ರಾಜ್ಯ ರಾಜಕಾರಣದ ಅಚ್ಚರಿಗಳನ್ನು ಮನೆಯಂಗಳದ ಮಾತುಕತೆಯಲ್ಲಿ ತೆರೆದಿಟ್ಟರು ಮಾಜಿ ಪ್ರಧಾನಿ
Recommended Video
ಬೆಂಗಳೂರು, ನವೆಂಬರ್ 18: "ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ರಾಜ್ಯ ಕಂಡ ಅತ್ಯಂತ ಪ್ರತಿಭಾವಂತ ಮಾತ್ರವಲ್ಲ, ಪ್ರಾಮಾಣಿಕ ಕೂಡಾ. ರೈಲ್ವೆ ಮಂಡಳಿಯ ಅಧ್ಯಕ್ಷರೊಡನೆ ಇದ್ದ ಭಿನ್ನಾಪ್ರಾಯದಿಂದ ಅಂದಿನ ರೈಲ್ವೆ ಸಚಿವ ಕೆಂಗಲ್ ಹನುಂತಯ್ಯ ಅವರು ಇಂದಿರಾಗಾಂಧಿ ಅವರ ಸಂಪುಟದಿಂದ ಹೊರ ಬರುವ ಪ್ರಸಂಗ ಎದುರಾಯಿತು" ಎಂದು ತಮ್ಮ ರಾಜ್ಯ ರಾಜಕಾರಣದ ನೆನಪುಗಳನ್ನು ತೆರೆದಿಟ್ಟರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದ ತಿಂಗಳ ಅತಿಥಿಯಾಗಿ ಪಾಲ್ಗೊಂಡು, ಮಾತನಾಡಿದ ಅವರು, ತಮ್ಮ ಈ ಮುಜುಗರವನ್ನು ತಪ್ಪಿಸಿಕೊಳ್ಳಲು ಹನುಮಂತಯ್ಯ ಅವರು ರಾಜ್ಯ ರಾಜಕೀಯ ಹದೆಗೆಟ್ಟಿದೆ. ಅದಕ್ಕಾಗಿ ತಾವು ರಾಜ್ಯ ರಾಜಕಾರಣಕ್ಕೆ ಮರುಳುತ್ತಿರುವುದಾಗಿ ಪ್ರಕಟಿಸಿದರು.
ವ್ಯಕ್ತಿಚಿತ್ರ: ಕರ್ನಾಟಕದ 'ಕಿಂಗ್ ಮೇಕರ್' ದೇವೇಗೌಡ
ಜಾತಿ ಬಲವಿಲ್ಲದ ಅರಸು ಅವರು ಪ್ರಬಲ ಕೋಮಿನ ನಾಯಕನ ಆಗಮನದಿಂದ ತಮ್ಮ ಅಧಿಕಾರ ಮೊಟುಕುಗೊಳ್ಳುತ್ತದೆ ಎಂದು ಭಯಗೊಂಡು, ಪಕ್ಷದ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಲು ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಯ ಎಂಜಿನಿಯರ್ ಗಳಿಗೆ ಸೂಚಿಸಿದರು. ಮೂಲತಃ ಪ್ರಾಮಾಣಿಕನಾದರೂ ತಮ್ಮ ಈ ಕ್ರಮದಿಂದ ಅರಸು ಅವರು ಭ್ರಷ್ಟ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಳ್ಳಬೇಕಾಯಿತು.
