ಬೆಳ್ಳಂದೂರು ಕೆರೆ ಸುತ್ತಲಿನ 488 ಕೈಗಾರಿಕೆಗಳನ್ನು ಸ್ಥಗಿತಗೊಳಿಸಿ: ಕೆಎಸ್ ಪಿಸಿಬಿ
ಬೆಂಗಳೂರು, ಮೇ 04 : ಬೆಳ್ಳಂದೂರು ಜಲಾನಯನ ಪ್ರದೇಶದ ಎಲ್ಲಾ 488 ಕೈಗಾರಿಕೆಗಳನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ (ಕೆಎಸ್ ಪಿಸಿಬಿ) ಮಂಡಳಿ ಆದೇಶ ಹೊರಡಿಸಿದೆ.
ಇದೇ ವಿಚಾರವಾಗಿ ಇತ್ತೀಚೆಗೆ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಕೈಗಾರಿಕೆಗಳನ್ನು ತಕ್ಷಣವೇ ಮುಚ್ಚಬೇಕೆಂದು ಮಧ್ಯಂತರ ಆದೇಶ ನೀಡಿತ್ತು.[ಬೆಳ್ಳಂದೂರು ಕೆರೆ ಸುತ್ತಲಿನ ಕೈಗಾರಿಕೆ ಮುಚ್ಚಿ: ಎನ್ ಜಿಟಿ]
ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ (ಎಚ್ಎಎಲ್) ಏಳು ಘಟಕಗಳು, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ), ಕರ್ನಾಟಕ ಸಾವಯವ ಗೊಬ್ಬರ ಅಭಿವೃದ್ಧಿ ನಿಗಮದ (ಕೆಸಿಡಿಸಿ) ಘಟಕ ಸೇರಿದಂತೆ ಇತರೆ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳ ಬಾಗಿಲಿಗೆ ಬೀಗ ಬೀಳಲಿದೆ.
ಇನ್ಫೊಸಿಸ್, ವಿಪ್ರೊ, ಆದಿತ್ಯ ಬಿರ್ಲಾ ನೊವಾ ಲಿಮಿಟೆಡ್, ಹನಿವೆಲ್ ಟೆಕ್ನಾಲಜಿ ಸೊಲ್ಯೂಷನ್ಸ್, ಬಾಷ್, ಆಕ್ಸೆಂಚರ್, ಒರಾಕಲ್ ಸಂಸ್ಥೆಗಳು ಈ ಪಟ್ಟಿಯಲ್ಲಿರುವ ಪ್ರಮುಖ ಖಾಸಗಿ ಕಂಪೆನಿಗಳು ಇವೆ.
'ರಾಷ್ಟ್ರೀಯ ಹಸಿರು ಮಂಡಳಿ (ಎನ್ಜಿಟಿ) ಆದೇಶ ಸೋಮವಾರ ನಮ್ಮ ಕೈಸೇರಿದೆ. ಕೆರೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿರುವ ರಾಸಾಯನಿಕ ಪದಾರ್ಥಗಳನ್ನು ಕೈಗಾರಿಕೆಗಳು ಹೊರ ಹಾಕುತ್ತಿರುವ ಕುರಿತು ಜಂಟಿ ಪರಿಶೀಲನಾ ಸಮಿತಿ ಪರೀಕ್ಷಿಸುವವರೆಗೂ ಜಲಾನಯನ ಪ್ರದೇಶದ ಯಾವುದೇ ಕೈಗಾರಿಕೆ ಕಾರ್ಯನಿರ್ವಹಿಸಲು ಅವಕಾಶ ನೀಡಬಾರದು ಎಂದು ಅದರಲ್ಲಿ ಹೇಳಿದ್ದಾರೆ.
ಹಾಗಾಗಿ ಕೆರೆ ಜಲಾನಯನ ಪ್ರದೇಶದಲ್ಲಿರುವ ಕೈಗಾರಿಕೆಗಳನ್ನು ತಕ್ಷಣದಿಂದ ಮುಚ್ಚುವಂತೆ ನೋಟಿಸ್ ನೀಡುತ್ತಿದ್ದೇವೆ' ಎಂದು ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದರು.