ಕೆಎಫ್ ಸಿಗೆ ನುಗ್ಗಿ ಪಿಜ್ಜಾ ಬಾಯ್ಗೆ ಚಾಕು ಇರಿದ ದುಷ್ಕರ್ಮಿಗಳು
ಬೆಂಗಳೂರು, ಏಪ್ರಿಲ್ 10: ದುಷ್ಕರ್ಮಿಗಳು ಗಲಾಟೆ ನಡೆಸಿ ಪಿಜ್ಜಾ ಬಾಯ್ ಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೊಸೂರು ಮುಖ್ಯರಸ್ತೆಯ ಬೊಮ್ಮಸಂದ್ರ ಕೆಎಫ್ ಸಿ ಪಿಜ್ಜಾ ಸೆಂಟರ್ ನಲ್ಲಿ ನಡೆದಿದೆ.
ಒರಿಸ್ಸಾ ಮೂಲದ ಸಮೀರ್(25) ಮೃತ ದುರ್ದೈವಿ. ಸೋಮವಾರ ರಾತ್ರಿ ಬೈಕಿನಲ್ಲಿ ನಾಲ್ವರು ದುಷ್ಕರ್ಮಿಗಳು ಬಂದಿದ್ದಾರೆ. ಅವರಲ್ಲಿ ಇಬ್ಬರು ಕೆಎಫ್ ಸಿ ಪಿಜ್ಜಾ ಸೆಂಟರ್ ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಹಣ ಮತ್ತು ಮೊಬೈಲ್ ದರೋಡೆಗೆ ಯತ್ನಿಸಿದ್ದಾರೆ.
ಈ ವೇಳೆ ಪ್ರತಿರೋಧ ಒಡ್ಡಿದ ಸಮೀರ್ ಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ವಿಷಯ ತಿಳಿದ ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತನ ಶವವನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.

ಹೆದ್ದಾರಿ ಪಕ್ಕದಲ್ಲಿನ ಪಿಜ್ಜಾ ಸೆಂಟರ್ ನಲ್ಲಿ ಇಂತಹ ಘಟನೆ ನಡೆದಿರುವುದು ನಗರದ ಜನರನ್ನು ಬೆಚ್ಚಿಬೀಳಿಸಿದೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications