ಎಂ ಆಡಳಿತ ಪರಿಣಾಮ, ಕೆಎಸ್ಆರ್ಟಿಸಿ ಆನ್ಲೈನ್ ಬುಕಿಂಗ್ ಸ್ಲೋ
ಬೆಂಗಳೂರು, ಡಿ. 30: ರಾಜ್ಯ ಸರ್ಕಾರ ಈಚೆಗಷ್ಟೇ ಜಾರಿಗೆ ತಂದಿರುವ ಎಂ ಆಡಳಿತ ಪದ್ಧತಿಯು ಜನರನ್ನು ತಲುಪಿದೆ. ಆದರೆ, ಸರ್ಕಾರಿ ಸ್ವಾಮಿತ್ವದ ಸಂಸ್ಥೆಗಳು ಅಗತ್ಯ ಪೂರ್ವತಯಾರಿ ಮಾಡಿಕೊಳ್ಳದ ಕಾರಣ ಸರ್ವರ್ ಸ್ಲೋ ಸಮಸ್ಯೆಯೂ ಎದುರಾಗುತ್ತಿದೆ.
ಎಂ ಆಡಳಿತದಡಿ ಬಿಡುಗಡೆ ಮಾಡಿದ ಆಪ್ ಬಳಸಿಕೊಂಡು ಮೊಬೈಲ್ ಮೂಲಕ ಬಸ್ ಟಿಕೆಟ್ ಕಾಯ್ದಿರಿಸಲು ಸಾವಿರಾರು ಜನ ಒಮ್ಮೆಲೇ ಯತ್ನಿಸಿದ ಕಾರಣ ಕೆಎಸ್ಆರ್ಟಿಸಿ ಆನ್ಲೈನ್ ಟಿಕೆಟ್ ಬುಕಿಂಗ್ ವೆಬ್ಸೈಟ್ ಸರ್ವರ್ ನಿಧಾನಗೊಂಡಿದೆ.
ಈ ಕುರಿತು ಕೆಎಸ್ಆರ್ಟಿಸಿ ಫ್ರಾಂಚೈಸಿ ಸಂಘದ ಅಧ್ಯಕ್ಷ ಖಾನ್ ಪಟೇಲ್ ಪ್ರತಿಕ್ರಿಯಿಸಿದ್ದು, "ಡಿ. 19ರಿಂದಲೂ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಸುಮಾರು ಐದು ದಿನಗಳಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಈ ಕುರಿತು ಕೆಎಸ್ಆರ್ಟಿಸಿ ಸಂಸ್ಥೆಯ ಗಮನಕ್ಕೆ ತಂದಿದ್ದೇವೆ" ಎಂದು ತಿಳಿಸಿದ್ದಾರೆ. [ಎಂ ಆಡಳಿತ ಎಂದರೇನು?]
"ಮೊದಲು ಒಂದು ಟಿಕೆಟ್ ಬುಕ್ ಮಾಡಲು ಒಂದು ನಿಮಿಷ ಸಾಕಾಗುತ್ತಿತ್ತು. ಆದರೆ, ಈಗ ಸುಮಾರು ಅರ್ಧಗಂಟೆ ಕಾಲಾವಕಾಶ ಬೇಕಾಗುತ್ತಿದೆ. ಈ ಕಾರಣದಿಂದ ಕಾಯಲು ತಯಾರಿಲ್ಲದ ಅನೇಕ ಗ್ರಾಹಕರು ವಾಪಸ್ ಹೋಗಿದ್ದಾರೆ. ಆದ್ದರಿಂದ ಕೆಎಸ್ಆರ್ಟಿಸಿ ಟಿಕೆಟ್ ಮಾರಾಟ ಶೇ. 50ರಷ್ಟು ಕಡಿಮೆಯಾಗಿದೆ" ಎಂದು ಇನ್ನೋರ್ವ ಪ್ರಾಂಚೈಸಿ ಹೇಳಿದ್ದಾರೆ.
ಕೆಎಸ್ಆರ್ಟಿಸಿ ಪ್ರತಿಕ್ರಿಯೆ : ಕೆಎಸ್ಆರ್ಟಿಸಿ ಮುಖ್ಯ ವ್ಯವಸ್ಥಾಪಕ (ಮಾರುಕಟ್ಟೆ) ಉಮೇಶ ಬಾಬು ಪ್ರತಿಕ್ರಿಯಿಸಿ, "ಸರ್ವರ್ ನಿಧಾನಗೊಳ್ಳಲು ತಾಂತ್ರಿಕ ಹಾಗೂ ತಾಂತ್ರಿಕವಲ್ಲದ ಎರಡೂ ಕಾರಣಗಳಿವೆ. ಸಂಸ್ಥೆಯು ಡಿ. 16ರಂದೇ ಸರ್ವರ್ ಅಪ್ಗ್ರೇಡ್ ಮಾಡಿದೆ. ಆದರೆ, ಎಂ ಆಡಳಿತದ ಪರಿಣಾಮ ಅನೇಕರು ಮೊಬೈಲ್ ಮೂಲಕ ಕೆಎಸ್ಆರ್ಟಿಸಿ ವೆಬ್ಸೈಟ್ಗೆ ಭೇಟಿ ನೀಡಿದ್ದಾರೆ. ಇದು ಸರ್ವರ್ ನಿಧಾನಗೊಳ್ಳಲು ಮುಖ್ಯ ಕಾರಣ" ಎಂದು ತಿಳಿಸಿದ್ದಾರೆ. [ಸೇವೆ ಕನ್ನಡದಲ್ಲಿದ್ರೆ ಎಂ ಆಡಳಿತ ಸ್ವಾಗತಾರ್ಹ]
ದಿನಕ್ಕೆ 50 ಸಾವಿರ ಭೇಟಿ ಸಾಧ್ಯ : "ಈ ಮೊದಲು ಕೆಎಸ್ಆರ್ಟಿಸಿ ಸರ್ವರ್ ಸಾಮರ್ಥ್ಯ ಒಂದು ದಿನಕ್ಕೆ ಮೂರು ಸಾವಿರ ಜನರ ಭೇಟಿಗೆ ಮಾತ್ರ ಅವಕಾಶ ನೀಡುತ್ತಿತ್ತು. ಈಗ ಸರ್ವರ್ ಅಪ್ಗ್ರೇಡ್ ಆಗಿದ್ದು, 50 ಸಾವಿರ ಜನ ಒಮ್ಮೆಲೇ ವೆಬ್ಸೈಟ್ಗೆ ಭೇಟಿ ನೀಡಬಹುದು. ಈಗ ಪ್ರತಿದಿನ ಸುಮಾರು 2 ಕೋಟಿ ರೂ. ಆದಾಯ ಬರುತ್ತಿದೆ. ಇನ್ನು ಮುಂದೆ ಸರ್ವರ್ ಸಮಸ್ಯೆ ಕಾಡುವುದಿಲ್ಲ" ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.