ಚುನಾವಣೆಗೆ ಗೈರಾದವರಿಗೆ ಕಾಂಗ್ರೆಸ್ ನೋಟಿಸ್, ಕಣ್ಣೀರಿಟ್ಟ ಕಾರ್ಪೊರೇಟರ್
ಬೆಂಗಳೂರು, ಸೆಪ್ಟೆಂಬರ್ 28 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಗೈರಾದ ನಾಯಕರಿಗೆ ಪಕ್ಷ ನೋಟಿಸ್ ನೀಡಿದೆ. ಇಬ್ಬರು ಕಾರ್ಪೊರೇಟರ್ ಮತ್ತು ಶಾಸಕ ರೋಷನ್ ಬೇಗ್ ಚುನಾವಣೆಗೆ ಗೈರಾಗಿದ್ದರು.
ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಚ್ಎಂಟಿ ವಾರ್ಡ್ ಕಾರ್ಪೊರೇಟರ್ ಆಶಾ ಸುರೇಶ್, ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ ನಂಬರ್ 41ರ ಲಲಿತಾ ತಿಮ್ಮನಂಜಯ್ಯ, ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಅವರಿಗೆ ನೋಟಿಸ್ ನೀಡಿದ್ದಾರೆ.
ಚುನಾವಣೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ವಿಪ್ ಜಾರಿ ಮಾಡಿದ್ದರೂ, ಗೈರಾಗಿದ್ದು ಏಕೆ? ಎಂದು ಒಂದು ವಾರದೊಳಗೆ ವಿವರಣೆ ನೀಡಿ, ಎಂದು ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ. ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಮೇಯರ್ ಆಗಿ ಆಯ್ಕೆಯಾದರು.
ಬಿಬಿಎಂಪಿ ಮೇಯರ್ ಚುನಾವಣೆಗೆ ಕಾಂಗ್ರೆಸ್ನ ಆಶಾ ಸುರೇಶ್, ಲಲಿತಾ ತಿಮ್ಮನಂಜಯ್ಯ, ಶಾಸಕ ರೋಷನ್ ಬೇಗ್, ಜೆಡಿಎಸ್ ಸದಸ್ಯ ನಾಜಿಮ್ ಖಾನಮ್, ಬಿಜೆಪಿಯ ಅನಂತ್ ಕುಮಾರ್, ನಿರ್ಮಲಾ ಸೀತಾರಾಮನ್ ಗೈರು ಹಾಜರಾಗಿದ್ದರು.

ಆಶಾ ಸುರೇಶ್ ಕಣ್ಣೀರು
ಎಚ್ಎಂಟಿ ವಾರ್ಡ್ ಕಾರ್ಪೊರೇಟರ್ ಆಶಾ ಸುರೇಶ್ ಅವರು ನೋಟಿಸ್ ನೀಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಎದುರು ಕಣ್ಣೀರು ಹಾಕಿದರು. ಮಗಳ ಹೆರಿಗೆ ಇದ್ದಿದ್ದರಿಂದ ಬರಲು ಸಾಧ್ಯವಾಗಲಿಲ್ಲ ಎಂದು ಆಶಾ ಸುರೇಶ್ ವಿವರಣೆ ನೀಡಿದರು. ಆದರೆ, ದಿನೇಶ್ ಗುಂಡೂರಾವ್ ಅವರು ವಿವರಣೆ ನೀಡಬೇಡಿ ನೋಟಿಸ್ಗೆ ಉತ್ತರಿಸಿ ಎಂದು ಸೂಚಿಸಿದರು.

ಲಲಿತಾ ತಿಮ್ಮನಂಜಯ್ಯ
ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ ನಂಬರ್ 41ರ ಲಲಿತಾ ತಿಮ್ಮನಂಜಯ್ಯ ಅವರು ಮೇಯರ್ ಆಯ್ಕೆಯ ಚುನಾವಣೆಗೆ ಗೈರು ಹಾಜರಾಗಲಿಲ್ಲ. ಆದರೆ, ಬರುವುದು ತಡವಾಯಿತು. ಮತದಾರರ ಸಹಿ ಸಂಗ್ರಹ ಪ್ರಕ್ರಿಯೆ ಮುಗಿದ ಬಳಿಕ ಅವರು ಸಭಾಂಗಣಕ್ಕೆ ಬಂದರು. ಆದ್ದರಿಂದ, ಅವರ ಸಹಿ ಸಂಗ್ರಹವಾಗಲಿಲ್ಲ. ಸಹಿ ಇಲ್ಲದ ಸದಸ್ಯರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಯಿತು. ಕೆಪಿಸಿಸಿ ಲಲಿತಾ ತಿಮ್ಮನಂಜಯ್ಯ ಅವರಿಗೂ ನೋಟಿಸ್ ನೀಡಿದೆ.

ರೋಷನ್ ಬೇಗ್ ಗೈರು
ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಅವರು ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಗೈರು ಹಾಜರಾಗಿದ್ದಾರೆ. ರೋಷನ್ ಬೇಗ್ ಅವರು ಮೆಕ್ಕಾ ಪ್ರವಾಸಕ್ಕೆ ಹೋಗಿದ್ದಾರೆ. ಆದ್ದರಿದ, ಚುನಾವಣೆಗೆ ಬರಲು ಸಾಧ್ಯವಾಗಿಲ್ಲ. ಕೆಪಿಸಿಸಿ ಅವರಿಗೂ ನೋಟಿಸ್ ಜಾರಿ ಮಾಡಿದೆ.

ಮೇಯರ್, ಉಪ ಮೇಯರ್ಗೆ ಅಭಿನಂದನೆ
ಬಿಬಿಎಂಪಿಯ ನೂತನ ಮೇಯರ್ ಆಗಿ ಆಯ್ಕೆಯಾದ ಜಯನಗರ ವಾರ್ಡ್ ಕಾರ್ಪೊರೇಟರ್ ಗಂಗಾಂಬಿಕೆ, ಉಪಮೇಯರ್ ಕಾವೇರಿಪುರ ವಾರ್ಡ್ನ ರಮೀಳಾ ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.











Click it and Unblock the Notifications