ವಿಜಯನಗರ ಜಿಲ್ಲೆಗೆ ಸಿಹಿಸುದ್ದಿ ಕೊಟ್ಟ ರೈಲ್ವೆ ಇಲಾಖೆ
ಬೆಂಗಳೂರು, ಸೆಪ್ಟೆಂಬರ್ 15; ಕರ್ನಾಟಕದ ನೂತನ ಜಿಲ್ಲೆ ವಿಜಯನಗರಕ್ಕೆ ನೈಋತ್ಯ ರೈಲ್ವೆ ಸಿಹಿಸುದ್ದಿಕೊಟ್ಟಿದೆ. ಕೆಎಸ್ಆರ್ ಬೆಂಗಳೂರು-ಹೊಸಪೇಟೆ ವಿಶೇಷ ರೈಲಿನ ಸಂಚಾರ ಮುಂದುವರೆಸಲು ಒಪ್ಪಿಗೆ ನೀಡಲಾಗಿದೆ.
ಕೆಎಸ್ಆರ್ ಬೆಂಗಳೂರು- ಹೊಸಪೇಟೆ-ಕೆಎಸ್ಆರ್ ಬೆಂಗಳೂರು ರೈಲು ಮತ್ತು ಹೊಸಪೇಟೆ-ಹರಿಹರ-ಹೊಸಪೇಟೆ ಪ್ರಯಾಣಿಕರ ವಿಶೇಷ ರೈಲನ್ನು ರದ್ದುಗೊಳಿಸಲಾಗುತ್ತದೆ ಎಂದು ಸುದ್ದಿಗಳು ಹಬ್ಬಿತ್ತು.
ಈಗ ನೈಋತ್ಯ ರೈಲು ವಲಯದ ಅಧಿಕಾರಿಗಳು ವಿಶೇಷ ರೈಲುಗಳನ್ನು ಮುಂದುವರೆಸಲು ಆದೇಶ ಹೊರಡಿಸಿದ್ದಾರೆ. ಮುಂದಿನ ಆದೇಶದ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ರೈಲ ನಂಬರ್ 06243/ 06244 ಕೆಎಸ್ಆರ್ ಬೆಂಗಳೂರು-ಹೊಸಪೇಟೆ-ಕೆಎಸ್ಆರ್ ಬೆಂಗಳೂರು ಮತ್ತು ರೈಲು ನಂಬರ್ 06245/ 06246 ಹೊಸಪೇಟೆ-ಹರಿಹರ-ಹೊಸಪೇಟೆ ರೈಲುಗಳು ಎಂದಿನಂತೆ ಸಂಚಾರ ನಡೆಸಲಿವೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ರೈಲು ರದ್ದು, ಹೋರಾಟದ ಎಚ್ಚರಿಕೆ; ಹೊಸಪೇಟೆ-ಕೊಟ್ಟೂರು-ದಾವಣಗೆರೆ ಮಾರ್ಗದ ರೈಲನ್ನು ಸೆಪ್ಟೆಂಬರ್ 15ರಿಂದ ಸ್ಥಗಿತಗೊಳಿಸಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ರೈಲನ್ನು ಸ್ಥಗಿತಗೊಳಿಸಲು ಇಲಾಖೆ ಮುಂದಾಗಿದ್ದು ರೈಲು ಪ್ರಯಾಣಿಕರು ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ.
ಸೆಪ್ಟೆಂಬರ್ 15ರಿಂದ ಈ ಮಾರ್ಗದಲ್ಲಿ ಪ್ರಯಾಣಿಕರ ರೈಲು ಸಂಚಾರವನ್ನು ರದ್ದುಗೊಳಿಸಿ ಮಾರ್ಗದಲ್ಲಿ ಕೇವಲ ಗೂಡ್ಸ್ ರೈಲು ಸಂಚಾರ ನಡೆಸಲು ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬಳ್ಳಾರಿ ಬಿಜೆಪಿ ಸಂಸದ ವೈ. ದೇವೇಂದ್ರಪ್ಪ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ, "ಈ ಮಾರ್ಗದ ರೈಲನ್ನು ಸ್ಥಗಿತಗೊಳಿಸದಂತೆ ರೈಲ್ವೆ ಸಚಿವರ ಬಳಿ ವಿಷಯ ಪ್ರಸ್ತಾಪಿಸಿ ಒತ್ತಾಯಿಸುವೆ. ಯಾವುದೇ ಕಾರಣಕ್ಕೂ ರೈಲು ಸಂಚಾರ ಬಂದ್ ಆಗದಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತೇನೆ" ಎಂದು ಹೇಳಿದ್ದಾರೆ.
