ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಎಚ್ಡಿಕೆ ಅಸಮಾಧಾನ?
ಬೆಂಗಳೂರು, ಸೆಪ್ಟೆಂಬರ್, 07 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ವಿಚಾರ ಇನ್ನು ಅಸ್ಪಷ್ಟವಾಗಿಯೇ ಇದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಹಬ್ಬಿದ್ದು, ಅಚ್ಚರಿಗೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವಿನ ಮಾತುಕತೆ ಮುಂದಕ್ಕೆ ಹೋಗುತ್ತಲಿದ್ದು, ಇನ್ನೂ ಚರ್ಚೆಗೆ ವೇದಿಕೆ ಸಿದ್ಧವಾಗಿಲ್ಲ. ಎಚ್.ಡಿ.ದೇವೇಗೌಡರು ಮೈತ್ರಿ ಬಗ್ಗೆ ಕುಮಾರಸ್ವಾಮಿ ಅವರ ಜೊತೆ ಚರ್ಚೆ ನಡೆಸಿ ಎಂದು ಪರಮೇಶ್ವರ ಅವರಿಗೆ ಕಳೆದ ವಾರವೇ ಸೂಚಿಸಿದ್ದಾರೆ. [ಪರಮೇಶ್ವರ, ದೇವೇಗೌಡ ಭೇಟಿ : ಮಾತುಕತೆ ವಿವರಗಳು]
'ಬಿಬಿಎಂಪಿಯ ಮೈತ್ರಿ ಮಾತುಕತೆ ಶಾಸಕರ ಮಟ್ಟದಲ್ಲಿ ಆಗಿರುವಂತದ್ದು' ಎಂಬ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವುದು ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ಕುಮಾರಸ್ವಾಮಿ-ಪರಮೇಶ್ವರ ನಡುವೆ ಇನ್ನೂ ಮಾತುಕತೆ ನಡೆದಿಲ್ಲ ಎಂಬುದು ಸದ್ಯದ ಸುದ್ದಿ. [ಜೆಡಿಎಸ್ ಕೊಟ್ಟ ಬಿಸಿ ತುಪ್ಪ ನುಂಗದಿರಲು ಕೈ ನಿರ್ಧಾರ?]
'ಬಿಬಿಎಂಪಿ ಮೈತ್ರಿ ಮಾತುಕತೆ ಪೂರ್ಣಗೊಂಡಿದ್ದು ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಮೇಯರ್ ಆಯ್ಕೆ ಮಾಡಲಿವೆ. ಮೈತ್ರಿ ಬಗ್ಗೆ ಯಾವುದೇ ಅನುಮಾನ ಬೇಡ' ಎಂದು ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಮಾತುಕತೆ ಯಾವ ಹಂತದಲ್ಲಿದೆ ಎಂಬ ವಿವರಗಳು ಚಿತ್ರಗಳಲ್ಲಿವೆ....

ಪರಮೇಶ್ವರ-ಎಚ್ಡಿಕೆ ಭೇಟಿ ಇನ್ನೂ ನಡೆದಿಲ್ಲ
ಸೆಪ್ಟೆಂಬರ್ 11ರ ಶುಕ್ರವಾರ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಆದರೆ, ಇಲ್ಲಿಯ ತನಕ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿಲ್ಲ. ದೂರವಾಣಿ ಮೂಲಕ ಮಾತುಕತೆ ಮಾಡಿದ್ದಾರೆ ಎಂದು ಕೆಲವು ನಾಯಕರು ಹೇಳುತ್ತಿದ್ದಾರೆ.

ಮುಖ್ಯಮಂತ್ರಿಗಳ ಮಾತಿಗೆ ಎಚ್ಡಿಕೆ ಅಸಮಾಧಾನ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ಶಾಸಕರ ಮಟ್ಟದಲ್ಲಿ ಮೈತ್ರಿ ಮಾತುಕತೆಗಳು ನಡೆದಿವೆ' ಎಂದು ಹೇಳಿರುವುದು ಕುಮಾರಸ್ವಾಮಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಶಾಸಕರ ಮಟ್ಟದ ಮಾತುಕತೆಗಳಾದರೆ ನಾನೇಕೆ ಪರಮೇಶ್ವರ ಅವರನ್ನು ಭೇಟಿಯಾಗಬೇಕು ಎಂದು ಕುಮಾರಸ್ವಾಮಿ ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಮೈತ್ರಿ ಬಗ್ಗೆ ಮಾತುಕತೆ ನಡೆಸಲು ಬರಲಿ ಎಂದು ಕುಮಾರಸ್ವಾಮಿ ನಿರೀಕ್ಷಿಸುತ್ತಿದ್ದಾರೆ ಎಂಬುದು ಪಕ್ಷದ ಮೂಲಗಳ ಮಾಹಿತಿ.

