ಕರ್ನಾಟಕದ ಜನಪ್ರಿಯ ನಾಯಕ ಅನಂತ್ ಕುಮಾರ್ (59) ವಿಧಿವಶ
Recommended Video

ಬೆಂಗಳೂರು, ನವೆಂಬರ್ 12 : ಕರ್ನಾಟಕದ ಜನಪ್ರಿಯ ರಾಜಕಾರಣಿ, ಕೇಂದ್ರ ಸಚಿವ, ಬಿಜೆಪಿಯ ಪ್ರಮುಖ ನಾಯಕ ಅನಂತ್ ಕುಮಾರ್ (59) ಅವರು ನವೆಂಬರ್ 12ರ ಬೆಳಗಿನ ಜಾವ ವಿಧಿವಶರಾಗಿದ್ದಾರೆ.
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು, ಕಡೆಯ ಹಂತದಲ್ಲಿ ಲಂಡನ್ನಿಗೆ ಹೋಗಿ ಚಿಕಿತ್ಸೆ ಪಡೆದು, ಸಾಕಷ್ಟು ಹೋರಾಟ ನಡೆಸಿದರೂ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಸೋಮವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರು ನಗರದ ಶಂಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನವೇ ಕ್ಯಾನ್ಸರ್ ಉಲ್ಬಣಗೊಂಡಿತ್ತು. ಸಂದರ್ಶನ ನೀಡಲು ಕಷ್ಟವಾಗುತ್ತಿದ್ದರೂ, ನಗುಮೊಗದಿಂದಲೇ ಮಾತನಾಡುತ್ತಿದ್ದರು. ತಮ್ಮೆಲ್ಲ ನೋವನ್ನು ಮರೆತು ಪ್ರಚಾರದಲ್ಲಿ ತೊಡಗಿದ್ದರು. ಆದರೆ, ಅಷ್ಟರಲ್ಲಾಗಲೇ ಕ್ಯಾನ್ಸರ್ ಕಡೆಯ ಹಂತ ತಲುಪಿಬಿಟ್ಟಿತ್ತು.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ, ಹಾಗು ಸಂಸದೀಯ ವ್ಯವಹಾರಗಳ ಖಾತೆಯ ಸಚಿವರಾಗಿದ್ದ ಅವರು ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಗೆದ್ದಿದ್ದರು. ಅವರು ಪತ್ನಿ ಅದಮ್ಯ ಚೇತನ ಸಂಸ್ಥೆಯ ರೂವಾರಿ ಡಾ. ತೇಜಸ್ವಿನಿ, ಮಕ್ಕಳಾದ ಐಶ್ವರ್ಯ, ವಿಜೇತಾ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ನರೇಂದ್ರ ಮೋದಿ ಆಗಮನ
ಅನಂತ್ ಕುಮಾರ್ ಅವರು ದೇಹವನ್ನು ಜಯನಗರದಲ್ಲಿರುವ ಅವರ ನಿವಾರ 'ಸುಮೇರು'ಗೆ ತೆಗೆದುಕೊಂಡು ಹೋಗಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ದರ್ಶನಕ್ಕೆ 10.30ರ ಸುಮಾರಿಗೆ ಬರಲಿದ್ದಾರೆ.
ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಬೆಳಿಗ್ಗೆ 8 ಗಂಟೆಗೆ ಅನಂತ್ ಕುಮಾರ್ ಅವರ ದೇಹವನ್ನು ಸಾರ್ವಜನಿಕರಿಗಾಗಿ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ. ದೇಶದ ಇತರ ನಾಯಕರು ಕೂಡ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆಯಿದೆ.
ಅಂತಿಮ ಸಂಸ್ಕಾರ : ಸೋಮವಾರ ಸಂಜೆ ಅಥವಾ ಮಂಗಳವಾರ ಬೆಳಗ್ಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅನಂತ್ ಕುಮಾರ್ ಅವರ ಅಂತಿಮ ಸಂಸ್ಕಾರ ನಡೆಸಲಾಗುವುದು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಬೆಂಗಳೂರು ದಕ್ಷಿಣ ಲೋಕಸಭೆಯಿಂದ ಆಯ್ಕೆ
ಅನಂತ್ ಕುಮಾರ್ ಅವರು ಸತತವಾಗಿ ಆರು ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಸೋಲೆಂಬುದು ಅವರ ಹತ್ತಿರವೇ ಸುಳಿದಿರಲಿಲ್ಲ. ಕಳೆದ ಚುನಾವಣೆಯಲ್ಲಿ ನಂದನ್ ನಿಲೇಕಣಿ ಅವರಿಂದ ತುರುಸಿನ ಸ್ಪರ್ಧೆ ಎದುರಿಸಿದ್ದರೂ ಅವರು ಜಯಶಾಲಿಯಾಗಿದ್ದರು.

