ಕೆಂಪೇಗೌಡ ಬಡಾವಣೆ ಕಾಮಗಾರಿ 15 ದಿನಗಳಲ್ಲಿ ಆರಂಭಿಸಬೇಕು: ಎಸ್ಆರ್ ವಿಶ್ವನಾಥ್ ಸೂಚನೆ
ಬೆಂಗಳೂರು, ನ.4: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಯನ್ನು ವಿಳಂಬವಾಗಿದ್ದು, 15 ದಿನಗಳಲ್ಲಿ ಕಾಮಗಾರಿ ಆರಂಭಿಸಬೇಕು ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಸೂಚನೆ ನೀಡಿದ್ದಾರೆ.
ಶುಕ್ರವಾರ ಅವರು ಬಿಡಿಎ ಉನ್ನತಾಧಿಕಾರಿಗಳೊಂದಿಗೆ ಬಡಾವಣೆಯ ಕಾಮಗಾರಿ ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೂ ಬಡಾವಣೆ ಕಾಮಗಾರಿ ವಿಳಂಬವಾಗಬಾರದು ಎಂದು ಎಚ್ಚರಿಸಿದರು.
ಬಡಾವಣೆಯ ವಿವಿಧೆಡೆಯಲ್ಲಿ ನಿವೇಶನ ಅಭಿವೃದ್ಧಿ, ರಸ್ತೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳದ ಗುತ್ತಿಗೆದಾರರನ್ನು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.

ಕಾಮಗಾರಿ ಆರಂಭಿಸಲು ಸೂಚನೆ
ಬಿಡಿಎ ಭೂಮಿಯನ್ನು ನೀಡಿದ್ದರೂ ಕಾಮಗಾರಿಯನ್ನು ಕೈಗೊಳ್ಳುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದಾರೆ. ಯಂತ್ರೋಪಕರಣಗಳನ್ನು ಬಳಸಿ ಕೂಡಲೇ ಕಾಮಗಾರಿಗಳನ್ನು ಕೈಗೊಳ್ಳಬೇಕು. ಇದರ ಜವಾಬ್ದಾರಿಯನ್ನು ಸಂಬಂಧಿಸಿದ ಎಂಜಿನಿಯರ್ ಗಳು ವಹಿಸಿಕೊಳ್ಳಬೇಕು. ಇದಕ್ಕೆ ವಿಫಲರಾದರೆ ಗುತ್ತಿಗೆದಾರರು ಮತ್ತು ಎಂಜಿನಿಯರ್ ಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಯಾವುದೇ ಕಾರಣಕ್ಕೂ ಮುಖ್ಯ ಗುತ್ತಿಗೆದಾರರು ತಮಗೆ ವಹಿಸಿರುವ ಕಾಮಗಾರಿಯನ್ನು ಉಪಗುತ್ತಿಗೆ ನೀಡುವುದು ಕಂಡು ಬಂದರೆ ಇಡೀ ಗುತ್ತಿಗೆಯನ್ನೇ ರದ್ದು ಮಾಡಲಾಗುತ್ತದೆ ಎಂದೂ ಎಚ್ಚರಿಸಿದರು.
15 ದಿನದಲ್ಲಿ ಮತ್ತೆ ಭೇಟಿ
ಸ್ಥಗಿತಗೊಂಡಿರುವ ಕಾಮಗಾರಿಗಳನ್ನು 15 ದಿನಗಳೊಳಗೆ ಆರಂಭಿಸಬೇಕು ಎಂದು ಗಡುವು ವಿಧಿಸಿದ ಬಿಡಿಎ ಅಧ್ಯಕ್ಷರು, ಎರಡು ವಾರಗಳ ನಂತರ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಲಾಗುವುದು. ಆಗಲೂ ಲೋಪಗಳು ಕಂಡು ಬಂದರೆ ಸ್ಥಳದಲ್ಲಿಯೇ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದರು.

ಇದೇ ವೇಳೆ, ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರೊಂದಿಗೆ ಎಸ್.ಆರ್.ವಿಶ್ವನಾಥ್ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿದ ಅವರು, ಜಮೀನುಗಳನ್ನು ನೀಡಿರುವ ರೈತರಿಗೆ ನೀಡಬೇಕಿರುವ ನಿವೇಶನಗಳು ಮತ್ತು ಪರಿಹಾರಗಳನ್ನು ಕೂಡಲೇ ಬಿಡುಗಡೆ ಮಾಡಲು ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಾಕಿ ಇರುವ ರೈತರ ಅರ್ಜಿಗಳ ವಿಲೇವಾರಿಗೆ ಒಂದು ವಾರದಲ್ಲಿ ಕಡತಯಜ್ಞ ನಡೆಸಬೆಕು. ನಿಯಮಬದ್ಧವಾಗಿರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಅವರು ಹೇಳಿದರು.
ಪಾರ್ಶ್ವವಾಯು ಪೀಡಿತ ರೈತಗೆ ಕೂಡಲೇ ನಿವೇಶನ
ಬಡಾವಣೆ ನಿರ್ಮಾಣಕ್ಕೆಂದು ಜಮೀನು ನೀಡಿದ ರೈತರೊಬ್ಬರು ಪಾರ್ಶ್ವವಾಯು ಪೀಡಿತರಾಗಿದ್ದಾರೆ ಎಂಬ ವಿಚಾರವನ್ನು ರೈತ ಮುಖಂಡರು ಅಧ್ಯಕ್ಷರ ಗಮನಕ್ಕೆ ತಂದರು.
ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಅವರು, ಸೋಮವಾರದೊಳಗೆ ಅವರಿಗೆ ಅಲಾಟ್ ಮಾಡಿರುವ ನಿವೇಶನಗಳನ್ನು ನೋಂದಣಿ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಬಿಡಿಎ ಹಿರಿಯ ಅಧಿಕಾರಿಗಳಾದ ಶಾಂತರಾಜಣ್ಣ, ಶಾಂತರಾಜು, ನಂಜುಂಡೇಗೌಡ, ರವಿಕುಮಾರ್, ಡಾ.ಸೌಜನ್ಯ, ಡಾ.ಬಸಂತಿ ಸೇರಿದಂತೆ ಮತ್ತಿತರರು ಇದ್ದರು.












Click it and Unblock the Notifications