ಮೈತ್ರಿ ಬಗ್ಗೆ ಯಾವುದೇ ಅನುಮಾನ ಬೇಡ
ಜೆಡಿಎಸ್ ಪಕ್ಷದ ಪರವಾಗಿ ಮೈತ್ರಿ ಮಾತುಕತೆಯಲ್ಲಿ ಸಕ್ರಿಯರಾಗಿರುವುದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್. 'ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಗ್ಗೆ ಅನುಮಾನ ಬೇಡ. ಇಬ್ಬರು ಸೇರಿ ಮೇಯರ್ ಆಯ್ಕೆ ಮಾಡಿ, ಆಡಳಿತ ನಡೆಸುತ್ತೇವೆ ಎಂದು' ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಎರಡು ಷರತ್ತಿಗೆ ಒಪ್ಪಿದರೆ ಮೈತ್ರಿ
'ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಯಾವುದೇ ಷರತ್ತು ವಿಧಿಸಿಲ್ಲ' ಎಂಬ ಎಚ್.ಡಿ.ದೇವೇಗೌಡರ ಮಾತಿಗೂ ಕುಮಾರಸ್ವಾಮಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದ ಹಗರಣದ ತನಿಖೆಯಾಗಬೇಕು ಮತ್ತು ಬಿಬಿಎಂಪಿಯನ್ನು ವಿಭಜನೆ ಮಾಡಬಾರದು ಎಂಬ ಷರತ್ತು ವಿಧಿಸಿ ಮೈತ್ರಿ ಮಾಡಿಕೊಳ್ಳಬೇಕು ಎಂಬುದು ಕುಮಾರಸ್ವಾಮಿ ಅವರ ನಿಲುವು.

5 ದಿನಗಳು ಬಾಕಿ ಇವೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾದರೆ ಜೆಡಿಎಸ್ಗೆ ಉಪ ಮೇಯರ್ ಪಟ್ಟ ಲಭಿಸಲಿದೆ ಎಂಬುದು ಲೆಕ್ಕಾಚಾರ. ಆದರೆ, ಈ ಕುರಿತು ಯಾವ ನಾಯಕರು ಹೇಳಿಕೆ ನೀಡಿಲ್ಲ. ಶುಕ್ರವಾರ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಸೋಮವಾರವೂ ಸೇರಿಸಿ 5 ದಿನಗಳು ಬಾಕಿ ಇದ್ದು, ಯಾವ-ಯಾವ ನಾಯಕರ ನಡುವೆ ಮಾತುಕತೆ ನಡೆಯಲಿದೆ ಎಂದು ಕಾದು ನೋಡಬೇಕು.

ಬಿಜೆಪಿ ಕಾರ್ಯತಂತ್ರವೇನು?
ಬಿಜೆಪಿಯವರೇ ಮೇಯರ್ ಎಂದು ಪಕ್ಷದ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕಾಗಿ ಪಕ್ಷ ಯಾವ ಕಾರ್ಯತಂತ್ರ ಮಾಡಿದೆ ಎಂಬುದು ಇನ್ನೂ ನಿಗೂಢ. ಬಿಬಿಎಂಪಿ ಆಡಳಿತ ಹಿಡಿಯಲು ಕಾಂಗ್ರೆಸ್ ನಡೆಸಿರುವ ಯತ್ನ ವಿರೋಧಿಸಿ ಬಿಜೆಪಿ ಭಾನುವಾರ ಸಹಿ ಸಂಗ್ರಹ ಚಳವಳಿ ಆರಂಭಿಸಿದೆ. ರಾಜ್ಯಪಾಲರಿಗೆ ಮೈತ್ರಿಯ ಬಗ್ಗೆ ದೂರು ನೀಡಲು ಪಕ್ಷ ಮುಂದಾಗಿದೆ.












Click it and Unblock the Notifications