ಆ ಸಾಲ ತೀರಿಸಲು ಸಹಾಯ ಮಾಡುತ್ತೇನೆ ಎಂದಿದ್ದರು ಅರಸು
ನಾನು ಪ್ರತಿಪಕ್ಷ ನಾಯಕನಾಗಿದ್ದಾಗ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಅಧಿಕಾರಿಗಳ ಗ್ಯಾಲರಿಯತ್ತ ತೆರಳಿ, ಸದನದಲ್ಲಿ ತಮ್ಮ ವಿರುದ್ಧ ಟೀಕಾ ಪ್ರಹಾರ ಮಾಡಲು ದೇವೇಗೌಡ ಅವರಿಗೆ ಮಾಹಿತಿ ಒದಗಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದರು. ಒಂದು ದಿನ ಸದನದಲ್ಲಿ ಅರಸು ಅವರ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದ ಬಗ್ಗೆ ಪ್ರಸ್ತಾಪಿಸಿದ್ದೆ. ಅದೇ ದಿನ ತಡರಾತ್ರಿ ಅರಸು ಅವರು ನನಗೆ ದೂರವಾಣಿ ಮಾಡಿ, ದಿಸ್ ಈಸ್ ಅರಸು ಸ್ಪೀಕಿಂಗ್ ! ತಮ್ಮನ್ನು ನೋಡೋಣವಾಗುತ್ತೋ ಎಂದರು. ನನ್ನಲ್ಲಿ ಕಾರಿಲ್ಲ ಎಂದು ಉತ್ತರಿಸಿದ ಕೂಡಲೇ ಅರಸು ಅವರು ತಮ್ಮ ಕಾರನ್ನೇ ಕಳುಹಿಸಿದ್ದರು. ನನ್ನನ್ನು ಭ್ರಷ್ಟ ಎಂದು ಕರೆಯಬೇಡ. ಲೇ ಮೂರ್ಖ! ನಿನಗೆ ನಾಲ್ಕು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನೀನು ಒಂದು ಲಕ್ಷ ಮೂವತ್ತು ಸಾವಿರ ರುಪಾಯಿ ಸಾಲ ಮಾಡಿದ್ದೀಯ ಎಂದು ನನ್ನಲ್ಲಿ ಗುಪ್ತಚರ ಇಲಾಖೆಯ ವರದಿ ಇದೆ. ಆ ಸಾಲವನ್ನು ತೀರಿಸಲು ಸಹಾಯ ಮಾಡುತ್ತೇನೆ ಎಂದಿದ್ದರು.
ಅಖಂಡತೆಯ ಯೋಗ, ರಾಜ್ಯ ವಿಭಜನೆಯನ್ನು ಬಗ್ಗುಬಡಿದ ಅರಸು ಪ್ರಯೋಗ
ಈಗಿನವರಿಗೆ ರಾಜಕಾರಣದಲ್ಲಿ ಆತುರ ಜಾಸ್ತಿ
ಆ ಆಮಿಷವನ್ನು ನಾನು ನಯವಾಗಿ ತಿರಸ್ಕರಿಸಿದಾಗ, ನಾಳಿನ ಚರ್ಚೆಯ ವಿಷಯವನ್ನು ಇಂದೇ ಹೇಳಿ ಬಿಡು. ಕನಿಷ್ಠ ಪಕ್ಷ ಸಿದ್ಧತೆಯನ್ನಾದರೂ ಮಾಡಿಕೊಂಡು ಬರುತ್ತೇನೆ ಎಂದದ್ದು ಇಂದೂ ನನ್ನ ಕಿವಿಯಲ್ಲಿ ಸುಳಿದಾಡುತ್ತಿದೆ. ಈಗ ರಾಜಕೀಯಕ್ಕೆ ಬರುವವರಿಗೆ ಸಲಹೆ ನೀಡಿದ ಅವರು, ನನಗೆ ಇಪ್ಪತ್ತು ವರ್ಷ ವಯೋಮಾನ ಇರುವಾಗಲೇ ಸಾರ್ವತ್ರಿಕ ಜೀವನ ಪ್ರವೇಶಿಸಿದೆ. ಆರೂವರೆ ದಶಕಗಳಷ್ಟು ಸುದೀರ್ಘ ಸಕ್ರಿಯ ರಾಜಕಾರಣದಲ್ಲಿದ್ದರೂ ಅಧಿಕಾರ ಅನುಭವಿಸಿದ ಅವಧಿ ಮಾತ್ರ ನಗಣ್ಯ. ಪ್ರಧಾನಮಂತ್ರಿಯಾಗಿ ಹನ್ನೊಂದು ತಿಂಗಳು, ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷ, ಸಚಿವನಾಗಿ ಐದು ವರ್ಷ. ಅದರಲ್ಲಿ ಮೂರು ಬಾರಿ ರಾಜೀನಾಮೆ ಸಲ್ಲಿಸಿದ್ದೆ. ಮೊದಲ ಬಾರಿಗೆ 1962ರಲ್ಲಿ ಶಾಸಕನಾಗಿ ಆಯ್ಕೆಯಾದ ಒಂಬತ್ತು ವರ್ಷಗಳ ನಂತರ ಪ್ರತಿಪಕ್ಷ ನಾಯಕನ ಸ್ಥಾನ ದೊರೆಯಿತು. ಬರೋಬ್ಬರಿ ಇಪ್ಪತ್ತೊಂದು ವರ್ಷಗಳ ನಂತರ ಮಂತ್ರಿಯಾದೆ. ಸುಮಾರು ಮೂವತ್ತೆರಡು ವರ್ಷಗಳ ನಂತರ ಮುಖ್ಯಮಂತ್ರಿಯಾದೆ ಹಾಗೂ ಮೂವತ್ನಾಲ್ಕು ವರ್ಷಗಳ ನಂತರ ಪ್ರಧಾನಿಯಾದೆ ಎಂದರು. ಆದರೆ ಇಂದು ಕೆಲವರು ಶಾಸನ ಸಭೆಗೆ ಅಥವಾ ಸಂಸತ್ತಿಗೆ ಆಯ್ಕೆಯಾದ ಮೊದಲ ದಿನವೇ ಸಚಿವರಾಗಲು ಬಯಸುತ್ತಾರೆ. ಲೋಕಸಭೆಯ ಚುನಾವಣೆಗೆ ಇರಲಿ ಪಾಲಿಕೆಯ ಚುನಾವಣೆಗೂ ಕೋಟಿಗಟ್ಟಲೆ ಖರ್ಚು ಮಾಡುತ್ತಾರೆ. ವೆಚ್ಚ ಮಾಡಿದ್ದನ್ನು ಮತ್ತೆ ಗಳಿಸಲು ಪ್ರಯತ್ನಿಸುತ್ತಾರೆ ಎಂದು ವಿಷಾದಿಸಿದರು.
ದೆಹಲಿ ಮಾಧ್ಯಮಗಳು ಮಾತ್ರ ನನ್ನನ್ನು ಕೊಲ್ಲಲು ಹೊರಟವು
ನಾನು ಯಾರ ಭವಿಷ್ಯವನ್ನೂ ಹಾಳು ಮಾಡಿಲ್ಲ. ಆದರೆ ದೆಹಲಿ ಮಾಧ್ಯಮಗಳು ಮಾತ್ರ ತಮ್ಮ ಲೇಖನ ಮತ್ತು ಅಂಕಣಗಳಲ್ಲಿ ನನ್ನನ್ನು ಕೊಲ್ಲಲು ಹೊರಟವು. ಜನತಾ ಪಕ್ಷದ ಅಂದಿನ ರಾಷ್ಟ್ರೀಯ ಅಧ್ಯಕ್ಷ ಎಸ್. ಚದ್ರಶೇಖರ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಷ್ಟ್ರ ರಾಜಕಾರಣದಲ್ಲಿದ್ದ ರಾಮಕೃಷ್ಣ ಹೆಗಡೆ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಲು ಸಹಕರಿಸಿದ್ದು ಮಾತ್ರವಲ್ಲ, ಜಾತಿ ಬೆಂಬಲವೂ ಇಲ್ಲದ ಹಾಗೂ ಯಾವುದೇ ನೆಲೆ ಇಲ್ಲದ ಹೆಗಡೆ ಅವರಿಗೆ ರಾಜ್ಯ ರಾಜಕಾರಣದಲ್ಲಿ ನೆಲೆ ದೊರಕಿಸಿಕೊಡಲು ಬಹು ಅಂತರದಿಂದ ಗೆದ್ದಿದ್ದ ಜನತಾ ಪಕ್ಷದ ಅಭ್ಯರ್ಥಿ ಪಿ.