ಕುಮಾರಸ್ವಾಮಿ ಸುಳ್ಳು ಹೇಳಿ ಅಧಿಕಾರ ಪಡೆದಿದ್ದಾರೆ: ಬಿಎಸ್ವೈ
ಬೆಂಗಳೂರು, ಮಾರ್ಚ್ 13: ಸಾಲಮನ್ನಾದ ಸುಳ್ಳು ಭರವಸೆ ನೀಡದೇ ಇದ್ದಿದ್ದರೆ ಜೆಡಿಎಸ್ ಪಕ್ಷಕ್ಕೆ 27 ಸೀಟು ಕೂಡ ಬರುತ್ತಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕುಮಾರಸ್ವಾಮಿ ಅವರು ಭರವಸೆ ನೀಡಿದಂತೆ ಸಾಲಮನ್ನಾ ಮಾಡದೆ ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್-ಜೆಡಿಎಸ್ ಅಸಮಾಧಾನದ ಲಾಭ ಬಿಜೆಪಿಗೆ?
ಅಧಿಕಾರಕ್ಕೆ ಬಂದ 48 ಗಂಟೆಗಳಲ್ಲಿ 40 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದ ಕುಮಾರಸ್ವಾಮಿ ಅಧಿಕಾರಕ್ಕೆ ಬಂದು ಒಂಬತ್ತು ತಿಂಗಳಾದರೂ ಸಹ ಈ ವರೆಗೆ ಕೇವಲ 4.5 ಸಾವಿರ ಕೋಟಿ ಸಾಲಮಾತ್ರವೇ ಮನ್ನಾ ಮಾಡಿದ್ದಾರೆ ಎಂದರು.
ಬಿಜೆಪಿ 104 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಸಹ ವಿರೋಧ ಪಕ್ಷದಲ್ಲಿ ಕೂತಿದೆ. ಕೇವಲ 37 ಕ್ಷೇತ್ರಗಳಲ್ಲಿ ಗೆದ್ದಿರುವ ಜೆಡಿಎಸ್ ಅಧಿಕಾರ ನಡೆಸುತ್ತಿದೆ, ಇದು ಇಡೀಯ ದೇಶದಲ್ಲಿ ಅಪರೂಪ ಎಂದು ಅವರು ವ್ಯಂಗ್ಯವಾಡಿದರು.
ಸರ್ಕಾರವಾದರೂ ಸಮನ್ವಯತೆಯಿಂದ ನಡೆಯುತ್ತಿದೆಯಾ ಎಂದರೆ ಅದೂ ಇಲ್ಲ, ಎರಡೂ ಪಕ್ಷಗಳಲ್ಲಿ ಹೊಂದಾಣಿಕೆಯೇ ಇಲ್ಲದಂತಾಗಿದೆ ಎಂದು ಮೈತ್ರಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ 8 ತಿಂಗಳ ಆಡಳಿತ ಬಿಚ್ಚಿಟ್ಟ ಬಿಜೆಪಿ ಟ್ವೀಟ್!
ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಫ್ರಾನ್ಸ್ನಂತಹಾ ದೇಶಗಳನ್ನು ಹಿಂದಿಕ್ಕಿ ನಾವು ಶಕ್ತ ಆರ್ಥಿಕ ರಾಷ್ಟ್ರವಾಗಿದ್ದೇವೆ ಎಂದು ಯಡಿಯೂರಪ್ಪ ಹೇಳಿದರು.
ಪುಲ್ವಾಮಾ ದಾಳಿಯ ನಂತರ ನಾವು ಉಗ್ರರನ್ನು ನಿರ್ವಹಿಸಿದ ರೀತಿಯನ್ನು ವಿಶ್ವವೇ ಕೊಂಡಾಡಿದ್ದು, ನಮ್ಮ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ದೇಶದ ಜೊತೆಗೆ ನಿಂತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.