ಚುನಾವಣೆ ಬಂದಾಗ ಉಕ್ಕಿನ ಸೇತುವೆ ಕನವರಿಕೆ: ರಾಜೀವ್ ಚಂದ್ರಶೇಖರ್
ಬೆಂಗಳೂರು, ಜನವರಿ 2: ಬೆಂಗಳೂರು ಉಕ್ಕಿನ ಸೇತುವೆ ನಿರ್ಮಾಣದ ಕುರಿತು ಮರು ಪರಿಶೀಲನೆ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಪ್ರಕಟಣೆ ಮೂಲಕ ಹೇಳಿಕೆ ನೀಡಿರುವ ಅವರು, ಚುನಾವಣೆಗಳು ಸಮೀಪಿಸುತ್ತಿದ್ದಂತೆ ಸ್ಟೀಲ್ ಫ್ಲೈಓವರ್ ನಂತಹ ಯೋಜನೆಗಳು ನಿಗೂಢ ರೀತಿಯಲ್ಲಿ ಮರುಜೀವ ಪಡೆದುಕೊಳ್ಳುತ್ತವೆ.
ಬೆಂಗಳೂರು ಕಾಂಗ್ರೆಸ್ ಸರ್ಕಾರದ 5 ವರ್ಷಗಳ ದುರಾಡಳಿತವನ್ನು ನೋಡಿದೆ. ಈಗ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಸಹ ಬಿಲ್ಡರ್ -ಕಾಂಟ್ರ್ಯಾಕ್ಟರ್ ಗಳ ಮೂಲಕ ನಗರದ ಶೋಷಣೆ, ಸಾರ್ವಜನಿಕ ಹಣದ ದುರ್ಬಳಕೆ, ಭ್ರಷ್ಟಾಚಾರ ಮುಂದುವರೆದಿದೆ.
ಕೆಜೆ ಜಾರ್ಜ್ ಅವರ ಸೂಕ್ತ ಉತ್ತರಾಧಿಕಾರಿಯಂತಿರುವ ಸಚಿವ ಡಿಕೆ ಶಿವಕುನಾರ್ ಅವರು ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಮೇಲೆ ಆಸಕ್ತಿ ತೋರಿಸಿರುವುದು ಅಚಚ್ರಿಯೇನಲ್ಲ ಎಂದಿದ್ದಾರೆ.

ಅಧಿಕಾರದಲ್ಲಿದ್ದ 5 ವರ್ಷಗಳಲ್ಲಿ ಬೆಂಗಳೂರಿನ ಸಾರಿಗೆ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ಪಕ್ಷ ತೋರಿದ ಒಲವು ಮತ್ತು ಆಸಕ್ತಿ ಎಲ್ಲರಿಗೂ ತಿಳಿದಿದೆ. ನಾಗರಿಕರಿಗೆ ಪ್ರಯೋಜನವಿಲ್ಲದೆ ಮತ್ತು ಕಾಂಟ್ರ್ಯಾಕ್ಟರ್ ಗಳು ಹಾಗೂ ಬಿಲ್ಡರ್ ಗಳಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ನೀಡಲು ಹೆಸರುವಾಸಿಯಾಗಿರುವ ಬಿಡಿಎ ಪ್ರಸ್ತಾಪಿಸಿರುವ ಉಕ್ಕಿನ ಫ್ಲೈಓವರ್ ಮೇಲೆ ಸರ್ಕಾರ ಹೆಚ್ಚಿನ ಆಸಕ್ತಿ ತೋರುತ್ತಿದೆ.
ಈ ರೀತಿಯ ದುಬಾರಿ ಮತ್ತು ಪ್ರಯೋಜನವಿಲ್ಲದ ಯೋಜನೆಗಳನ್ನು ನೀಡುವಲ್ಲಿ ಬಿಡಿಎ ತನ್ನದೇ ಆದ ಇತಿಹಾಸವನ್ನೇ ಹೊಂದಿದೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಸ್ಟೀಲ್ ಫ್ಲೈಓವರ್ ಯೋಜನೆ ಪ್ರಸ್ತಾಪ ಬಂದಾಗಲೆಲ್ಲ ಅದನ್ನು ನಾಗರಿಕರು ವಿರೋಧಿಸಿದ್ದರು. ಅಷ್ಟೇ ಅಲ್ಲದೆ ರಾಷ್ಟ್ರೀಯ ಹಸಿರು ಪೀಠ ಕೂಡ ಯೋಜನೆಗೆ ತಡೆವೊಡ್ಡಿತ್ತು. ಇದು ರಾಜಕೀಯ ಕೆಸರೆರಚಾಟ ನಡೆಸುವ ವಿಷಯವಲ್ಲ, ಇದು ಬೆಂಗಳೂರಿನ ನಾಗರಿಕರು ಮತ್ತು ಅವರ ಹಕ್ಕುಗಳ ವಿಷಯ. ಈ ಕುರಿತು ಪಾರದರ್ಶಕ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications