ಸಚಿವ ಜಯಚಂದ್ರ ವಿರುದ್ಧ ಕೆರೆ ಒತ್ತುವರಿ ಪ್ರಕರಣ ದಾಖಲು
ಕರ್ನಾಟಕ ಕಾನೂನು ಸಚಿವ ಟಿಬಿ ಜಯಚಂದ್ರ ವಿರುದ್ಧ ಭೂ ಕಬಳಿಕೆ ಕುರಿತಂತೆ ದೂರು. ರಾಜ್ಯ ಹೈಕೋರ್ಟ್ ನಲ್ಲಿ ದಾಖಲಾದ ದೂರು. ಸೋಮವಾರದಿಂದ ವಿಚಾರಣೆ ಆರಂಭ. ಉಳ್ಳಾಲ ಕೆರೆಯ ಸುಮಾರು 15 ಗುಂಟೆ ಜಾಗವನ್ನು ಒತ್ತವರಿ ಮಾಡಿರುವುದಾಗಿ ಕಾನೂನು ಸಚಿವ ರಾಮಮ
ಬೆಂಗಳೂರು, ಆಗಸ್ಟ್ 7: ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ವಿರುದ್ಧ ಬೆಂಗಳೂರಿನ ಉಳ್ಳಾಲ ಕೆರೆಗೆ ಸೇರಿದ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಎದುರಾಗಿದೆ.
ರಾಮಮೂರ್ತಿ ಗೌಡ ಎಂಬುವರು ಹೈಕೋರ್ಟ್ ನಲ್ಲಿ ಈ ದೂರನ್ನು ದಾಖಲಿಸಿದ್ದಾರೆ. ಟಿ.ಬಿ. ಜಯಚಂದ್ರ ಅವರು ವ್ಯವಸ್ಥಾಪಕ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿರುವ ಮಳವಳ್ಳಿ ಚಿಕ್ಕಣ್ಣ ಚಾರಿಟೀಸ್ ಟ್ರಸ್ಟ್ ನಿಂದ ಈ ಭೂ ಕಬಳಿಕೆಯಾಗಿದೆ ಎಂದು ದೂರಿನಲ್ಲಿ ರಾಮಮೂರ್ತಿ ಆರೋಪಿಸಿದ್ದಾರೆ.

ಸರ್ವೆ ಸಂಖ್ಯೆ 93ರಲ್ಲಿ ಬರುವ ಉಲ್ಲಾಳ ಕೆರೆಯು ಸುಮಾರು 24.12 ಎಕರೆಯಷ್ಟು ವಿಸ್ತೀರ್ಣವಾಗಿದೆ. ಈ ಕೆರೆಯಂಗಳದ ಸುಮಾರು 15 ಗುಂಟೆಯಷ್ಟು ಭೂಮಿ ಕಬಳಿಸಲಾಗಿದೆ ಎಂದು ಗೌಡ ಆರೋಪಿಸಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು (ಎನ್ ಜಿಸಿ), ಕೆರೆ ಅಥವಾ ಯಾವುದೇ ಜಲ ಸಂಪನ್ಮೂಲ ಸ್ಥಳಗಳಿಂದ 75 ಮೀಟರ್ ವರೆಗಿನ ಭೂಮಿಯಲ್ಲಿ ಯಾವುದೇ ಚಟುವಟಿಕೆ ನಡೆಸದಿರುವಂತೆ ಸೂಚಿಸಿದೆ. ಹಾಗಾಗಿ, ಟ್ರಸ್ಟ್ ವತಿಯಿಂದ ಇಲ್ಲಿ ಭೂಮಿ ಒತ್ತುವರಿ ಆಗಿರುವುದು ನ್ಯಾಯಾಧೀಕರಣದ ಸೂಚನೆ ಸ್ಪಷ್ಟ ಉಲ್ಲಂಘನೆಯೆಂದು ಹೇಳಲಾಗಿದೆ.
ಆದರೆ, ಈ ಆರೋಪವನ್ನು ಟ್ರಸ್ಟ್ ತಳ್ಳಿಹಾಕಿದೆ. ಇದು, ಕೆರೆಯಂಗಳದ ಜಾಗವಾಗಿದ್ದರೂ ಕಾನೂನಾತ್ಮಕವಾಗಿಯೇ ಟ್ರಸ್ಟ್ ಹೆಸರಿಗೆ ಮಂಜೂರಾಗಿರುವ ಸ್ಥಳವೆಂದು ಅದು ವಾದಿಸಿದೆ.
ಎರಡೂ ಪಕ್ಷದ ವಾದ-ವಿವಾದ ಆಲಿಸಿರುವ ನ್ಯಾಯಾಲಯ, ಬಿಬಿಎಂಪಿಯು (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಈ ಬಗ್ಗೆ ವಿವರಣೆ ನೀಡಬೇಕೆಂದು ಸೂಚಿಸಿದೆ. ಅಲ್ಲದೆ, ಮುಂದಿನ ವಿಚಾರಣೆಯನ್ನು ಆಗಸ್ಟ್ 24ರವರೆಗೆ ಮುಂದೂಡಿದೆ.












Click it and Unblock the Notifications