ಕೊಡಗಿಗಾಗಿ ರಂಗಸಪ್ತಾಹ, ಬನ್ನಿ ಪಾಲ್ಗೊಳ್ಳಿ, ನೆರವು ನೀಡಿ
ಬೆಂಗಳೂರು, ನವೆಂಬರ್ 05: ಕೊಡಗಿನ ಅನಾಹುತಕ್ಕೆ ನೆರವಾಗಲು ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹಾಗೂ ಸಮಾನ ಮನಸ್ಕರ ನೇತೃತ್ವದಲ್ಲಿ ಆರಂಭವಾದ ಪೀಪಲ್ ಫಾರ್ ಕೊಡಗು ತಂಡವು ರಂಗಸಪ್ತಾಹ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ನವೆಂಬರ್ 11ರಿಂದ ನವೆಂಬರ್ 16ರ ತನಕ ಬೆಂಗಳೂರಿನ ಕಲಾಗ್ರಾಮದಲ್ಲಿ ಪ್ರತಿದಿನ ಸಂಜೆ 5.30ಕ್ಕೆ ಗಾಯನ ಹಾಗೂ 7ಕ್ಕೆ ನಾಟಕ ಪ್ರದರ್ಶನವಿರುತ್ತದೆ. ಟಿಕೆಟ್ ಬೆಲೆ 100 ಹಾಗೂ 600ರು ಸೀಸನ್ ಪಾಸ್ ದರ ನಿಗದಿ ಮಾಡಲಾಗಿದೆ. ಹೆಚ್ಚಿನ ವಿವರಗಳನ್ನು people for people blr ಫೇಸ್ಬುಕ್ ಪುಟದಲ್ಲಿ ಪಡೆಯಬಹುದು.
ಮಳೆ ನಿಂತಿತು, ಕೊಡಗು ಕೂಡ ಜನರ ನೆನಪಿನಿಂದ ಮರೆಯಾಗತೊಡಗಿತು. ನಮ್ಮ ದೇಶದಲ್ಲಿ ಸಮಸ್ಯೆಗಳೇ ಹಾಗೆ. ತಕ್ಷಣದ ಅನುಭೂತಿ ಮುಗಿದ ಮೇಲೆ ನಾವೆಲ್ಲರೂ ಮರೆಯುತ್ತೇವೆ. ಆದರೆ ಕೊಡಗು ನಮ್ಮೆಲ್ಲರ ಹೆಮ್ಮೆ. ಈ ಕೊಡಗು ಸರಿ ಹೋಗಿಲ್ಲ ಸಮಸ್ಯೆಗಳ ಸಾಗರವೇ ಇದೆ. ಕೊಡಗನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಬೆಟ್ಟದಷ್ಟು ಕೆಲಸಗಳು ಬಾಕಿ ಇವೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತಿದ್ದರೂ ಮರುನಿರ್ಮಾಣಕ್ಕೆ ವರ್ಷಾನುಗಟ್ಟಲೆಯ ಬದ್ಧತೆ ಬೇಕಿದೆ, ಶ್ರಮ ಹಾಕಬೇಕಿದೆ.
ನಿಮ್ಮೆಲ್ಲರ ಕಿಂಚಿತ್ತು ಸಹಾಯ, ಉದಾರ ಸಹಾಯಹಸ್ತ ಮುಳುಗಿ ಹೋಗಿರುವ ನಮ್ಮದೇ ನಾಡಿನ ಜನರ ಬದುಕು ಕಟ್ಟುವಲ್ಲಿ ಸಹಕಾರಿಯಾಗುತ್ತದೆ. ದಯವಿಟ್ಟು ನಮ್ಮೊಂದಿಗೆ ಕೈ ಜೋಡಿಸಿ..#peooleforpeople...ರಂಗಸಪ್ತಾಹದ ಬಗ್ಗೆ ಪೀಪಲ್ ಫಾರ್ ಪೀಪಲ್ ತಂಡದವರು ನೀಡಿದ ಪ್ರಕಟಣೆ ಈ ಕೆಳಗಿನಂತಿದೆ...

