ತಪ್ಪಾಗಿದ್ದರೆ ಕ್ಷಮಿಸಿ, ಇಲ್ಲವೇ ಅನುಭವಿಸಲಿ: ರಮೇಶ್ ಕುಮಾರ್
ಬೆಂಗಳೂರು, ಜುಲೈ 25: ರಾಜೀನಾಮೆ ನೀಡಿ ಸರ್ಕಾರದ ಪತನಕ್ಕೆ ಕಾರಣವಾದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಕುರಿತು ಸ್ಪೀಕರ್ ರಮೇಶ್ ಕುಮಾರ್ ಅವರು ಇಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಎರಡೂ ಕಡೆಯ ವಕೀಲರ ವಾದಗಳನ್ನು ಆಲಿಸಿರುವ ಸ್ಪೀಕರ್ ಅಂತಿಮ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ. ರಾಜೀನಾಮೆ ಅಂಗೀಕಾರ ಆಗುತ್ತದೆಯೋ ಅಥವಾ ಅನರ್ಹತೆಯ ಬೇಡಿಕೆಯನ್ನು ಅವರು ಪರಿಗಣಿಸುತ್ತಾರೆಯೋ ಎನ್ನುವುದು ಈಗಿರುವ ಕುತೂಹಲ.
ನಿಗದಿತ ಕಾಲಮಿತಿಯೊಳಗೆ ಪ್ರಕರಣ ಇತ್ಯರ್ಥ ಮಾಡುವಂತೆ ಸುಪ್ರೀಂಕೋರ್ಟ್, ಸ್ಪೀಕರ್ ಅವರಿಗೆ ಸಲಹೆ ನೀಡಿತ್ತು. ಹೀಗಾಗಿ ಅವರು ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದು ವೇಳೆ ರಾಜೀನಾಮೆ ಅಂಗೀಕರಿಸುವ ಬದಲು ಪಕ್ಷದ ನಾಯಕರ ದೂರಿನಂತೆ ಅನರ್ಹಗೊಳಿಸಿ ಆದೇಶಿಸಿದರೆ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸಲು ಅತೃಪ್ತ ಶಾಸಕರು ತೀರ್ಮಾನಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸ್ಪೀಕರ್ ರಮೇಶ್ ಕುಮಾರ್ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡಿದ್ದಾರೆ.
ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಅವರು, 'ನನ್ನ ತೀರ್ಪು ತಪ್ಪು ಆಗಿದ್ದಲ್ಲಿ ಕ್ಷಮಿಸಿ. ಸರಿಯಾಗಿದ್ದರೆ ಅನುಭವಿಸಬೇಕಾಗುತ್ತದೆ. ನನ್ನನ್ನು ನಂಬಿರುವ ಕರ್ನಾಟಕದ ಎಲ್ಲಾ ಜನತೆಗೆ ಕೃತಜ್ಞತೆಗಳು' ಎಂದು ಹೇಳಿದ್ದಾರೆ.












Click it and Unblock the Notifications