ಕೆಂಪೇಗೌಡರ ಪ್ರತಿಮೆ: ಬೃಹತ್ ಮೆರವಣಿಗೆಯಲ್ಲಿ ಮಣ್ಣು ಹಸ್ತಾಂತರ
ಬೆಂಗಳೂರು, ನವೆಂಬರ್ 07: ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆಯ ಭಾಗವಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಪವಿತ್ರ ಮೃತ್ತಿಕೆ ಸಂಗ್ರಹಣಾ ಕಾರ್ಯ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಹಲವೆಡೆ ಮಣ್ಣು ಸಂಗ್ರಹವು ವಿಜೃಂಭಣೆ, ಬೃಹತ್ ಮೆರವಣಿಗೆ ಮೂಲಕ ಜರುಗಿತು.
ಉತ್ಸವದ ರೀತಿಯಲ್ಲಿ ಮಲ್ಲೇಶ್ವರಂ ವಿವಿಧ ಭಾಗದಲ್ಲಿ ನಡೆದ ಬೃಹತ್ ಮೆರವಣಿಗೆಯಲ್ಲಿ ಜನಸಾಗರವೇ ಕೂಡಿತ್ತು. ಈ ವೇಳೆ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಶಾಸಕ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ್ ಜನಸಾಗರಕ್ಕೆ ಅಭಿನಂದನೆ ತಿಳಿಸಿದರು.
ಇದಕ್ಕು ಮೊದಲು ಮತ್ತೀಕೆರೆಯ ನೇತಾಜಿ ವೃತ್ತದಲ್ಲಿ ತೋಟಗಾರಿಕೆ ಸಚಿವ ಮುನಿರತ್ನ ಪೂಜೆ ಸಲ್ಲಿಸಿ ಪವಿತ್ರ ಮೃತ್ತಿಕೆ ಸಂಗ್ರಹಣೆಗೆ ಚಾಲನೆ ನೀಡಿದರು. ಮತ್ತಿಕೆರೆ 3ನೇ ಮುಖ್ಯರಸ್ತೆ, 1ನೇ ಮುಖ್ಯರಸ್ತೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಈ ವೇಳೆ ಅಶ್ವಥ್ ನಾರಾಯಣ್ ಅವರು ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ ಮಣ್ಣು ಸಂಗ್ರಹಕ್ಕೆ ಮುಂದಾದರು.

ಅಭಿಯಾನದ ಭಾಗವಾದ ಈ ಮೆರವಣಿಗೆಯು ಕೆ.ಎನ್ ಬಡಾವಣೆ, ಸುಬೇದಾರ್ ಪಾಳ್ಯ, ದಿವಾನರ ಪಾಳ್ಯ, ತ್ರಿವೇಣಿ ರಸ್ತೆ, ಸಂವಿಧಾನ ವೃತ್ತಗಳಲ್ಲಿ ಸಾಗಿತು. ದಾರಿಯುದ್ದಕ್ಕೂ ಅಲ್ಲಲ್ಲಿ ಇರುವ ದೇವಸ್ಥಾನಗಳ ಬಳಿ ನಾಡಪ್ರಭುವಿನ ರಥಗಳಿಗೆ ಪೂರ್ಣಕುಂಭ ಸ್ವಾಗತ ಕೊಡಲಾಯಿತು. ವಿಶೇಷವಾಗಿ, ಮತ್ತೀಕೆರೆಯ ಮುಸ್ಲಿಂ ಬಾಂಧವರು ಕೂಡ ಅಪಾರ ಸಂಖ್ಯೆಯಲ್ಲಿ ಈ ಅಭಿಯಾನದ ಜತೆ ಏಕಭಾವದಿಂದ ಸಮರಸತೆಯ ಸಂದೇಶ ಸಾರಿದ್ದು ವಿಶೇಷವಾಗಿತ್ತು. ಹಾದಿಯುದ್ದಕ್ಕೂ ನಗರದ ಜನರು ಹೂವಿನ ಮಳೆಗರೆಯಲಾಯಿತು.
ಅಶ್ವಥ್ ಗೆ ಮೃತ್ತಿಕೆ ಹಸ್ತಾಂತರ
ಕೊನೆಯ ಹಂತದಲ್ಲಿ ಮೃತ್ತಿಕೆ ಸಂಗ್ರಹವು ಮಲ್ಲೇಶ್ವರಂ ವೃತ್ತದಲ್ಲಿರುವ ಕುವೆಂಪು ಪ್ರತಿಮೆಯ ಬಳಿಯಿಂದ ಆರಂಭವಾಯಿತು. ಮಲ್ಲೇಶ್ವರಂನ ದೇವಸ್ಥಾನಗಳ ಒಕ್ಕೂಟದ ಮುಖ್ಯಸ್ಥರಾದ ಹರೀಶ್ ಪಂಡಿತ್ ಅವರ ನೇತೃತ್ವದಲ್ಲಿ ಎಲ್ಲ ದೇಗುಲಗಳ ಅರ್ಚಕರು, ಭಕ್ತಾದಿಗಳು, ಆಡಳಿತ ಮಂಡಳಿಯವರು, ಮಹಿಳೆಯರು, ಸಾರ್ವಜನಿಕರು, ವ್ಯಾಪಾರಿಗಳು, ಪ್ರಮುಖರು ಮೃತ್ತಿಕೆಯನ್ನು ಅಶ್ವಥ್ ನಾರಾಯಣ್ ಅವರಿಗೆ ಹಸ್ತಾಂತರಿಸಿದರು. ಕೋದಂಡರಾಮಪುರ, ಲಕ್ಷ್ಮೀನಾರಾಯಣ ಪುರ ಇತ್ಯಾದಿಗಳ ಭಾಗದ ಎಲ್ಲಾ ಬಿಬಿಎಂಪಿ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಕೂಡ ಅಭಿಯಾನದಲ್ಲಿ ಮೃತ್ತಿಕೆಯನ್ನು ಕೊಟ್ಟರು.

ಮೆರವಣಿಗೆಯು 18ನೇ ಅಡ್ಡರಸ್ತೆಯಲ್ಲಿರುವ ಗೋಕಾಕ್ ಚಳವಳಿ ಸ್ಮರಣಾರ್ಥ ಉದ್ಯಾನದಲ್ಲಿ ಸಂಪನ್ನಗೊಂಡಿತು.
ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರಾದ ಮಂಜುನಾಥ ರಾಜು, ಜಯಪಾಲ್, ಡಾ.ವಾಸು, ಕೇಶವಮೂರ್ತಿ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ಸಮೀವುಲ್ಲಾ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications