ಭ್ರಷ್ಟಾಚಾರ ಅರಿತಿದ್ದೆ ಡಾ. ನಾಗೇಂದ್ರ ಜೀವಕ್ಕೆ ಮುಳುವಾಯಿತಾ?
ಬೆಂಗಳೂರು, ಆ. 21: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಾ ಆರೋಗ್ಯಾಧಿಕಾರಿ ಆತ್ಮಹತ್ಯೆ ಪ್ರಕರಣ ಕುತೂಹಲಕಾರಿ ತಿರುವು ಪಡೆದುಕೊಂಡಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಗಂಭೀರ ಆರೋಪ ಮಾಡಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೆಪಿಸಿಸಿ ಆಗ್ರಹಿಸಿದೆ. ಅದಕ್ಕೆ ಕಾರಣವನ್ನೂ ಕೊಟ್ಟಿದೆ.
Recommended Video
ಕೊರೊನಾ ವೈರಸ್ ಸಂದರ್ಭದ ಭ್ರಷ್ಟಾಚಾರದ ಅರಿವು ಅವರಿಗೆ ಇದ್ದುದರಿಂದಲೇ ಇಡೀ ಪ್ರಕರಣ ನಡೆದಿರುವ ಸಾಧ್ಯತೆಯಿದೆ ಎಂದು ರಾಜ್ಯ ಕಾಂಗ್ರೆಸ್ ಸಂಶಯ ವ್ಯಕ್ತಡಿಸಿದೆ. ಆರೋಗ್ಯಾಧಿಕಾರಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದರ ಹಿಂದೆ ಭ್ರಷ್ಟಾಚಾರದ ಬಗ್ಗೆ ಅವರಿಗೆ ಗೊತ್ತಿರುವುದೇ ಕಾರಣವಾಗಿರಬಬಹುದು ಎಂದು ಕೆಪಿಸಿಸಿ ಘಟಕ ಟ್ವೀಟ್ ಮಾಡಿದೆ. ಇಡೀ ಪ್ರಕರಣದ ಹಿಂದೆ ರಾಜ್ಯ ಬಿಜೆಪಿ ಸರ್ಕಾರದ ಕೈವಾಡವಿರುವ ಸಾಧ್ಯೆತೆಯಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದೆ.
ಡಾ. ನಾಗೇಂದ್ರ ಆತ್ಮಹತ್ಯೆಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ!
ಕೊರೊನಾ ವೈರಸ್ ನಿರ್ವಹಣೆಯಲ್ಲಿ ಆಗಿರುವ ವ್ಯವಸ್ಥಿತ ಭ್ರಷ್ಟಾಚಾರ ಆತ್ಮಹತ್ಯೆ ಮಾಡಿಕೊಂಡಿರುವ ಆರೋಗ್ಯಾಧಿಕಾರಿಗೆ ತಿಳಿದಿರುವ ಸಾಧ್ಯತೆಗಳಿವೆ. ಕೊರೊನಾ ವಾರಿಯರ್ ಆತ್ಮಹತ್ಯೆ ಪ್ರಕರಣ ರಾಜ್ಯ ಸರ್ಕಾರ ಕ್ರೌರ್ಯದ ಮುಖವನ್ನು ಅನಾವರಣಗೊಳಿಸಿದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ವಹಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಆ. 20 ರಂದು ಮೇಲಾಧಿಕಾರಿಗಳ ಕಿರುಕುಳದಿಂದ ನಂಜನಗೂಡು ತಾಲೂಕಾ ಆರೋಗ್ಯಾಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿಗೆ ಮೈಸೂರು ಜಿಲ್ಲಾ ಪಂಚಾಯಿತಿ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಕಾರಣ ಎಂದು ಡಾ. ನಾಗೇಂದ್ರ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳೆದ ಆರು ತಿಂಗಳುಗಳಿಂದ ಟಿಎಚ್ಓ ಡಾ. ನಾಗೇಂದ್ರ ಅವರು ಒಂದು ದಿನವೂ ರಜೆಯನ್ನು ತೆಗೆದುಕೊಂಡಿರಲಿಲ್ಲ. ಆದರೂ ಜಿಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಡಾ. ನಾಗೇಂದ್ರ ಅವರ ಮೇಲೆ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಆಗಾಗ ಕಿರುಕುಳವನ್ನು ಕೊಡುತ್ತಿದ್ದರು. ಹೀಗಾಗಿ ಅತ್ಯಂತ ಸೂಕ್ಷ್ಮ ಮನಸ್ಸಿನ ಡಾ. ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದೆ.