ಬೆಂಗಳೂರಲ್ಲಿ ಅವತರಿಸಿದ ದೇವರ ಸ್ವಂತ ರಾಜ್ಯ ಕೇರಳ
ಬೆಂಗಳೂರು, ಫೆಬ್ರವರಿ 13: ಜವಾಬ್ದಾರಿಯುತ ಪ್ರವಾಸೋದ್ಯಮ ಹೆಸರಿನಲ್ಲಿ ಕೇರಳ ರಾಜ್ಯವೂ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿದೆ. ಕೇರಳ ಪ್ರವಾಸೋದ್ಯಮ ಪ್ರಚಾರಕ್ಕೆ ಬೆಂಗಳೂರಿನಲ್ಲಿ ಪ್ರದರ್ಶನವನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಆಯೋಜಿಸಿತ್ತು.
ನಗರದ ಎಂ.ಜಿ.ರಸ್ತೆಯ ತಾಜ್ ವಿವಾಂತಾದಲ್ಲಿ ಕೇರಳ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕೇರಳದ ಜಾನಪದ ಕಲೆ, ಪ್ರವಾಸೋದ್ಯಮ ಸಂಬಂಧಿತ ವಸ್ತು ಪ್ರದರ್ಶನ, ಕಲೆ, ನೃತ್ಯಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಕೇರಳ ಸಂಸ್ಕೃತಿಯ ಪರಿಚಯವನ್ನು ಕರ್ನಾಟಕದ ಜನರಿಗೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೇರಳದ ಕುಚುಪುಡಿ, ಕಳರೀಪಯಟ್ಟು, ಸಂಗೀತ, ವಾದ್ಯಗಳ ಪ್ರದರ್ಶನ ಬೆಂಗಳೂರಿಗರ ಮನ ಗೆದ್ದವು. ಕೇರಳದ ಅಪ್ರತಿಮ ಪ್ರಕೃತಿ ಸೌಂದರ್ಯದ ಚಿತ್ರಗಳು, ಸಮುದ್ರ ತೀರಗಳು ಚಿತ್ರಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿತ್ತು.
ಈ ತ್ರೈಮಾಸಿಕ ವರ್ಷದಲ್ಲಿ ಕೇರಳಕ್ಕೆ ಬರುವ ವಿದೇಶಿ ಪ್ರವಾಸಿಗರನ್ನು 100% ದೇಸೀ ಪ್ರವಾಸಿಗರನ್ನು 50% ಹೆಚ್ಚು ಮಾಡುವ ಉದ್ದೇಶ ಕೇರಳ ಪ್ರವಾಸೋದ್ಯಮ ಇಲಾಖೆ ಹೊಂದಿದ್ದು ಈ ಕಾರಣಕ್ಕಾಗಿ ದೇಶದ ಪ್ರಮುಖ ನಗರಗಳಲ್ಲಿ ಕೇರಳದ ಜಾನಪದ ಕಲೆಗಳ ಪ್ರದರ್ಶನ, ಪ್ರವಾಸೋದ್ಯಮ ವಸ್ತುಗಳ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.