ಡಿ.ಕೆ ಶಿವಕುಮಾರ್ ಪದಗ್ರಹಣ ರದ್ದು, ಇದರ ಹಿಂದೆ ರಾಜಕೀಯ ಹುನ್ನಾರ?
ಬೆಂಗಳೂರು, ಜೂನ್ 1: ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಭಾನುವಾರ ಪದಗ್ರಹಣ ಸ್ವೀಕರಿಸಬೇಕಿತ್ತು. ಆದ್ರೀಗ, ಸರ್ಕಾರದ ಅನುಮತಿ ಇಲ್ಲ ಎಂಬ ಕಾರಣಕ್ಕೆ 'ಪ್ರತಿಜ್ಞಾ' ಕಾರ್ಯಕ್ರಮ ಮತ್ತೆ ಮುಂದಕ್ಕೆ ಹೋಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೂತನ ಮಾರ್ಗಸೂಚಿಯಲ್ಲಿ ಜೂನ್ 8 ನೇ ತಾರೀಖಿನವರೆಗೂ ಯಾವುದೇ ರಾಜಕೀಯ ಸಭೆ ನಡೆಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಸರ್ಕಾರ ಅನುಮತಿ ನೀಡಿದ ನಂತರ ಪದಗ್ರಹಣ 'ಪ್ರತಿಜ್ಞಾ' ಕಾರ್ಯಕ್ರಮ ಜರುಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮುಂದೆ ಓದಿ...
ಪ್ರಧಾನಿ ಮೋದಿ ಸರ್ಕಾರಕ್ಕೆ ಶಾಕ್ ಕೊಡುವಂತಿದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ!
ನಾನು ನನ್ನ ಕೆಲಸ ಆರಂಭಿಸಿದ್ದೇನೆ
ನನಗೆ ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ನೀಡಿದ ಘಳಿಗೆಯಿಂದಲೇ ನಾನು ನನ್ನ ಕೆಲಸ ಆರಂಭಿಸಿದ್ದೇನೆ. ನಂತರ ಕೊರೊನಾ ಸೋಂಕು ಎದುರಾಗಿದ್ದು, ಎಲ್ಲ ಹಿರಿಯ ನಾಯಕರ ಸಹಕಾರದೊಂದಿಗೆ ಪಕ್ಷದ ಕಾರ್ಯಕರ್ತರಿಗೆ ಅಗತ್ಯ ಮಾರ್ಗದರ್ಶನ ನೀಡಿ ನನ್ನ ಕೆಲಸ ಮುಂದುವರೆಸಿದ್ದೇನೆ. ಕೊವಿಡ್ ಸಮಯದಲ್ಲಿ ಯಾವುದೇ ರಾಜಕೀಯ ಸಮಾರಂಭ ನಡೆಸಬಾರದು ಎಂದು ಸರ್ಕಾರ ಆದೇಶ ನೀಡಿದೆ. ಕಳೆದ ಎರಡೂವರೆ ತಿಂಗಳಿಂದ ನಮ್ಮ ಹೋರಾಟ ನಡೆಯುತ್ತಿದ್ದು, ಮಾನವ ಸೇವೆಗಾಗಿ, ಮಾನವೀಯತೆಯಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಸರ್ಕಾರ ವಿಫಲವಾದಾಗ ಪ್ರತಿಪಕ್ಷವಾಗಿ ಎಲ್ಲ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇವೆ.
ಸಾಂಕೇತಿಕವಾಗಿ ಕಾರ್ಯಕ್ರಮ ಒಂದು ಪದ್ಧತಿ
ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಸಾಂಕೇತಿಕವಾಗಿ ಕಾರ್ಯಕ್ರಮ ಮಾಡುವುದು ಒಂದು ಪದ್ಧತಿ. ಧ್ವಜ ಹಸ್ತಾಂತರದ ಮೂಲಕ ಇದು ನಡೆಯುತ್ತದೆ. ನಮ್ಮ ಎಲ್ಲ ನಾಯಕರ ಜತೆ ಸೇರಿ ಸರಳ ಹಾಗೂ ವಿನೂತನ ಕಾರ್ಯಕ್ರಮ ಮಾಡಲು ತೀರ್ಮಾನಿಸಿದ್ದೇವೆ. ಬೆಂಗಳೂರಿನಲ್ಲಿ ಸಾಂಕೇತಿಕವಾಗಿ 150 ಮಂದಿ ಸೇರಿ ಕಾರ್ಯಕ್ರಮ ಮಾಡುತ್ತೇವೆ. ಉಳಿದಂತೆ ಎಲ್ಲ ಪಂಚಾಯ್ತಿಗಳಲ್ಲಿ, ವಾರ್ಡ್ ಗಳಲ್ಲಿ ಸೇರಿ ಸುಮಾರು 7800 ಕಡೆಗಳಲ್ಲಿ ಏಕಕಾಲದಲ್ಲಿ "ವಂದೇ ಮಾತರಂ" ದೇಶಭಕ್ತಿ ಗೀತೆಯಿಂದ ಪ್ರಾರಂಭ ಮಾಡಿ ಸಂವಿಧಾನದ ಪೀಠಿಕೆ ವಾಚನದೊಂದಿಗೆ ಪ್ರತಿಜ್ಞೆ ಸ್ವೀಕಾರ ಜರುಗಲಿದೆ.
ಇದರ ಹಿಂದೆ ರಾಜಕೀಯ ಹುನ್ನಾರವಿದೆ
ಸಾಮಾಜಿಕ ಅಂತರ ಕಾಯ್ದುಕೊಂಡು ದೇಶದ ಹಾಗೂ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಿ ಟಿವಿಯಲ್ಲಿ ನೇರ ಪ್ರಸಾರ ಮಾಡಿಸಲಾಗುವುದು. ಎಲ್ಲ ಕಡೆಯೂ ಕಾರ್ಯಕ್ರಮಗಳನ್ನು ಜೂಮ್ ಮೂಲಕ ನೇರ ಪ್ರಸಾರ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯದ ಮೂಲೆ ಮೂಲೆಯಿಂದ ಲಕ್ಷಂತರ ಜನರನ್ನು ಸೇರಿಸಿ, ಟ್ರಾಫಿಕ್ ಮತ್ತಿತರ ಸಮಸ್ಯೆ ಸೃಷ್ಟಿಸುವುದನ್ನು ತಡೆಯಲು ಹಾಗೂ ಸ್ಥಳೀಯ ಮಟ್ಟದಲ್ಲಿ ಪಕ್ಷ ಸಂಘಟನೆ ಉದ್ದೇಶದಿಂದ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ತಿಂಗಳು 7ರಂದು ಕಾರ್ಯಕ್ರಮ ಮಾಡಲು ಮುಖ್ಯಮಂತ್ರಿಗಳು, ಪೊಲೀಸ್ ಆಯುಕ್ತರಿಗೆ ಅನುಮತಿ ಕೇಳಿ, ಮನವಿ ಮಾಡಿದ್ದೆವು. ಆದರೆ ಈಗ ಹೊಸ ಮಾರ್ಗಸೂಚಿ ಹೊರಬಿದ್ದಿದೆ. ಇದರ ಹಿಂದೆ ರಾಜಕೀಯ ಹುನ್ನಾರವಿದೆ.
ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ದಿನವೇ ಕೂಡಿ ಬರುತ್ತಿಲ್ಲ: 2ನೇ ಬಾರಿಯೂ ವಿಘ್ನ
ಕಾರ್ಯಕರ್ತರಲ್ಲಿ ಒಂದು ಮನವಿ
ಈ ಕಾರ್ಯಕ್ರಮಕ್ಕೆ ನಾವು "ಪ್ರತಿಜ್ಞಾ" ಎಂದು ಹೆಸರಿಟ್ಟಿದ್ದೇವೆ. ಸರ್ಕಾರ ಅನುಮತಿ ನೀಡಿದ ಕೆಲವೇ ಗಂಟೆಗಳಲ್ಲಿ ನಾನು ನಿಮಗೆ ಹೊಸ ದಿನಾಂಕ ತಿಳಿಸುತ್ತೇನೆ. ಹೀಗಾಗಿ ನಾನು ದಿನಾಂಕದ ವಿಚಾರದಲ್ಲಿ ಈವರೆಗೂ ಎಲ್ಲಿಯೂ ಘೋಷಣೆ ಮಾಡಿರಲಿಲ್ಲ. ಈ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರಲ್ಲಿ ಒಂದು ಮನವಿ ಮಾಡಿಕೊಳ್ಳುತ್ತೇನೆ. ನೀವು ಈಗಾಗಲೇ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದೀರಿ. ಕಾರ್ಯಕ್ರಮ ದಿನಾಂಕ ಬದಲಾಗಬಹುದು ಆದರೆ ಕಾರ್ಯಕ್ರಮ ರದ್ದಾಗುವುದಿಲ್ಲ. ನೀವು ನಿಮ್ಮ ಸಿದ್ಧತೆ ಮುಂದುವರಿಸಿಕೊಳ್ಳಿ. ಸರ್ಕಾರದ ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದರೆ ಶಾಸನ ರೂಪಿಸುವ ನಾವೇ ಕಾನೂನು ಮುರಿದಂತಾಗುತ್ತದೆ. ಜತೆಗೆ ನಿಮಗೆ ಸ್ಥಳೀಯವಾಗಿ ಅಧಿಕಾರಿಗಳು ತೊಂದರೆ ನೀಡಲಿದ್ದಾರೆ. ಹೀಗಾಗಿ ಸರ್ಕಾರ ಅನುಮತಿ ನೀಡಿದ ನಂತರವೇ ಈ ಕಾರ್ಯಕ್ರಮ ನಡೆಸಲಾಗುವುದು. ಹೀಗಾಗಿ 7ರಂದು ಈ ಕಾರ್ಯಕ್ರಮ ಇರುವುದಿಲ್ಲ. ಸರ್ಕಾರದ ಅನುಮತಿಗಾಗಿ ಕಾಯೋಣ.