ಬೆಂಗಳೂರು: ಇಂಧನ ಹೊಂದಾಣಿಕೆ ಶುಲ್ಕ ಪರಿಷ್ಕರಿಸಿ ಕೆಇಆರ್ಸಿ ಆದೇಶ
ಬೆಂಗಳೂರು, ಸೆಪ್ಟಂಬರ್ 23: ಕಲ್ಲಿದ್ದಲು ಖರೀದಿ ದರ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಇಂಧನದ ಹೊಂದಾಣಿಕೆ ಶುಲ್ಕವನ್ನು ಅಕ್ಟೋಬರ್ನಿಂದ ಅನ್ವಯವಾಗುವಂತೆ ಮುಂದಿನ 6 ತಿಂಗಳವರೆಗೆ ಪರಿಷ್ಕರಿಸಿದೆ.
ಇಂಧನದ ಹೊಂದಾಣಿಕೆ ಶುಲ್ಕ ಪರಿಷ್ಕರಿಸಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್ಸಿ) ವು ಇತ್ತೀಚೆಗೆ ಆದೇಶ ಹೊರಡಿಸಿದೆ. ಆಯೋಗದ ನಿಯಮಗಳು 2013 ರ ಅಡಿಯಲ್ಲಿ ಬೆಸ್ಕಾಂ ಇಂಧನ ಹೊಂದಾಣಿಕೆ ಶುಲ್ಕ 43 ಪೈಸೆಯನ್ನು ಮುಂದಿನ 6 ತಿಂಗಳ ಅವಧಿಗೆ ಗ್ರಾಹಕರಿಂದ ಸಂಗ್ರಹಿಸಲಿದೆ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದರು.
ಕೇಂದ್ರ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ (ಸಿಜಿಎಸ್) ಕರ್ನಾಟಕ ವಿದ್ಯುಚ್ಛಕ್ತಿ ಉತ್ಪಾದನಾ ಕೇಂದ್ರ (ಕೆಪಿಟಿಸಿಎಲ್)ಮತ್ತು ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಯುಪಿಸಿಎಲ್) ನಿಂದ ಎಲ್ಲಾ ಎಸ್ಕಾಂಗಳು ವಿದ್ಯುತ್ ಖರೀದಿಸುತ್ತಿವೆ. ಏಪ್ರಿಲ್ 2022ರಿಂದ ಜೂನ್ 2022ರವರೆಗೆ 643 ಕೋಟಿ ರೂ.ಗಳಷ್ಟು ವಿದ್ಯುತ್ ಖರೀದಿ ವೆಚ್ಚ ಹೆಚ್ಚಳವಾಗಿದೆ. 80 ಪೈಸೆ ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ವಸೂಲಿ ಮಾಡಲು ಬೆಸ್ಕಾಂ ಕೆಇಆರ್ ಸಿಗೆ 2022ರ ಆಗಸ್ಟ 30ರಂದು ಅರ್ಜಿ ಸಲ್ಲಿಸಿತ್ತು.

ಪ್ರತಿ ಮೂರು ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕವನ್ನು ಪರಿಷ್ಕರಿಸಲಾಗುತ್ತದೆ. ಆದರೆ ಗ್ರಾಹಕರಿಗೆ ಹೆಚ್ಚವರಿ ಹೊರೆಯನ್ನು ತಪ್ಪಿಸುವ ಉದ್ದೇಶದಿಂದ ಈ ಶುಲ್ಕವನ್ನು ಆರು ತಿಂಗಳಿಗೆ ಅನ್ವಯಿಸುವಂತೆ ಪರಿಷ್ಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜುಲೈನಲ್ಲಿ 31 ಪೈಸೆ ಹೆಚ್ಚಿಸಿ ಆದೇಶ
ಕಳೆದ ಜುಲೈನಲ್ಲಿ ಇಂಧನ ಹೊಂದಾಣಿಕೆ ಶುಲ್ಕವನ್ನು ಆರು ತಿಂಗಳ ಅವಧಿಗೆ 31 ಪೈಸೆಯಷ್ಷು ಬೆಸ್ಕಾಂಗೆ ಅನ್ವಯಿಸುವಂತೆ ಹೆಚ್ಚಳ ಮಾಡಿ ಆಯೋಗ ಆದೇಶ ಹೊರಡಿಸಿತ್ತು. ಇದೀಗ ಕಲ್ಲಿದ್ದಲು ಖರೀದಿ ವೆಚ್ಚದಲ್ಲಿ ಗಣನೀಯ ಏರಿಕೆ ಆದ ಹಿನ್ನೆಲೆಯಲ್ಲಿ 43 ಪೈಸೆ ಹೆಚ್ಚಳ ಮಾಡಲಾಗಿದೆ. ಈ ಮೊತ್ತವನ್ನು ಅಕ್ಟೋಬರ್ನಿಂದ ಮುಂದಿನ 2023ರ ಮಾರ್ಚ್ವರೆಗೆ ಸಂಗ್ರಹಿಸಲಾಗುವುದು ಎಂದು ವಿವರಿಸಿದರು.
ವೆಚ್ಚ ವ್ಯತ್ಯಾಸವಾದಾಗ ಅರ್ಜಿ ಸಲ್ಲಿಕೆ
ಇಂಧನ ವ್ಯತ್ಯಾಸ ದರಗಳನ್ನು ಆಯೋಗದ (ಇಂಧನ ವೆಚ್ಚ ಹೊಂದಾಣಿಕೆ ಶುಲ್ಕಗಳು) ನಿಯಮಗಳು 2013ರ ಪ್ರಕಾರ, ಉಷ್ಣ ವಿದ್ಯುತ್ ಸ್ಥಾವರಗಳಿಂದ ಖರೀದಿಸಿದ ವಿದ್ಯುಚ್ಛಕ್ತಿಯ ಮೇಲಿನ ಇಂಧನ ವೆಚ್ಚದಲ್ಲಿನ ಬೆಲೆ ವ್ಯತ್ಯಾಸವಾಗುತ್ತದೆ. ಹೀಗಾದಾಗ ಕಾಲಕಾಲಕ್ಕೆ ಜಾರಿಯಲ್ಲಿರುವ ಜಕಾತಿಗೆ ಅನುಸಾರವಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಆಯೋಗದ ಮುಂದೆ ಅರ್ಜಿ ಸಲ್ಲಿಸಲಾಗುತ್ತದೆ ಎಂದರು.
ಅರ್ಜಿಗಳು ಸಲ್ಲಿಕೆಯಾದ ನಂತರ ಆಯೋಗವು ಪರಾಮರ್ಶಿಸಿ, ಇಂಧನ ವ್ಯತ್ಯಾಸ ದರವನ್ನು ವಸೂಲಿ ಅಥವಾ ಕಡಿತಗೊಳಿಸಲು ಕಾಲಕಾಲಕ್ಕೆ ಆದೇಶಿಸುತ್ತದೆ. ಕಲ್ಲಿದ್ದಲು ಹಾಗೂ ತೈಲ ಬೆಲೆ ಹೆಚ್ಚಾದಾಗ ಹೊಂದಾಣಿಕೆ ವೆಚ್ಚ ಹೆಚ್ಚಾಗುತ್ತದೆ. ಕಡಿಮೆಯಾದಾಗ ವೆಚ್ಚ ಇಳಿಯುತ್ತದೆ ಎಂದು ಮಹಾಂತೇಶ ಬೀಳಗಿ ತಿಳಿಸಿದರು.












Click it and Unblock the Notifications