ಲಾಲ್ ಬಾಗ್ ನಲ್ಲಿ ಪುಷ್ಪರಾಶಿಯ ಸೊಬಗು ಕಣ್ತುಂಬಿಕೊಂಡ ಜನರು
ಬೆಂಗಳೂರು, ಜನವರಿ 22: ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಪ್ರಾರಂಭವಾಗಿ ಈಗಾಗಲೇ ಮೂರು ದಿನ ಕಳೆದಿದೆ. ಭಾನುವಾರ ರಜೆ ಇದ್ದುದರಿಂದ ಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬಂದಿತ್ತು.
ಲಾಲ್ ಬಾಗ್ ಗೆ ಭಾನುವಾರ 50 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದು, 23 ಲಕ್ಷ ರೂ. ಹಣ ಸಂಗ್ರಹವಾಗಿದೆ. ಉದ್ಯಾನಕ್ಕೆ ಬರುವವರಿಗೆ ತೊಂದರೆಯಾಗದಂತೆ ಮಣ್ಣಿನ ರಸ್ತೆಗಳಿಗೆ ಮಧ್ಯಾಹ್ನದ ನಂತರ ಟ್ಯಾಂಕರ್ ಗಳಲ್ಲಿ ನೀರು ಸಿಂಪಡಿಸಲಾಯಿತು, ಹೀಗಾಗಿ ಧೂಳಿನ ಸಮಸ್ಯೆಯಿರಲಿಲ್ಲ. ಅಲ್ಲದೆ ವೀಕ್ಷಕರಿಗೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿತ್ತು.
ಪ್ರದರ್ಶನದ ವೇಳೆ ಯಾವುದೇ ಅವ್ಯವಸ್ಥೆ ನಡೆಯದಂತೆ ಆಯೋಜಕರು ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಜತೆಗೆ ಉದ್ಯಾನದೊಳಗೆ ಅನಧಿಕೃತ ವ್ಯಾಪಾರಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕ್ರಮ ಕೈಗೊಳ್ಳಲಾಗಿತ್ತು. ಜೇನು ಹುಳುಗಳು ಬಾರದಂತೆಯೂ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.

ಡಬ್ಬಲ್ ರೋಡ್ ಗೇಟ್ ನ ಪ್ರವೇಶ ದ್ವಾರದಲ್ಲಿ ವಾಹನಗಳ ದಟ್ಟಣೆ ಉಂಟಾಗದಂತೆ ಹಾಗೂ ಲಾಲ್ ಬಾಗ್ ನೊಳಗೆ ವಾಹನಗಳು ಹೋಗದಂತೆ ಪೊಲೀಸರು ಅಗತ್ಯ ಬ್ಯಾರಿಕೇಡ್ ಗಳನ್ನು ಹಾಕಿದ್ದರು.
ಅಧಿಕಾರಿಗಳೇ ಖುದ್ದು ನಿಯಂತ್ರಣ: ಲಾಲ್ ಬಾಗ್ ಉಸ್ತುವಾರಿ ಹೊತ್ತಿರುವ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಆರ್ ಚಂದ್ರಶೇಖರ್, ಮನೋಹರ್ ಸೇರಿದಂತೆ ಇಲಾಖೆಯ ಅಧಿಕಾರಿಗಳೇ ಖುದ್ದು ವಾಕಿ ಟಾಕಿ ಹಿಡಿದು ಇಡೀ ಉದ್ಯಾನದಲ್ಲಿ ಓಡಾಡುತ್ತಾ, ದಿನವಿಡೀ ನಿಗಾ ವಹಿಸಿದ್ದರು.












Click it and Unblock the Notifications