ಹೊಸಪೇಟೆ-ಕೊಟ್ಟೂರು-ದಾವಣಗೆರೆ ಮಾರ್ಗದಲ್ಲಿ ಸಂಜೆ ವೇಳೆಗೆ ರೈಲು ಓಡಿಸಲಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರ ಕೊರತೆ ಉಂಟಾಗುತ್ತಿದೆ. ರೈಲ್ವೆ ಇಲಾಖೆ ಇದನ್ನೇ ಮುಂದಿಟ್ಟುಕೊಂಡು ರೈಲನ್ನು ಸ್ಥಗಿತಗೊಳಿಸಲು ಮುಂದಾಗಿದೆ ಎಂದು ಪ್ರಯಾಣಿಕರು ಟೀಕಿಸಿದ್ದಾರೆ.
1995ರಲ್ಲಿ ಕೊಟ್ಟೂರಿನಿಂದ ಹೊಸಪೇಟೆಗೆ ಗೇಜ್ ಪರಿವರ್ತನೆ ಕಾಮಗಾರಿ ಹಿನ್ನಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ಪುನಃ ಶಾಶ್ವತವಾಗಿ ರೈಲು ಮಾರ್ಗವನ್ನು ಪ್ರಯಾಣಿಕ ರೈಲುಗಳುಗಳಿಗೆ ಮುಚ್ಚಲು ತಂತ್ರ ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ.
ಹೊಸಪೇಟೆ-ಕೊಟ್ಟೂರು-ದಾವಣಗೆರೆ ಮಾರ್ಗದಲ್ಲಿ ರೈಲು ಓಡಿಸಬೇಕು ಎಂದು ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ ಜನರು ಒಟ್ಟಾಗಿ ಹೋರಾಟ ಮಾಡಲು ಮುಂದಾಗಿದ್ದಾರೆ.
ರೈಲು ಸಂಚಾರ ಸ್ಥಗಿತಗೊಳಿಸುವ ಆದೇಶವನ್ನು ಇಲಾಖೆ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ರೈಲು ಪ್ರಯಾಣಿಕರು ಎಚ್ಚರಿಕೆ ಕೊಟ್ಟಿದ್ದಾರೆ.
ರೈಲು ಸೇವೆ ವಿಸ್ತರಣೆ; ಹಬ್ಬದ ಹಿನ್ನಲೆಯಲ್ಲಿ ಹಲವು ರೈಲುಗಳ ಸೇವೆಯನ್ನು ನೈಋತ್ಯ ರೈಲ್ವೆ ವಿಸ್ತರಣೆ ಮಾಡಿದೆ. ಜನರು ಹಬ್ಬದ ಸಮಯದಲ್ಲಿ ರೈಲು ಸಂಚಾರದ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಸೆಪ್ಟೆಂಬರ್ 16ರ ತನಕ ವಾಸ್ಕೋ ಡಾ ಗಾಮ-ಚೆನ್ನೈ ಸೆಂಟ್ರಲ್ ರೈಲು ವಿಸ್ತರಣೆ ಮಾಡಲಾಗಿದೆ. ಸೆ. 17ರ ತನಕ ಚೆನ್ನೈ ಸೆಂಟ್ರಲ್-ವಾಸ್ಕೋ ಡಾ ಗಾಮ ರೈಲನ್ನು ವಿಸ್ತರಿಸಲಾಗಿದೆ.
ಡಿಸೆಂಬರ್ 25ರ ತನಕ ಹತಿಯಾ-ಬೆಂಗಳೂರು ಕಂಟ್ಮೋನೆಂಟ್ ವಾರದ (08637), ಡಿಸೆಂಬರ್ 28ರ ತನಕ ಹತಿಯಾ-ಯಶವಂತಪುರ ವಾರದದಲ್ಲಿ ಎರಡು ಬಾರಿ ಸಂಚಾರ ನಡೆಸುವ (02835) ರೈಲು ವಿಸ್ತರಣೆ ಮಾಡಲಾಗಿದೆ.
ಡಿಸೆಂಬರ್ 31ರ ತನಕ ಹೌರಾ-ಮೈಸೂರು ವಾರದ (08117), ಹೌರಾ-ಯಶವಂತಪುರ ಪ್ರತಿದಿನ (02873), ಜನವರಿ 2ರ ತನಕ ಮೈಸೂರು-ಹೌರಾ ವಾರದ (08118), ಯಶವಂತಪುರ-ಹೌರಾ ಪ್ರತಿದಿನ (02874) ರೈಲನ್ನು ವಿಸ್ತರಣೆ ಮಾಡಲಾಗಿದೆ.












Click it and Unblock the Notifications