ಭೂ ಹಗರಣ: ಯಡಿಯೂರಪ್ಪ ವಿರುದ್ಧ 16ನೇ ಎಫ್ ಐಆರ್
ಬೆಂಗಳೂರು, ಡಿ. 20: ಡೆಲ್ಲಿ ಬಿಟ್ಟು ಹಳ್ಳಿ ರಾಜಕಾರಣದಲ್ಲಿ ನಿರತರಾಗಿರುವ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಿಸಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಕಸಬಾ ಹೋಬಳಿಯ ಕಾಚರಕನಹಳ್ಳಿಯ 1 ಎಕರೆ ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಬಿಎಸ್ ವೈ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಸೋನಿಯಾ ಗಾಂಧಿ ಪ್ರಕರಣವೇ ಬೇರೆ, ಬಿಎಸ್ ವೈ ಪ್ರಕರಣವೇ ಬೇರೆ, ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗಿದೆ' ಎಂದಿದ್ದಾರೆ. [ಯಡಿಯೂರಪ್ಪಗೆ ರಿಲೀಫ್ ನೀಡಿದ 5 ಪ್ರಕರಣಗಳು]
ಸಿಎಜಿ ವರದಿ ಆಧಾರಿಸಿ ಭೂ ಹಗರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾದ 16ನೇ ಎಫ್ ಐಆರ್ ಇದಾಗಿದೆ. 2010ರಲ್ಲಿ 1 ಎಕರೆ ಡಿನೋಟಿಫಿಕೇಷನ್ ಮಾಡಿರುವುದರಲ್ಲಿ ಅಕ್ರಮ ಎಸಗಲಾಗಿದೆ ಎಂದು ಬಿಡಿಎ 2012 ಡಿನೋಟಿಫಿಕೇಷನ್ ಸಿಎಜಿ ವರದಿಯಲ್ಲಿ ಹೇಳಲಾಗಿದೆ. [ಯಡಿಯೂರಪ್ಪ ಅವರ ವಿರುದ್ಧದ 13 FIR ರದ್ದಾಗಲಿದೆಯೇ?]
ಈ ಕುರಿತಂತೆ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ಕೆಯ 13(1)(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ ಎಂದು ಅರ್ಜಿದಾರ ಜಯಕುಮಾರ್ ಹಿರೇ ಮಠ್ ಹೇಳಿದ್ದಾರೆ.
ಸುಮಾರು 29 ಪ್ರಕರಣಗಳು ಕಂಡು ಬಂದಿದ್ದು, ಮೇ 2015ರಿಂದ ಸರಣಿ ಎಫ್ ಐಆರ್ ಗಳನ್ನು ದಾಖಲಿಸಲು ಲೋಕಾಯುಕ್ತ ಪೊಲೀಸರು ಮುಂದಾಗಿದೆ. ಬೆಂಗಳೂರಿನ ಎಬಿಆರ್ ಲೇಔಟ್ ನ ಒಂದನೇ ಸ್ಟೇಜ್ ಸ್ಥಾಪನೆಗಾಗಿ ಬಿಡಿಎ 1985ರಲ್ಲೇ ಭೂ ಸ್ವಾಧೀನಪಡಿಸಿಕೊಂಡಿತ್ತು.
ಒಟ್ಟು 8 ಎಕರೆಯಲ್ಲಿ 1 ಎಕರೆಯನ್ನು ಬಿಎಸ್ ಯಡಿಯೂರಪ್ಪ ಅವರು ಡಿನೋಟಿಫೈ ಮಾಡಿದ್ದರು. ಮೂಲ ಖಾತೆದಾರರಲ್ಲದವರಿಗೆ ಭೂಮಿ ಸಿಕ್ಕಿದ್ದು, ಜನವರಿ 2010ರಲ್ಲಿ ಡಿನೋಟಿಫೈ ಆದ ಭೂ ಭಾಗವನ್ನು ಸೆಪ್ಟೆಂಬರ್ 2010ರಲ್ಲಿ 1.5 ಕೋಟಿ ರು ಗಳಿಗೆ ಮಾರಾಟ ಮಾಡಲಾಗಿತ್ತು. ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ಬೆನ್ನಿಗಾನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ರದ್ದುಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.(ಒನ್ ಇಂಡಿಯಾ ಸುದ್ದಿ)