ಜಿ.ಆರ್.ಸಿಂಧ್ಯಾ ಅವರನ್ನು ಮನವೊಲಿಸಿ, ಹೆಗಡೆ ಅವರನ್ನು ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲಿಸುವಲ್ಲಿ ನನ್ನ ಶ್ರಮ ಇತ್ತು ಎಂದು ದೇವೇಗೌಡ ಅವರು ವಿವರಿಸಿದರು. ಭಾರತೀಯ ಜನತಾ ಪಕ್ಷವನ್ನು ತೊರೆದು ನಮ್ಮ ಪಕ್ಷಕ್ಕೆ ಬರಲು ಸಿದ್ಧವಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಆ ಪಕ್ಷದಲ್ಲಿಯೇ ನಿಮಗೆ ಉತ್ತಮ ಭವಿಷ್ಯವಿದೆ, ತಾಳ್ಮೆಯಿಂದಿರಿ ಎಂದು ಸಲಹೆ ಇತ್ತವನು ನಾನು ಎಂದು ಹೇಳಿದ ಅವರು, ರಾಜಕೀಯದಲ್ಲಿ ತಾಳ್ಮೆ ಇದ್ದವರು ಮಾತ್ರ ಗಟ್ಟಿಯಾಗಿ ಉಳಿಯುತ್ತಾರೆ ಎಂಬ ಅಂಶವನ್ನು ಹೊರಗೆಡವಿದರು.
ಪ್ರತಿಯೊಬ್ಬ ಮನುಷ್ಯ ಕೂಡಾ ಒಂದು ಬೀಗವಿದ್ದಂತೆ : ರಾಮಕೃಷ್ಣ ಹೆಗಡೆ
ಅನಾಯಾಸ ಮರಣ ಬೇಕು
ನಾನು ಯಾವ ಜಾತಿಯ ವಿರೋಧಿಯೂ ಅಲ್ಲ. ಯಾವ ಧರ್ಮದ ವಿರೋಧಿಯೂ ಅಲ್ಲ. ನನ್ನ ಬೆಳವಣಿಗೆಯನ್ನು ಸಹಿಸದವರು ಅವರ ವಿರೋಧಿ-ಇವರ ವಿರೋಧಿ ಎಂದು ಹುಯಿಲೆಬ್ಬಿಸಿದ್ದಾರೆ. ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಎ.ಜಿ.ರಾಮಚಂದ್ರರಾಯರು. ಶೃಂಗೇರಿ ಪೀಠದ ಪರಮಭಕ್ತ ನಾನು ಎಂದು ಹೇಳಿದ ದೇವೇಗೌಡರು, ಎಲ್ಲ ಧರ್ಮದವರನ್ನೂ ಸಮಾನವಾಗಿ ಗೌರವಿಸುವ ಸಂಸ್ಕಾರ ನನ್ನಲ್ಲಿದೆ. ಯಾರಿಗೂ ಮೋಸ ಮಾಡಿಲ್ಲ. ಯಾರಿಗೂ ವಂಚನೆ ಮಾಡಿಲ್ಲ. ಆದ ಕಾರಣ ನನಗೆ ಅನಾಯಾಸವಾದ ಮರಣ ಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿ ಸಭಿಕರನ್ನು ಕೆಲ ಕಾಲ ಮೌನಕ್ಕೆ ಶರಣಾಗುವಂತೆ ಮಾಡಿದರು.