ಬೆಂಗಳೂರಿನ ಪ್ರಮುಖ ಯೋಜನೆಗೆ ಭರ್ಜರಿ ಭೂಸ್ವಾಧೀನ ಪ್ರಕ್ರಿಯೆ: ಸರ್ಜಾಪುರ ಯೋಜನೆ ಹೊಸ ಅಪ್ಡೇಟ್ಸ್!
ಬೆಂಗಳೂರು ಜೂನ್ 03: ಬೆಂಗಳೂರಿನಲ್ಲಿ ಪ್ರಮುಖ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಂದಾಗಿದೆ. ಸರ್ಜಾಪುರ ಮುಖ್ಯ ರಸ್ತೆಯ ಅಗಲೀಕರಣ ಕಾರ್ಯ ಪೂರ್ಣಗೊಂಡಿದೆ. ಸರ್ವೀಸ್ ರಸ್ತೆಯ ಅಭಿವೃದ್ಧಿಗಾಗಿ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಭರ್ಜರಿ ಚರ್ಚೆ ನಡೆದಿದೆ. ಈ ಬಗ್ಗೆ ಬಿಬಿಎಂಪಿಯ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸರ್ಜಾಪುರ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಸಮಸ್ಯೆಯನ್ನು ಪರಿಹರಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಮಹದೇವಪುರ ವಲಯ ವ್ಯಾಪ್ತಿಯ ಇಬ್ಬಲೂರು ಜಂಕ್ಷನ್ ಬಳಿಯಿಂದ ಪಾದಚಾರಿ ಮಾರ್ಗ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ನಡಿಗೆಯ ಮೂಲಕ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಸರ್ಜಾಪುರ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಬೇಕಿರುವ ಸ್ವತ್ತಿನ ಮಾಲೀಕರ ಮನವೊಲಿಸಿ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಇಬ್ಬಲೂರು ಜಂಕ್ಷನ್ ನಿಂದ ಕಾರ್ಮಲ್ ರಾಮ್ ಆರ್.ಜೆ ಟೆಕ್ ಪಾರ್ಕ್ ವರೆಗಿನ 4.7 ಕಿ.ಮೀ ರಸ್ತೆಯನ್ನು 45 ಮೀಟರ್ ಅಗಲೀಕರಣ ಮಾಡುವ ಸಂಬಂಧ ಈಗಾಗಲೇ 2022 ರಲ್ಲಿಯೇ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಿ ಡಾಂಬರೀಕರಣ ಮಾಡಲಾಗಿದೆ ಆದರೆ, ಸರ್ವೀಸ್ ರಸ್ತೆಯಲ್ಲಿ ಬರುವ ಸ್ವತ್ತುಗಳಿಗೆ ಟಿ.ಡಿ.ಆರ್ ಅಡಿಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅದಕ್ಕೆ ಮುಖ್ಯ ಆಯುಕ್ತರು ಪ್ರತಿಕ್ರಿಯಿಸಿ, ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಸರ್ವೀಸ್ ರಸ್ತೆಯಲ್ಲಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಗೆ ಒಪ್ಪಿರುವ ಮಾಲೀಕರಿಂದ ಪರಿತ್ಯಾಜನ ಪತ್ರದ ಮೂಲಕ ಭೂಸ್ವಾಧೀನಗೊಂಡಿರುವ ಜಾಗವನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಳ್ಳಲು ಸೂಚನೆ ನೀಡಿದರು. ಜೊತೆಗೆ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜಂಕ್ಷನ್ ಗಳ ಅಭಿವೃದ್ಧಿಗೊಳಿಸಿ: ಇಬ್ಲೂರು ಜಂಕ್ಷನ್, ಹರಳೂರು ರಸ್ತೆ ಜಂಕ್ಷನ್ ಹಾಗೂ ಕಸವನಹಳ್ಳಿ ರಸ್ತೆ ಜಂಕ್ಷನ್ ಗಳ ಸುಧಾರಣೆ ಮಾಡಬೇಕಾಗಿದ್ದು, ಅದಕ್ಕೆ ಸರಿಯಾದ ಯೋಜನೆ ರೂಪಿಸಿ ಪಾದಚಾರಿ ಮಾರ್ಗಗಳ ನಿರ್ಮಾಣ, ಪಾದಚಾರಿ ಕ್ರಾಸಿಂಗ್ಗಳ ಅಳವಡಿಕೆ ಸೇರಿದಂತೆ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸೂಚಿಸಲಾಯಿತು.
