ಕಾರ್ತಿಕ್ ಗೌಡ ಏಕಾಏಕಿ ಪ್ರತ್ಯಕ್ಷ, ಸೀದಾ ಆಸ್ಪತ್ರೆಗೆ
ಬೆಂಗಳೂರು, ಸೆ. 12 : ನಟಿ ಮೈತ್ರಿಯಾ ಗೌಡ ಕಾರ್ತಿಕ್ ಗೌಡ ಜೊತೆ ನನ್ನ ಮದುವೆಯಾಗಿದೆ ಎಂದು ಬಹಿರಂಗಪಡಿಸಿದ ಬಳಿಕ ತಲೆ ಮರೆಸಿಕೊಂಡಿದ್ದ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ಶುಕ್ರವಾರ ಮುಂಜಾನೆ ಆರ್.ಟಿ.ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ. ಕಾರ್ತಿಕ್ ಹೇಳಿಕೆ ಪಡೆದುಕೊಂಡಿರುವ ಪೊಲೀಸರು ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದಾರೆ.
ಶುಕ್ರವಾರ ಮುಂಜಾನೆ 6.15ಕ್ಕೆ ಕಾರ್ತಿಕ್ ಗೌಡ ಆರ್.ಟಿ.ನಗರ ಪೊಲೀಸ್ ಠಾಣೆಗೆ ಆಗಮಿಸಿದರು ಎಂದು ತಿಳಿದುಬಂದಿದೆ. ಎಸಿಪಿ ಓಂಕಾರಯ್ಯ ನೇತೃತ್ವದ ಅಧಿಕಾರಿಗಳ ತಂಡ ಸುಮಾರು 30 ನಿಮಿಷ ಕಾರ್ತಿಕ್ ಗೌಡ ಅವರ ವಿಚಾರಣೆ ನಡೆಸಿದ್ದು, ನಂತರ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಲಾಗಿದೆ.

ಅತ್ಯಾಚಾರ, ವಂಚನೆ ಆರೋಪ ಹೊತ್ತು ಬಂಧನ ಭೀತಿಯಿಂದ ತಲೆ ಮರೆಸಿಕೊಂಡಿದ್ದ ಕಾರ್ತಿಕ್ ಗೌಡ ಅವರಿಗೆ ಸೆಷನ್ಸ್ ನ್ಯಾಯಾಲಯ ಸೋಮವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು ಮತ್ತು ಸೆ.30ರೊಳಗೆ ಪ್ರಕರಣದ ತನಿಖೆ ನಡೆಸುತ್ತಿರುವ ಆರ್.ಟಿ.ನಗರ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು. [ಕಾರ್ತಿಕ್ ಗೌಡಗೆ ಜಾಮೀನು ಸಿಕ್ತು].
ಆರ್.ಟಿ.ನಗರ ಪೊಲೀಸರಿಗೆ ನಟಿ ಮೈತ್ರಿಯಾ ಗೌಡ ನೀಡಿರುವ ದೂರಿನ ಆಧಾರದ ಮೇಲೆ ಈಗಾಗಲೇ ಮೈತ್ರಿಯಾ ಗೌಡ ಅವರನ್ನು ಪೊಲೀಸರು ಎರಡು ಬಾರಿ ವಿಚಾರಣೆ ನಡೆಸಿದ್ದಾರೆ. ಅವರಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಆದರೆ, ಕಾರ್ತಿಕ್ ಗೌಡ ದೂರು ದಾಖಲಾದ ನಂತರ ತಲೆಮರೆಸಿಕೊಂಡಿದ್ದರಿಂದ ಅವರ ವಿಚಾರಣೆ ಸಾಧ್ಯವಾಗಿರಲಿಲ್ಲ. ಎರಡು ಬಾರಿ ನೋಟಿಸ್ ನೀಡಿದರೂ ಕಾರ್ತಿಕ್ ವಿಚಾರಣೆಗೆ ಆಗಮಿಸಿರಲಿಲ್ಲ. [62 ಪುಟಗಳ ಹೇಳಿಕೆ ನೀಡಿದ ನಟಿ ಮೈತ್ರಿಯಾ ಗೌಡ]
ಕಾರ್ತಿಕ್ ಗೌಡ ಅವರನ್ನು ಬಂಧನಕ್ಕೆ ಪೊಲೀಸರು ನ್ಯಾಯಾಲಯದಿಂದ ಬಂಧನ ವಾರೆಂಟ್ ಪಡೆದಿದ್ದರು. ಸೆಷೆನ್ ನ್ಯಾಯಾಲಯದಲ್ಲಿ ಕಾರ್ತಿಕ್ ಗೌಡ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಮೈತ್ರಿಯಾ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಾರ್ತಿಕ್ ಗೌಡ ತಾಯಿ ಡಾಟಿ ಸದಾನಂದ ಗೌಡರನ್ನು ವಿಚಾರಣೆ ನಡೆಸಲಾಗಿದೆ. [ಮೈತ್ರಿಯಾ ಬಗ್ಗೆ ಡಾಟಿ ಸದಾನಂದ ಗೌಡರು ಹೇಳಿದ್ದೇನು?]











Click it and Unblock the Notifications