜ್ಯದಲ್ಲಿ ಜೂನ್ 14ರವರೆಗೂ ಲಾಕ್ಡೌನ್ ವಿಸ್ತರಿಸಲಾಗಿದ್ದು, ಲಾಕ್ಡೌನ್ ಸಡಿಲಿಕೆ ಬಳಿಕ ಸಾರಿಗೆ ಆರಂಭಿಸುವ ಹಾಗೂ ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸುವ ಕುರಿತು ಸಾರಿಗೆ ಸಚಿವ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿದ್ದಾರೆ.
ಜೂನ್ 14ರ ನಂತರ ಲಾಕ್ಡೌನ್ ಸಡಿಲ ಮಾಡಿದರೆ ಹಂತ ಹಂತವಾಗಿ ಸಾರಿಗೆ ಪ್ರಾರಂಭ ಮಾಡುತ್ತೇವೆ. ಪ್ರಯಾಣಿಕರ ಅಂತರ ಕಾಯ್ದುಕೊಂಡು, ಅವರಿಗೆ ಸ್ಯಾನಿಟೈಸರ್, ಮಾಸ್ಕ್ ಎಲ್ಲವನ್ನು ಕೊಡುತ್ತೇವೆ ಎಂದು ಹೇಳಿದ್ದಾರೆ. ಕೊರೊನಾ ಸೋಂಕಿಗೆ ಎರಡೂ ಡೋಸ್ ಲಸಿಕೆ ಆಗುವವರೆಗೂ ನಮ್ಮ ನೌಕರರಿಗೆ ಕೆಲಸಕ್ಕೆ ಬರಲು ಒತ್ತಡ ಹಾಕುವುದಿಲ್ಲ. ಎರಡನೇ ಡೋಸ್ ತೆಗೆದುಕೊಂಡವರಿಗೆ ರಕ್ಷಣೆ ಕೊಟ್ಟು ಸೇವೆ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
KSRTC ಟ್ರೇಡ್ ಮಾರ್ಕ್; ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ...
ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, "ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸಲಾಗುತ್ತಿದೆ ಎಂಬ ವರದಿ ಬರುತ್ತಿವೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿ ರಾಜ್ಯದಲ್ಲಿ ನಾಲ್ಕು ನಿಗಮಗಳಿವೆ. ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಿಗೆ ಮಾಡುವುದಿಲ್ಲ. ಕೊರೊನಾ ಲಾಕ್ಡೌನ್ನಿಂದಾಗಿ ಜನರು ಮೊದಲೇ ಕಷ್ಟದಲ್ಲಿದ್ದಾರೆ. ಮತ್ತೆ ಅವರಿಗೆ ಕಷ್ಟ ಕೊಡಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಯೋಚಿಸಲಾಗುವುದು" ಎಂದು ಹೇಳಿದ್ದಾರೆ.
Recommended Video
ಬಿಎಂಟಿಸಿ ದರ ಹೆಚ್ಚಿಸಲು ಅಧಿಕಾರಿಗಳು ಪ್ರಸ್ತಾವನೆ ಕೊಟ್ಟಿರುವುದು ನಿಜ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.