ಕರ್ನಾಟಕ ರತ್ನ ಪ್ರಧಾನ; ಸಿದ್ದರಾಮಯ್ಯಗೆ ಆಹ್ವಾನವೇ ಇಲ್ಲ!
ಬೆಂಗಳೂರು, ನವೆಂಬರ್ 1: "ಪುನೀತ್ಗೆ ಕರ್ನಾಟಕ ರತ್ನ ನೀಡುವುದು ನನಗೆ ಸಂತಸದ ವಿಷಯ. ಆದರೆ ನನ್ನನ್ನು ಯಾರೂ ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಹಾಗಾಗಿ ನಾನು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸ್ಯಾಂಡಲ್ವುಡ್ ಖ್ಯಾತ ನಟ ದಿವಂಗತ ಡಾ. ಪುನೀತ್ ರಾಜಕುಮಾರ್ ಅವರಿಗೆ ಇಂದು ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ವಿಧಾನಸೌಧದ ಮುಂಭಾಗ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು, ನಟ ರಜನಿಕಾಂತ್ ಸೇರಿದಂತೆ ಅನೇಕ ಖ್ಯಾತ ನಟ-ನಟಿಯರು ಮಾತ್ರವಲ್ಲದೇ ದೇಶದಾದ್ಯಂತ ಇರುವ ಅಪ್ಪು ಅಭಿಮಾನಿಗಳು ಆಗಮಿಸಲಿದ್ದಾರೆ.
ಈ ಬಗ್ಗೆ ಬೆಂಗಳೂರಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. "ಪುನೀತ್ಗೆ ಕರ್ನಾಟಕ ರತ್ನ ನೀಡುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದ್ದಾರೆ. ಶಿಷ್ಟಾಚಾರದಂತೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಬೇಕಿತ್ತು. ಅವರು ಬಂದು ಕರೆದಿದ್ದರೆ ಕಾರ್ಯಕ್ರಮಕ್ಕೆ ಹೋಗೋಣ ಅಂತಿದ್ದೆ. ನನ್ನನ್ನು ಆಹ್ವಾನಿಸದಿರುವುದರಿಂದ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ" ಎಂದು ಹೇಳಿದ್ದಾರೆ.
"ಇಂದು ಕರ್ನಾಟಕ ಏಕೀಕರಣವಾದ ದಿನದ ನೆನಪಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ರಾಜ್ಯಾದ್ಯಂತ ಆಚರಣೆ ಮಾಡುತ್ತಿದ್ದೇವೆ. ಇಂದು ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರು ನಟನೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಹೊಂದಿದ್ದರು. ಕರ್ನಾಟಕದಲ್ಲಿ ಈ ರೀತಿಯ ಖ್ಯಾತಿ ಪಡೆದ ನಟ ಬೇರೊಬ್ಬರಿಲ್ಲ. ಪುನೀತ್ ಅವರು ನಿಧನರಾದಾಗ ಇಡೀ ನಾಡಿನ ಜನ ತಮ್ಮದೇ ಮನೆಯ ಒಬ್ಬ ಸದಸ್ಯನನ್ನು ಕಳೆದುಕೊಂಡವರಂತೆ ದುಃಖವನ್ನು ವ್ಯಕ್ತಮಾಡಿದ್ದಾರೆ. ಇಂಥವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಸಂತೋಷದ ವಿಚಾರ, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ನನ್ನ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ" ಎಂದರು.
ದಿವಂಗತ ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ ನ. 1ರಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ರಜನಿಕಾಂತ್, ಜೂನಿಯರ್ ಎನ್ಟಿಆರ್ ಆಗಮಿಸಲಿದ್ದಾರೆ.
ವಿಧಾನಸೌಧ ಮುಂಭಾಗದ ಮೆಟ್ಟಿಲ ಮೇಲೆ ಸಂಜೆ 4 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸುತ್ತಿರುವುದಾಗಿ ನಟ ರಜನಿಕಾಂತ್ ತಿಳಿಸಿದ್ದಾರೆ. ಇತ್ತ ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ಅವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿರುವುದಾಗಿ ಆಯೋಜಕರು ತಿಳಿಸಿದ್ದಾರೆ. ಪುನೀತ್ ಗೆ ನೀಡುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿಯು ಬೆಳ್ಳಿಯ ಸ್ಮರಣಿಕೆ, ಜೊತೆಗೆ, 50 ಗ್ರಾಂ ಚಿನ್ನದ ಪದಕ ಇರಲಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರು, ಶಾಸಕರು ಕಾರ್ಯಕ್ರಮಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ರಾಜಭವನದಿಂದ ಕೆಆರ್ ಸರ್ಕಲ್ ಕಡೆಗೆ ಹೋಗುವ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಪಾದಚಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.