ನಗುಮೊಗದ ನಾಯಕ ಅನಂತ್
ಯಾವಾಗಲೂ ನಗುಮೊಗರಾಗಿಯೇ ಇರುತ್ತಿದ್ದ ಅವರು ಜನಸಂಪರ್ಕಕ್ಕೆ ಕೂಡ ಸುಲಭವಾಗಿ ಸಿಗುತ್ತಿದ್ದರು. ಪತ್ರಕರ್ತರೊಡನೆ ಹರಟೆಗೆ ಕುಳಿತರು ಕೂಡ ಗಂಟೆಗಟ್ಟಲೆ, ಯಾವುದೇ ವಿಷಯದ ಬಗ್ಗೆ ನಿರರ್ಗಳವಾಗಿ ಹರಟೆ ಹೊಡೆಯುತ್ತಿದ್ದರು. ಆದರೆ, ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿಯೇ ಕ್ಯಾನ್ಸರ್ ಉಲ್ಬಣವಾಯಿತು.

ಪರಿಸರ ಪ್ರೇಮಿ ಅನಂತ್ ಕುಮಾರ್
ಅಪಾರ ಪರಿಸರ ಪ್ರೇಮಿಯಾಗಿದ್ದ ಅನಂತ್ ಕುಮಾರ್ ಅವರು ತಮ್ಮ ಸಂಸ್ಥೆ ಅದಮ್ಯ ಚೇತನದ ಮೂಲಕ ಬೆಂಗಳೂರಿನಲ್ಲಿ ಕೋಟಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಪ್ರತಿ ಭಾನುವಾರ ಬೆಳಿಗ್ಗೆ ಬೆಂಗಳೂರಿನ ಒಂದು ಬಡಾವಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಅದರಲ್ಲಿ ಸ್ವತಃ ಅವರೇ ಭಾಗವಹಿಸುತ್ತಿದ್ದರು.

ಕನಸಾಗಿಯೇ ಉಳಿದ ಮುಖ್ಯಮಂತ್ರಿ ಹುದ್ದೆ
ಮಹತ್ವಾಕಾಂಕ್ಷಿಯಾಗಿದ್ದ ಅನಂತ್ ಕುಮಾರ್ ಅವರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಕನಸೂ ಇತ್ತು. ಇದಕ್ಕೆ ಅವರು ಹಲವಾರು ಬಾರಿ ಪರೋಕ್ಷವಾಗಿ ಪ್ರಯತ್ನ ನಡೆಸಿದ್ದರು. ಆದರೆ, ಕೆಲ ಶಕ್ತಿಗಳು ಅದಕ್ಕೆ ಅವಕಾಶ ನೀಡಲಿಲ್ಲ. ಅನಂತ್ ಅವರು ಕೇಂದ್ರ ರಾಜಕಾರಣಕ್ಕೆ ಸೀಮಿತವಾಗುವಂತೆ ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ವಿಧಿ ಎಲ್ಲಕ್ಕಿಂತ ದೊಡ್ಡ ಮತ್ತು ಕ್ರೂರ ಆಟವಾಡಿದೆ. ಕಡೆಗೂ ಮುಖ್ಯಮಂತ್ರಿಯಾಗುವ ಕನಸು ಕನಸಾಗಿಯೇ ಉಳಿಯಿತು.

ಗೌರವಾರ್ಥ ಶಾಲಾಕಾಲೇಜುಗಳಿಗೆ ರಜಾ
ಅನಂತ್ ಕುಮಾರ್ ಅವರ ಗೌರವಾರ್ಥ ಕರ್ನಾಟಕದ ಎಲ್ಲಾ ಶಾಲಾ ಕಾಲೇಜುಗಳಿಗೆ ಸೋಮವಾರ ರಜಾ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ 3 ದಿನ ಶೋಕಾಚರಣೆ ಘೋಷಿಸಲಾಗಿದ್ದು, ಸರಕಾರಿ ಕಚೇರಿಗಳು ಕೂಡ ಸೋಮವಾರ ಅನಂತ್ ಅವರಿಗೆ ಗೌರವ ಸೂಚಕವಾಗಿ ಬಂದ್ ಆಗಿರಲಿವೆ.












Click it and Unblock the Notifications