ನೆರೆ ಪೀಡಿತ ಪ್ರದೇಶಗಳಲ್ಲಿ ನಿಂತು ಕೆಲಸ ಮಾಡಲಾಗಿದೆ
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ "ಪೀಪಲ್ ಫಾರ್ ಪೀಪಲ್" ತಂಡ 25ಕ್ಕೂ ಹೆಚ್ಚು ದಿನಗಳ ಕಾಲ ಕೊಡಗಿನ ನೆರೆ ಪೀಡಿತ ಪ್ರದೇಶಗಳಲ್ಲಿ ನಿಂತು ಕೆಲಸ ಮಾಡಿದ್ದಲ್ಲದೆ ಸರಕಾರಕ್ಕೆ ಆಗಲೇಬೇಕಾದ 19 ಅವಶ್ಯ ಕೆಲಸಗಳ ಪಟ್ಟಿಯನ್ನು ಮನವಿ ಪತ್ರದ ಮೂಲಕ ಕೊಟ್ಟು, ಆ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಲು ಸಮಾಜದ ಎಲ್ಲ ಕ್ಷೇತ್ರಗಳ ಗಣ್ಯರನ್ನು ಕೈಜೋಡಿಸುವಂತೆ ಕೇಳಿಕೊಂಡಿದೆ. ಖುಷಿಯ ವಿಚಾರವೆಂದರೆ ಮಠ ಮಾನ್ಯಗಳಿಂದ ಹಿಡಿದು ರೈತ ಸಂಘದ ವರೆಗೆ ಎಲ್ಲರೂ ಕೈಜೋಡಿಸುತ್ತಿದ್ದಾರೆ.

ತುರ್ತಾಗಿ ಕೊಡಗಿನಲ್ಲಿ ಆಗಲೇ ಬೇಕಾದ ಕಾರ್ಯಗಳು
ತುರ್ತಾಗಿ ಕೊಡಗಿನಲ್ಲಿ ಆಗಲೇ ಬೇಕಾದ ಕಾರ್ಯಗಳಲ್ಲಿ ಈ ಕೆಳಗಿನವು ಪ್ರಮುಖವಾದುದು..
*. ಜಾಗೃತಿ
* 719 ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ.
*. 6095 ಮನೆಗಳ ಮರುನಿರ್ಮಾಣ
*. 2000 ಜಾನುವಾರು ಮತ್ತು ಹೈನುಗಾರಿಕೆಗೆ ವ್ಯವಸ್ಥೆ
*. 183 ಶಾಲೆಗಳ ನಿರ್ಮಾಣ
*. ಹಾಳಾದ 13 ಸಾವಿರ ಹೆಕ್ಟೇರ್ ಭೂ ಪ್ರದೇಶವನ್ನು ವಾಸಯೋಗ್ಯವಾಗಿ ನಿರ್ಮಿಸುವುದು
* ಕ್ಯಾಂಪ್ ಗಳ ನಿರ್ವಹಣೆ
* ಮುಖ್ಯವಾಗಿ ಐದು ನದಿಗಳ ಪುನರುಜ್ಜೀವನ ಇದಕ್ಕೆ ಸಾಕಷ್ಟು ಶ್ರಮ ಬೇಕು ಜೊತೆಗೆ ಹಣವೂ ಬೇಕು. ಸಿಎಂ ಫಂಡ್ ಕೂಡ ಸಾಲುವುದಿಲ್ಲ. ಹತ್ತು ವರುಷದ ಶ್ರಮ ಬೇಡುವ ಸಮಸ್ಯೆ. ಈ ನಿಟ್ಟಿನಲ್ಲಿ ಪರಿಹಾರ ಕೆಲಸವಾಗಬೇಕಿದೆ.
*. ತಾತ್ಕಾಲಿಕ ಉದ್ಯೋಗ ಮೇಳ
*. ಆರೋಗ್ಯ ಮೇಳ ಮೆಡಿಕಲ್ ಟರ್ಮ್ ಕೆಲಸ ಆಗಬೇಕು .