ಡ್ರೋನ್ ಸಮೀಕ್ಷೆ ಮಾಡಿ: ಮಹದೇವಪುರ ವಲಯ ವ್ಯಾಪ್ತಿಯಲ್ಲಿರುವ ರಾಜಕಾಲುವೆಗಳಲ್ಲಿ ಸಮರ್ಪಕವಾಗಿ ಹೂಳೆತ್ತಬೇಕು. ಇನ್ನು ರಾಜಕಾಲುವೆಗಳು ಒತ್ತುವರಿಯಾಗಿರುವುದನ್ನು ಗಮನಿಸುವ ಸಲುವಾಗಿ ಡ್ರೋನ್ ಮೂಲಕ ಸಮೀಕ್ಷೆ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

1 ಲಕ್ಷ ರೂ. ದಂಡ ವಿಧಿಸಿ: ಶ್ರೀನಿವಾಸ ಕ್ಲಾಸಿಕ್ ವಸತಿ ಸಮುಚ್ಚಯದಿಂದ ರಾಜಕಾಲುವೆಗೆ ನೇರವಾಗಿ ಕೊಳಚೆ ನೀರು ಹರಿಬಿಟ್ಟಿರುವುದನ್ನು ಗಮನಿಸಿ, ಸಮುಚ್ಛಯದ ಮಾಲೀಕರಿಗೆ 1 ಲಕ್ಷ ರೂ. ದಂಡ ವಿಧಿಸಬೇಕು. ಜೊತೆಗೆ ಕೊಳಚೆ ನೀರನ್ನು ರಾಜಕಾಲುವೆಗೆ ಬಿಡದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸ್ಥಳದಲ್ಲಿ ಮಳೆಗಾಲ ಇರುವುದರಿಂದ ರಾಜಕಾಲುವೆಯಲ್ಲಿ ಹೂಳು ತೆಗೆಯಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕ್ಯಾಮೆರಾ ಅಳವಡಿಸಲು ಸೂಚನೆ: ಕ್ಲೌಡ್ ನೈನ್ ಆಸ್ಪತ್ರೆ ಬಳಿ ಕಸ ವರ್ಗಾವಣೆ ಸ್ಥಳ ಪರಿಶೀಲನೆ ನಡೆಸುವ ವೇಳೆ, ನಾಗರಿಕರು ರಾತ್ರಿ ವೇಳೆ ಕಸ ತಂದು ಬಿಸಾಡುತ್ತಾರೆ ಎಂದು ಸ್ಥಳಿಯ ಸಾರ್ವಜನಿಕರು ದೂರಿದರು. ಈ ಸಂಬಂಧ ಕಸ ವರ್ಗಾವಣೆ ಸ್ಥಳಕ್ಕೆ ಶೆಡ್ ರೀತಿ ನಿರ್ಮಾಣ ಮಾಡಿ ಕಸ ಬಿಸಾಡದಂತೆ ಕ್ರಮವಹಿಸಲು ಕ್ಯಾಮೆರಾ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
2 ಕಿ.ಮೀ ನಡಿಗೆ: ಸರ್ಜಾಪುರ ರಸ್ತೆಯ ಇಬ್ಬಲೂರು ಜಂಕ್ಷನ್ ನಿಂದ ಕಸವನಹಳ್ಳಿ ರಸ್ತೆ ಜಂಕ್ಷನ್ ವರೆಗೆ 2 ಕಿ.ಮೀ. ರಸ್ತೆಯಲ್ಲಿ ನಡಿಗೆ ಮೂಲಕ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ, ಪಾದಚಾರಿಗಳ ಮಾರ್ಗಗಳ ಸಮರ್ಪಕ ನಿರ್ವಹಣೆ, ಸೈಡ್ ಡ್ರೈನ್ ಗಳ ದುರಸ್ತಿ ಹಾಗೂ ಹೂಳೆತ್ತುವುದು, ರಸ್ತೆ ಬದಿ ತ್ಯಾಜ್ಯ ಬಿಸಾಡದಂತೆ ಕ್ರಮವಹಿಸುವುದು, ಪಾದಚಾರಿಗಳು ರಸ್ತೆ ದಾಟುವ ಸಲುವಾಗಿ ಪಾದಚಾರಿ ಮೇಲ್ಸೇತುವೆ ನಿರ್ಮಿಸುವುದು, ಪಾದಚಾರಿ ಮಾರ್ಗಗಳು ಇಲ್ಲದಿರುವ ಕಡೆ ಹೊಸದಾಗಿ ಪಾದಚಾರಿ ಮಾರ್ಗಗಳನ್ನು ನಿರ್ಮಾಣ ಮಾಡುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಹೆಚ್ಚು ಗಮನ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಮುಖ್ಯ ಮುಖ್ಯ ಎಂಜಿನಿಯರ್ ರಂಗನಾಥ್, ಕಾರ್ಯಪಾಲಕ ಎಂಜಿನಿಯರ್ ಉದಯ್ ಚೌಗುಲೆ, ರಾಘವೇಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.












Click it and Unblock the Notifications