ಸಿದ್ದರಾಮಯ್ಯ ಅವರದ್ದು ದ್ವೇಷದ ರಾಜಕಾರಣ: ಕೆ ಎಸ್ ಈಶ್ವರಪ್ಪ ಕಿಡಿ
ಬೆಂಗಳೂರು, ಫೆಬ್ರವರಿ 14: "ಸರ್ಕಾರದ ಅಧೀನದಲ್ಲಿರುವ ಎಸ್ ಇಟಿಯನ್ನು ಬಿಜೆಪಿ ವಿರುದ್ಧ ಛೂಬಿಡುವ ಮೂಲಕ ಸಿದ್ದರಾಮಯ್ಯ ಮತ್ತು ಈ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ" ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಕಿಡಿಕಾರಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಪ್ರೀತಂ ಗೌಡ ಅವರ ಮನೆ ಮೇಲೆ ದಾಳಿ ನಡೆಸಿದ್ದನ್ನು ತೀವ್ರವಾಗಿ ಖಂಡಿಸಿದರು. 'ಪ್ರೀತಂ ಗೌಡ ಅವರನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ರಾಜ್ಯದಲ್ಲಿ ಕಾನೂನನ್ನು ರಕ್ಷಣೆ ಮಾಡಬೇಕಾದವರೇ ಗೂಂಡಾಗಿರಿಗೆ ಪ್ರಚೋದನೆ ನೀಡುತ್ತಿರುವುದನ್ನು ನಾನು ಖಂಡಿಸುತ್ತೇನೆ' ಎಂದರು.
ಬಿ ಎಸ್ ವೈ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದರ ತನಿಖೆಯನ್ನು ಎಸ್ ಐಟಿ(ವಿಶೇಷ ತನಿಖಾ ತಂಡ) ಗೆ ನೀಡಲು ಸಿದ್ದರಾಮಯ್ಯ ಅವರೇ ಕಾರಣ. ಸಿಎಂ ಕುಮಾರಸ್ವಾಮಿ ಅವರನ್ನು ಸಿಕ್ಕಿಸಲು ಸಿದ್ದರಾಮಯ್ಯ ಕುತಂತ್ರ ಮಾಡಿದ್ದಾರೆ. ಈ ಪ್ರಕರಣದಿಂದ ಯಡಿಯೂರಪ್ಪ ಆರಾಮವಾಗಿ ಹೊರಗೆ ಬರ್ತಾರೆ. ಯಡಿಯೂರಪ್ಪ ಅವರನ್ನು ಏನೂ ಮಾಡಲು ಆಗಲ್ಲ. ಚುನಾವಣೆಯಲ್ಲಿ ತಮ್ಮನ್ನು ಹೊಟ್ಟೆಯುರಿಯಿಂದ ಸೋಲಿಸಿದ್ರು ಅಂತ ಹೇಳ್ಕೊಂಡು ಸಿದ್ದರಾಮಯ್ಯ ಓಡಾಡ್ತಿದಾರೆ. ಆ ದ್ವೇಷವನ್ನು ಸಿದ್ದರಾಮಯ್ಯ ಇಲ್ಲೂ ಮುಂದುವರೆಸಿಕೊಂಡು ಹೋಗ್ತಿದಾರೆ' ಎಂದು ಅವರು ದೂರಿದರು.

'ಕಾಂಗ್ರೆಸ್ ನ ಶಾಸಕರ ಗಲಾಟೆ ಪ್ರಕರಣದಲ್ಲಿ ಆರೋಪಿ ಜೆ ಎನ್ ಗಣೇಶ್ ನನ್ನ ಇನ್ನೂ ಬಂಧಿಸದ ಸರ್ಕಾರ, ಇದೀಗ ಪ್ರೀತಂ ಗೌಡ ಅವರ ಬಗ್ಗೆ ಮಾತನಾಡುತ್ತಿದೆ. ಸಿದ್ದರಾಮಯ್ಯ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಗುರವಾಗಿ ಮಾತನಾಡಿಲ್ಲವೇ?ಅದನ್ನು ನೀವು ಸಮರ್ಥಿಸಿಕೊಳ್ಳುತ್ತೀರಾ?' ಎಂದು ಪ್ರಶ್ನಿಸಿದರು.












Click it and Unblock the Notifications