ಕೊಡಗಿನ ಸಮಸ್ಯೆಗಳನ್ನು ಒಳಗೊಂಡ ವೈಜ್ಞಾನಿಕ ವಿಶ್ಲೇಷಣೆ
ಈ ಎಲ್ಲ ಸದುದ್ದೇಶಗಳಿಗಾಗಿ ಈ ರಂಗ ಸಪ್ತಾಹದ ಕಾರ್ಯಕ್ರಮ ನಾಡಿನ ಅತ್ಯುತ್ತಮ ರಂಗತಂಡಗಳು ನವೆಂಬರ್ 11 ರಿಂದ ನವೆಂಬರ್ 17 ರ ವರೆಗೆ ರಂಗ ಪ್ರದರ್ಶನ ನೀಡುವುದರ ಮೂಲಕ ಈ ಮಹಾತ್ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಈ ಮೂಲಕ ಏನು ಸಿಗುತ್ತದೊ ಅದನ್ನ ಕೊಡಗಿಗೆ ಬಳಸುವುದು ನಮ್ಮ ಉದ್ದೇಶ.
ಇದೆಲ್ಲದರ ಜೊತೆ ಕೊಡಗಿನ ಸಮಸ್ಯೆಗಳನ್ನು ಒಳಗೊಂಡ ವೈಜ್ಞಾನಿಕ ವಿಶ್ಲೇಷಣೆಯ ಯಾವುದೇ ಪಕ್ಷ, ಸಂಘಟನೆ ಪರವಾಗಿರದ ತಜ್ಞರ ರಿಸರ್ಚ್ ಆಧಾರದಲ್ಲಿ ಸಹ್ಯಾದ್ರಿ ಬದುಕಿಗೆ ಪರ್ಯಾಯ ಆಂದೋಲನ ರೂಪಿಸುವ ಶಕ್ತಿಗಾಗಿ ಸವಿವರವಾದ 'ಜಮ್ಮಾ ಭೂಮಿರ ಕಥೆ' ಸಾಕ್ಷ್ಯಚಿತ್ರ ನಿರ್ಮಾಣದ ಕಾರ್ಯವನ್ನೂ ಹಮ್ಮಿಕೊಂಡಿದ್ದೇವೆ.

ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಪೀಪಲ್ ಫಾರ್ ಕೊಡಗು ತಂಡಕ್ಕೆ ರಾಜ್ಯದ ನಾನಾಭಾಗಗಳಿಂದ 3000ಕ್ಕೂ ಹೆಚ್ಚು ತಂಡಗಳು ಸ್ಪಂದಿಸಿ ಲಕ್ಷಾಂತರ ರೂಪಾಯಿಯ ಅವಶ್ಯಕ ವಸ್ತುಗಳನ್ನು ಒದಗಿಸಿ ಪ್ರವಾಹ ಪರಿಸ್ಥಿತಿ ನಿರ್ವಹಿಸಲು ನೆರವಾದವು.
ಪೀಪಲ್ ಫಾರ್ ಕೊಡಗು ನಡೆಸಿದ ಗ್ರೌಂಡ್ ರಿಯಾಲಿಟಿ ಚೆಕ್ನೊಂದಿಗೆ, ಆಗಬೇಕಾಗಿರುವ ಒಟ್ಟು 19 ಅಂಶಗಳ ಪಟ್ಟಿಯನ್ನು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲುಪಿಸಲಾಗಿದೆ.ಚಿತ್ರದಲ್ಲಿ : ಚಕ್ರವರ್ತಿ ಚಂದ್ರಚೂಡ್.












Click it and Unblock the Notifications